Atiq Ahmad Case: ಪಾಟ್ನಾದ ಜಾಮಾ ಮಸೀದಿ ಬಳಿ ಅತಿಕ್ ಅಹ್ಮದ್ ಪರ ಘೋಷಣೆ
ಪಾಟ್ನಾ ಏಪ್ರಿಲ್ 21: ಇತ್ತೀಚೆಗೆ ಹತ್ಯೆಗೀಡಾದ ಅತೀಕ್ ಅಹ್ಮದ್ ಪರ ಘೋಷಣೆಗಳು ಪಾಟ್ನಾದಲ್ಲಿ ಕೇಳಿಬಂದಿವೆ. ಬಿಹಾರದ ರಾಜಧಾನಿ ಪಾಟ್ನಾದ ಜಾಮಾ ಮಸೀದಿ ಬಳಿ ಅತಿಕ್ ಅಹ್ಮದ್ ಅಮರ್ ರಹೇ ಘೋಷಣೆಗಳನ್ನು ಕೂಗಲಾಗಿದೆ. ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ರಾಯಿಸ್ ಅನ್ಸಾರಿ (ರೈಸ್ ಗಜ್ನಬಿ) ಎಂಬ ವ್ಯಕ್ತಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಹೇಳಲಾಗುತ್ತಿದೆ.
ಪಾಟ್ನಾ ಜಂಕ್ಷನ್ ಬಳಿ ರಾಯಿಸ್ ಅನ್ಸಾರಿ ಅವರ ಅಂಗಡಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಯಿಸ್ ಅನ್ಸಾರಿ ಅವರು ಅತೀಕ್ ಅಹ್ಮದ್ ಮತ್ತು ಅಶ್ರಫ್ ಅಹ್ಮದ್ ಅವರ ಹುತಾತ್ಮತೆಯನ್ನು ಅಲ್ಲಾ ಸ್ವೀಕರಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತಿಕ್ ಮತ್ತು ಅಶ್ರಫ್ ಅವರನ್ನು ಯೋಜನೆ ಮೂಲಕ ಕೊಂದಿದ್ದಾರೆ. ಇದೊಂದು ವ್ಯವಸ್ಥಿತ ಹತ್ಯೆ ಎಂದು ರಾಯಿಸ್ ಹೇಳುತ್ತಾ ಘೋಷಣೆಗಳನ್ನು ಕೂಗಿದ್ದಾರೆ. ಅತೀಕ್ ಅಹ್ಮದ್ ಹುತಾತ್ಮರಾಗಿದ್ದಾರೆ. ಅವರು ಇಡೀ ಪ್ರಪಂಚದ ದೃಷ್ಟಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ರಾಯಿಸ್ ಹೇಳಿದ್ದಾರೆ.
ಏಪ್ರಿಲ್ 15 ರ ರಾತ್ರಿ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅಹ್ಮದ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಗುತ್ತಿತ್ತು. ಆಗ ಪತ್ರಕರ್ತರು ಅವರನ್ನು ಪ್ರಶ್ನಿಸಲು ನಿಲ್ಲಿಸಿದ್ದಾರೆ. ಈ ನಡುವೆ ಮೂವರು ದುಷ್ಕರ್ಮಿಗಳು ಪೊಲೀಸರ ರಕ್ಷಣೆಯಲ್ಲಿದ್ದ ಅತೀಕ್ ಮತ್ತು ಅಶ್ರಫ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾರೆ. ಮಾಧ್ಯಮದವರಂತೆ ಬಂದಿದ್ದ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಸಹೋದರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಕಾನ್ ಸ್ಟೇಬಲ್ ಮಾನ್ಸಿಂಗ್ ಕೂಡ ಗಾಯಗೊಂಡಿದ್ದಾರೆ.
ದಾಳಿಕೋರರನ್ನು ಅರುಣ್ ಮೌರ್ಯ, ಲವಲೇಶ್ ತಿವಾರಿ ಮತ್ತು ಸನ್ನಿ ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಮೂವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಲವಲೇಶ್ ಬಂಡಾ ನಿವಾಸಿ, ಅರುಣ್ ಕಾಸ್ಗಂಜ್ ನಿವಾಸಿ ಮತ್ತು ಸನ್ನಿ ಹಮೀರ್ಪುರ ನಿವಾಸಿ. ಇವರಿಂದ ಶಸ್ತ್ರಾಸ್ತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಮೂವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿ ನೈನಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇದೇ ಜೈಲಿನಲ್ಲಿ ಅತೀಕ್ ಪುತ್ರ ಅಲಿ ಕೂಡ ಇದ್ದಾನೆ. ಅತೀಕ್ ಮತ್ತು ಅಶ್ರಫ್ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆಯ ನಂತರ, ಇಬ್ಬರನ್ನೂ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಕಸರಿ-ಮಸಾರಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಇಬ್ಬರ ಸಮಾಧಿಗಳನ್ನು ಅತೀಕ್ ಅವರ ಮಗ ಅಸದ್ ಸಮಾಧಿ ಬಳಿ ಮಾಡಲಾಗಿದೆ.
ಅತೀಕ್ ಅವರ ಸೋದರ ಮಾವ ಹಾಗೂ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅತೀಕ್ ಅವರ ಇಬ್ಬರು ಕಿರಿಯ ಪುತ್ರರನ್ನು ಮಕ್ಕಳ ಸುಧಾರಣಾ ಮನೆಯಿಂದ ಕರೆತಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಇದೇ ಸಮಯದಲ್ಲಿ, ಅಶ್ರಫ್ ಅವರ ಇಬ್ಬರು ಹೆಣ್ಣುಮಕ್ಕಳು ಸಹ ಸ್ಮಶಾನದಲ್ಲಿ ಹಾಜರಿದ್ದರು. ಆಯ್ದ ಕೆಲವು ಸಂಬಂಧಿಕರಿಗೆ ಮಾತ್ರ ಸ್ಮಶಾನಕ್ಕೆ ಪ್ರವೇಶಿಸಲು ಅವಕಾಶವಿತ್ತು.

ಇದಲ್ಲದೇ ಸ್ಮಶಾನದಿಂದ 300 ಮೀಟರ್ ದೂರದಲ್ಲಿ ಎಲ್ಲ ಜನರನ್ನು ನಿಲ್ಲಿಸಲಾಗಿತ್ತು. ಮಾಧ್ಯಮದವರಿಗೆ ಸ್ಮಶಾನದ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಒಳಗಡೆ ಬಿಡಲಾದ ಮಾಧ್ಯಮದವರ ಹೆಸರು, ಮೊಬೈಲ್ ನಂಬರ್ ಗಳನ್ನೂ ನೋಟ್ ಮಾಡಿಕೊಳ್ಳಳಾಗಿತ್ತು. ಈ ಸಂದರ್ಭದಲ್ಲಿ ಇಡೀ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಹತ್ಯೆ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಯುಪಿಯಲ್ಲಿ ರಕ್ಷಣೆಯ ಬಗ್ಗೆ ಧ್ವನಿ ಎತ್ತುವಂತೆ ಮಾಡಿದೆ.
ಅತೀಕ್ ಅಹ್ಮದ್ ಹತ್ಯೆಯ ನಂತರ, ಜೆಎಪಿ ಅಧ್ಯಕ್ಷ ಪಪ್ಪು ಯಾದವ್, ಸಿಎಂ ಯೋಗಿಯನ್ನು ಗುರಿಯಾಗಿಸಿಕೊಂಡು ಯುಪಿಯನ್ನು ಜಂಗಲ್ ರಾಜ್ ಎಂದು ಕರೆದಿದ್ದಾರೆ. ತೇಜಸ್ವಿ ಯಾದವ್ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೀಗ ಶುಕ್ರವಾರ ಅತಿಕ್ ಅಹ್ಮದ್ ಅವರನ್ನು ಬೆಂಬಲಿಸಿ ಘೋಷಣೆ ಕೂಗಿರುವುದು ರಾಜಕೀಯ ವಾಗ್ದಾಳಿ ಆರಂಭವಾಗಿದೆ.












Click it and Unblock the Notifications