ಅಸ್ಸಾಂ ಪ್ರವಾಹ: 9 ಸಾವು, 27 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತ
ಡಿಸ್ಪುರ್, ಮೇ 19: ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬುಧವಾರದಂದು ದರ್ರಾಂಗ್ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಅಸ್ಸಾಂನಲ್ಲಿ ಮುಂಗಾರು ಪೂರ್ವದ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ರಾಜ್ಯದ 34 ಜಿಲ್ಲೆಗಳ ಪೈಕಿ 27 ಜಿಲ್ಲೆಗಳಲ್ಲಿ 6.62 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಅಸ್ಸಾಂನಲ್ಲಿ 1,25,491 ಮಕ್ಕಳು ಮತ್ತು 2,44,216 ಮಹಿಳೆಯರು ಸೇರಿದಂತೆ ಕನಿಷ್ಠ 6,62,385 ಜನರ ಮೇಲೆ ಮಳೆ ಪರಿಣಾಮ ಬೀರಿದೆ. 27 ಜಿಲ್ಲೆಗಳಲ್ಲಿ 1,414 ಹಳ್ಳಿಗಳಲ್ಲಿ ಸುಮಾರು 8,260 ಮನೆಗಳು ಭಾಗಶಃ ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ರೈಲು ಸಂಪರ್ಕ ಸ್ಥಗಿತ
ಅಸ್ಸಾಂನ ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತವಾಗಿದ್ದು ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಭೂಕುಸಿತಗಳು ವಿನಾಶವನ್ನೇ ಉಂಟುಮಾಡಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಐದು ದಿನಗಳಿಂದ ಸಿಂಗಲ್ ರೈಲು ಮಾರ್ಗವೂ ಸ್ಥಗಿತಗೊಂಡಿದೆ.
ಅಗತ್ಯ ವಸ್ತುಗಳ ಲಭ್ಯತೆ, ಸಾರಿಗೆ ಇಂಧನ ಮತ್ತು ಬೆಳೆಗಳ ಬಗ್ಗೆ ಈಶಾನ್ಯ ಪ್ರದೇಶದ ಕೆಲವು ಭಾಗಗಳ ಜನರ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ತ್ರಿಪುರಾ, ಮಿಜೋರಾಂ ಮತ್ತು ದಕ್ಷಿಣ ಅಸ್ಸಾಂನಲ್ಲಿ ಅಧಿಕಾರಿಗಳು ಸಾಕಷ್ಟು ಅಗತ್ಯ ವಸ್ತುಗಳ ದಾಸ್ತಾನು ಮತ್ತು ಸಾರಿಗೆ ಇಂಧನವನ್ನು ಹೊಂದಿದ್ದಾರೆ. ಇದನ್ನು ಯಾವುದೇ ಅಧಿಕಾರಿ ಅಥವಾ ಯಾವುದೇ ವ್ಯಾಪಾರಿ ಅಕ್ರಮ ಸಂಗ್ರಹಣೆ ಮಾಡಲು ಅಥವಾ ಬೆಲೆಗಳನ್ನು ಹೆಚ್ಚಿಸಲು ಪ್ರಯತ್ನಿಸಿದರೆ, ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

89 ಪರಿಹಾರ ಶಿಬಿರಗಳಲ್ಲಿ 39,558 ಜನರಿಗೆ ಆಶ್ರಯ
ಅಸ್ಸಾಂನಲ್ಲಿ ಮುಂಗಾರು ಪೂರ್ವದ ಪ್ರವಾಹ ಪರಿಸ್ಥಿತಿಯು ಬುಧವಾರ ಮತ್ತಷ್ಟು ಹದಗೆಟ್ಟಿದ್ದು, ರಾಜ್ಯದಾದ್ಯಂತ 26 ಜಿಲ್ಲೆಗಳ ವ್ಯಾಪ್ತಿಯ 1,089 ಹಳ್ಳಿಗಳಲ್ಲಿ 4,03,352 ಜನರು ತೊಂದರೆಗೀಡಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಅಸ್ಸಾಂನ ಉದಲ್ಗುರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಅಸ್ಸಾಂನ ಪೂರ್ವ ಮಾನ್ಸೂನ್ ಪ್ರವಾಹಕ್ಕೆ ಮತ್ತು ಭೂಕುಸಿತಕ್ಕೆ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ.
ಪ್ರವಾಹದಿಂದಾಗಿ 26 ಜಿಲ್ಲೆಗಳ 1,089 ಗ್ರಾಮಗಳಲ್ಲಿ 1,676 ಮನೆಗಳು ಭಾಗಶಃ ಮತ್ತು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 89 ಪರಿಹಾರ ಶಿಬಿರಗಳಲ್ಲಿ 39,558 ಜನರು ಆಶ್ರಯ ಪಡೆದಿದ್ದಾರೆ.

2,000ಕ್ಕೂ ಹೆಚ್ಚು ಜನರ ರಕ್ಷಣೆ
ಕಚಾರ್, ದಿಮಾ ಹಸಾವೊ, ಹೊಜೈ, ನಾಗಾಂವ್, ಚರೈಡಿಯೊ, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಬಜಾಲಿ, ಬಕ್ಸಾ, ಬಿಸ್ವನಾಥ್ ಮತ್ತು ಲಖಿಂಪುರ ಜಿಲ್ಲೆಗಳು ಹೆಚ್ಚು ಮಳೆಗೆ ಬಾಧಿತವಾಗಿವೆ. ಪ್ರತಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ನಡೆಯುತ್ತಿರುವ ರಕ್ಷಣಾ ಪ್ರಯತ್ನಗಳ ಭಾಗವಾಗಿ ಹೊಜೈ ಜಿಲ್ಲೆಯಲ್ಲಿ ಸಿಲುಕಿದ್ದ 2,000ಕ್ಕೂ ಹೆಚ್ಚು ಜನರನ್ನು ಸೇನೆ ರಕ್ಷಿಸಿದೆ.
ಈಶಾನ್ಯ ಫ್ರಾಂಟಿಯರ್ ರೈಲ್ವೇ (ಎನ್ಎಫ್ಆರ್) ನ ಹಾಫ್ಲಾಂಗ್ನಲ್ಲಿನ ಬೆಟ್ಟವಿರುವ ಪ್ರದೇಶದಲ್ಲಿ ಮತ್ತು ದಿಮಾ ಹಸಾವೊ ಜಿಲ್ಲೆಯ ಹತ್ತಿರದ ಪ್ರದೇಶಗಳಲ್ಲಿ ಬುಧವಾರ ಪರಿಸ್ಥಿತಿ ಗಂಭೀರವಾಗಿದೆ. ಏಕೆಂದರೆ ಪರ್ವತ ಪ್ರದೇಶದಲ್ಲಿ ಮಳೆಯು ಮುಂದುವರಿದಿದ್ದು, ಲುಮ್ಡಿಂಗ್-ಬದರ್ಪುರ ಸಿಂಗಲ್ ಲೈನ್ ರೈಲ್ವೆ ಮಾರ್ಗದ ಮೇಲೆ ಪರಿಣಾಮ ಬೀರಿದೆ.
56 ಪೀಡಿತ ಸ್ಥಳಗಳ ಪೈಕಿ ಸುಮಾರು 12 ಸ್ಥಳಗಳಲ್ಲಿ ದುರಸ್ಥಿ ಕಾರ್ಯ ಪೂರ್ಣಗೊಂಡಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಪ್ರಮುಖ ಪೀಡಿತ ಪ್ರದೇಶಗಳಲ್ಲಿ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಡೆತಡೆಯಿಲ್ಲದ ಮಳೆ ಮತ್ತು ಕಷ್ಟಕರವಾದ ಭೂಪ್ರದೇಶದಲ್ಲಿ ದುರಸ್ತಿ ಕಾರ್ಯವನ್ನು ತೀವ್ರವಾಗಿ ಮಾಡಲು ಪರಿಣಾಮ ಬೀರುತ್ತಿದೆ. ಇದು ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು ಎಂದು NFR ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಯತ್ನ
ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಅಸ್ಸಾಂನ ಲುಮ್ಡಿಂಗ್-ಬದರ್ಪುರ ವಿಭಾಗ ಏಕೈಕ ರೈಲು ಮಾರ್ಗವಾಗಿದೆ. ಈ ರೈಲು ಸಂಪರ್ಕವನ್ನು ಮೇ14 ರಿಂದ ಕಡಿತಗೊಳಿಸಲಾಗಿದೆ. ತ್ರಿಪುರಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ತಪನ್ ಕುಮಾರ್ ದಾಸ್ ಮಾತನಾಡಿ, "ಅಗತ್ಯ ವಸ್ತುಗಳು, ಸಾರಿಗೆ ಇಂಧನ ಮತ್ತು ಇತರ ಮೂಲಭೂತ ವಸ್ತುಗಳನ್ನು ಅಸ್ಸಾಂ ಮತ್ತು ಮೇಘಾಲಯದ ರಸ್ತೆ ಮೂಲಕ ಸಾಗಿಸಲಾಗುವುದು. ನಾವು ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದು ದಾಸ್ ಐಎಎನ್ಎಸ್ಗೆ ತಿಳಿಸಿದ್ದಾರೆ.
ಸಿಲ್ಚಾರ್ನಲ್ಲಿ ಬಿಜೆಪಿಯ ಲೋಕಸಭಾ ಸದಸ್ಯ ರಾಜ್ದೀಪ್ ರಾಯ್, ಶಾಸಕ ದೀಪಯನ್ ಚಕ್ರವರ್ತಿ ಮತ್ತು ಕ್ಯಾಚಾರ್ ಜಿಲ್ಲಾ ಉಪ ಆಯುಕ್ತ ಕೀರ್ತಿ ಜಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 'ಜನರು ಭಯಪಡಬೇಡಿ, ಏಕೆಂದರೆ ಆಡಳಿತವು ಅಗತ್ಯ ವಸ್ತುಗಳು ಮತ್ತು ಇಂಧನ ಪೂರೈಸಲು ಪ್ರಯತ್ನಿಸುತ್ತಿದೆ' ಎಂದಿದ್ದಾರೆ. ಜೊತೆಗೆ ಪ್ರವಾಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಅವರು ತಿಳಿಸಿದರು.
ರೈಲ್ವೆ ಮಾರ್ಗಗಳ ಅಡೆತಡೆಗಳ ದೃಷ್ಟಿಯಿಂದ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಅಸ್ಸಾಂ ನಡುವೆ ಕಾರ್ಯನಿರ್ವಹಿಸುವ ವಿವಿಧ ವಿಮಾನಗಳ ದರಗಳು ಸಾಮಾನ್ಯ ದರಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚಳವಾಗಿದ್ದು, ಕೋಲ್ಕತ್ತಾ, ದೆಹಲಿ ಮತ್ತು ಇತರ ನಗರಗಳಿಗೆ ಹೋಗುವ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ.












Click it and Unblock the Notifications