ಎಐಸಿಸಿ ಚುನಾವಣೆ: ಹಿಂದೆ ಸರಿದ ಅಶೋಕ್ ಗೆಹ್ಲೋಟ್, ದಿಗ್ವಿಜಯ್-ಶಶಿ ತರೂರ್ ಮಧ್ಯೆ ಸ್ಪರ್ಧೆ
ನವದೆಹಲಿ , ಸೆ. 29 : ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿ ಕ್ಷಮೆಯಾಚಿಸಿರುವ ಅಶೋಕ್ ಗೆಹ್ಲೋಟ್, ರಾಜಸ್ಥಾನದ ಬಂಡಾಯದ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಉಳಿಯುವ ಬಗ್ಗೆ "ಒಂದು ಅಥವಾ ಎರಡು ದಿನಗಳಲ್ಲಿ" ಸೋನಿಯಾ ಗಾಂಧಿ ಅವರು ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.
ಅಶೋಕ್ ಗೆಹ್ಲೋಟ್ ರಾಜಸ್ಥಾನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ "ಕಾಂಗ್ರೆಸ್ ಅಧ್ಯಕ್ಷರು ಒಂದು ಅಥವಾ ಎರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ. ಅಶೋಕ್ ಗೆಹ್ಲೋಟ್ ಕೂಡ ಈ ನಿರ್ಧಾರವನ್ನು ಸೋನಿಯಾ ಗಾಂಧಿಗೆ ಬಿಟ್ಟಿದ್ದೇನೆ ಎಂದು ಈ ಹಿಂದೆ ಹೇಳಿದ್ದರು.

ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ ಗೆಹ್ಲೋಟ್ ಸಿಎಂ ಸ್ಥಾನದ ಭವಿಷ್ಯ
ಅವರ ಕ್ಷಮೆಯಾಚನೆ ಮತ್ತು ಮುಂದಿನ ವರ್ಷ ಚುನಾವಣೆಯಿರುವ ಕಾರಣ ಅಶೋಕ್ ಗೆಹ್ಲೋಟ್ ಬೃಹತ್, ಮುಜುಗರದ ಬಂಡಾಯದ ಹೊರತಾಗಿಯೂ ತಮ್ಮ ಸ್ಥಾನವನ್ನು ಹಿಡಿದಿಟ್ಟುಕೊಳ್ಳಬಹುದು. ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ, ರಾಜಸ್ಥಾನದಲ್ಲಿ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸುತ್ತಾರೆ ಎಂಬ ವರದಿಗಳ ಮೇಲೆ 90 ಕ್ಕೂ ಹೆಚ್ಚು ಶಾಸಕರು ಸಾಮೂಹಿಕ ರಾಜೀನಾಮೆ ಬೆದರಿಕೆ ಹಾಕಿದ್ದರು.
ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ ಎಂದರೆ ಗಾಂಧಿಯವರ ಆಪ್ತರೇ ಕಾಂಗ್ರೆಸ್ ಅಧ್ಯಕ್ಷರ ಮೂರನೇ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಬಹುದು. ಗಾಂಧಿಯೇತರ ಅಭ್ಯರ್ಥಿಗಳಿಗಾಗಿ ಎರಡು ದಶಕಗಳ ನಂತರ ನಡೆಯುತ್ತಿರುವ ಮೊದಲ ಕಾಂಗ್ರೆಸ್ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.

ಇದು ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ!
ಅಕ್ಟೋಬರ್ 17 ರ ಚುನಾವಣೆಯಲ್ಲಿ ದಿಗ್ವಿಜಯ ಸಿಂಗ್ ವರ್ಸಸ್ ಶಶಿ ತರೂರ್ ಸ್ಪರ್ಧೆಯಂತೆ ಕಾಣುತ್ತಿದೆ. ಇಬ್ಬರೂ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ದಿಗ್ವಿಜಯ ಸಿಂಗ್ ಅವರು ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ನಂತರ ಶಶಿ ತರೂರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಇಬ್ಬರು ತಬ್ಬಿಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ತರೂರ್, ಟ್ವೀಟ್ ಮಾಡಿದ್ದಾರೆ.
"ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಯುದ್ಧವಲ್ಲ. ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ನಾವಿಬ್ಬರೂ ಬಯಸುವುದು ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು. ಆದರೆ, ಕಾಂಗ್ರೆಸ್ ಗೆಲ್ಲುತ್ತದೆ!" ಎಂದಿದ್ದಾರೆ.

ಶಾಸಕರ ಬಂಡಾಯ ಘೋರ ಅಶಿಸ್ತು ಎಂದಿದ್ದ ಕೇಂದ್ರ ನಾಯಕರು
ಅಶೋಕ್ ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ ರಾಜಸ್ಥಾನದ ಕಾಂಗ್ರೆಸ್ ಶಾಸಕರು ಬಂಡಾಯ ಎಳುವ ಮುನ್ನ ಕಾಂಗ್ರೆಸ್ ಅಧ್ಯಕ್ಷರಾಗಲು ಗಾಂಧಿಯವರ ಮೊದಲ ಆಯ್ಕೆ ರಾಜಸ್ಥಾನ ಸಿಎಂ ಆಗಿದ್ದರು. 2020 ರಲ್ಲಿ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಅವರನ್ನು ಸಿಎಂ ಸ್ಥಾನಕ್ಕೆ ಏರಲು ಬಿಡುವುದಿಲ್ಲ ಎಂದು ಶಾಸಕರು ಹೇಳಿದ್ದಾರೆ.
ಬಂಡಾಯ ಶಾಸಕರು ಇಬ್ಬರು ಕೇಂದ್ರ ನಾಯಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಹಲವು ಷರತ್ತುಗಳನ್ನು ಹಾಕಿದ್ದರು. ಶಾಸಕರ ಬಂಡಾಯವನ್ನು "ಘೋರ ಅಶಿಸ್ತು" ಎಂದು ಸೋನಿಯಾ ಗಾಂಧಿಗೆ ನೀಡಿದ ವರದಿಯಲ್ಲಿ ಇಬ್ಬರು ವಿವರಿಸಿದ್ದಾರೆ.

ಗೆಹ್ಲೋಟ್ಗೆ ಮುಳುವಾದ ಒಬ್ಬ ವ್ಯಕ್ತಿ, ಒಂದು ಹುದ್ದೆ ಸಿದ್ಧಾಂತ!
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೊದಲು ಅಶೋಕ್ ಗೆಹ್ಲೋಟ್ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಕಾಂಗ್ರೆಸ್ ಬಯಸಿತ್ತು. ರಾಜಸ್ಥಾನದಲ್ಲಿ ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ನಾಯಕತ್ವದ ಆಯ್ಕೆಯನ್ನು ಅವರು ಗೌರವಿಸಬೇಕು ಎಂದು ಹೇಳಲಾಗಿತ್ತು
ಆದರೆ, ಅಶೋಕ್ ಗೆಹ್ಲೋಟ್ ಅವರು ಪಕ್ಷದ ಮುಖ್ಯಸ್ಥರಾಗಿ ಸ್ಪರ್ಧಿಸುತ್ತಿರುವಾಗಲೂ ತಮ್ಮ ರಾಜಸ್ಥಾನದ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದ್ದರು. "ಒಬ್ಬ ವ್ಯಕ್ತಿ, ಒಂದು ಹುದ್ದೆ" ಎಂಬ ತನ್ನ ಸಂಕಲ್ಪಕ್ಕೆ ಪಕ್ಷ ಅಂಟಿಕೊಳ್ಳುವುದರಿಂದ ಅದು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಕಳೆದ ವಾರ ಸ್ಪಷ್ಟಪಡಿಸಿದ್ದರು.
ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕಾಗಿ ದೀರ್ಘಕಾಲದಿಮದ ಕಾಯುತ್ತಿರುವ ಸಚಿನ್ ಪೈಲಟ್, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಕೇಳಿಕೊಂಡಿದ್ದಾರೆ.












Click it and Unblock the Notifications