3ರಾಜ್ಯಗಳಲ್ಲಿ ಇಂದು ಉಪಚುನಾವಣೆ, ಕಣದಲ್ಲಿ ಮನೋಹರ್ ಪರಿಕ್ಕರ್
ನವದೆಹಲಿ, ಆಗಸ್ಟ್ 23: ಗೋವಾದ ಎರಡು, ಆಂಧ್ರ ಪ್ರದೇಶ ಮತ್ತು ದೆಹಲಿಯ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ದೆಹಲಿಯ ಬವಾನ, ಆಂಧ್ರ ಪ್ರದೇಶದ ನಂದ್ಯಾಲ್, ಗೋವಾದ ಪಣಜಿ ಮತ್ತು ವಲ್ಪೋಯಿ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಬವಾನ ಕ್ಷೇತ್ರದ ಎಎಪಿ ಶಾಸಕ ವೇದ ಪ್ರಕಾಶ್ ಕಳೆದ ಮೇನಲ್ಲಿ ಬಿಜೆಪಿ ಸೇರಿದ್ದರಿಂದ ಇಲ್ಲಿ ಚುನಾವಣೆ ನಡೆಯುತ್ತಿದೆ.
ಸಮೀಕ್ಷೆ: ಚುನಾವಣೆ ನಡೆದರೆ ಎನ್ ಡಿಎಗೆ 349 ಸ್ಥಾನ!
ಇನ್ನು ಗೋವಾದ ಪಣಜಿಯಲ್ಲಿ ಹಾಲಿ ಶಾಸಕ ಸಿದ್ಧಾರ್ಥ್ ಕುನ್ಕೊಲಿಂಕರ್ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗಾಗಿ ಈ ಸೀಟು ತೊರೆದಿದ್ದಾರೆ. ಇಲ್ಲಿ ಮನೋಹರ್ ಪರಿಕ್ಕರ್ ಕಣದಲ್ಲಿದ್ದಾರೆ. ಅವರು ಸದ್ಯ ಲೋಕಸಭಾ ಸದಸ್ಯರಾಗಿರುವುದರಿಂದ ಶಾಸನಸಭೆ ಪ್ರವೇಶಿಸಲೇಬೇಕಾಗಿದೆ. ಇನ್ನು ವಲ್ಪೋಯಿನಲ್ಲಿ ಶಾಸಕ ರಾಣೆ ಬಿಜೆಪಿ ಸೇರಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.
ಇದೇ ವೇಳೆ ಆಂಧ್ರ ಪ್ರದೇಶದ ನಂದ್ಯಾಲ್ ನಲ್ಲಿ ಶಾಸಕ ಭೂಮ ನಾಗಿ ರೆಡ್ಡಿ ಅಕಾಲಿಕ ಮರಣ ಹೊಂದಿದ್ದರಿಂದ ಚುನಾವಣೆ ನಡೆಯುತ್ತಿದ್ದು ಮತದಾನ ಜಾರಿಯಲ್ಲಿದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಗೋವಾದ ಪಣಜಿಯಲ್ಲಿ ಶೇಕಡಾ 34.65, ವಲ್ಪೋಯಿಯಲ್ಲಿ ಶೇ. 40.02 ಮತದಾನವಾಗಿದೆ.
ಇನ್ನು ದೆಹಲಿಯ ಬವಾನದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇಕಡಾ 24.39 ಮತದಾನವಾಗಿದೆ. ಆಂಧ್ರದ ನಂದ್ಯಾಲ್ ನಲ್ಲಿಯೂ ಉತ್ತಮ ಮತದಾನವಾಗಿದೆ.
ಇನ್ನು ಈ ಕ್ಷೇತ್ರಗಳ ಮತ ಎಣಿಕೆ ಆಗಸ್ಟ್ 28ರಂದು ನಡೆಯಲಿದೆ.