ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಇಸ್ರೋ ಅಧ್ಯಕ್ಷ
ನವದೆಹಲಿ, ಜ.13 : ಕೆ.ರಾಧಾಕೃಷ್ಣನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರೆ. ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸೋಮವಾರ ರಾತ್ರಿ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ನೇಮಕಾತಿ ಸಂಪುಟ ಸಭೆ ಎ.ಎಸ್. ಕಿರಣ್ ಕುಮಾರ್ ಅವರನ್ನು ಇಸ್ರೋ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಕೆ.ರಾಧಾಕೃಷ್ಣನ್ ಅವರ ನಿವೃತ್ತಿಯ ನಂತರ ಗುಜರಾತ್ ಮೂಲದ ಹಿರಿಯ ವಿಜ್ಞಾನಿ ಶೈಲೇಶ್ ನಾಯಕ್ ಅವರನ್ನು ಇಸ್ರೊ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಕರ್ನಾಟಕದ ಹಾಸನ ಮೂಲದ ಕಿರಣ್ ಕುಮಾರ್ ಅವರ ಸೇವಾ ಅವಧಿ ಮೂರು ವರ್ಷಗಳು. ಇಸ್ರೋ ಅಧ್ಯಕ್ಷರ ನೇಮಕದ ರೇಸ್ನಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ.ವೈ.ಎಸ್. ಪ್ರಸಾದ್ ಹಾಗೂ ಕಿರಣ್ ಕುಮಾರ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಅಂತಿಮವಾಗಿ ಕಿರಣ್ ಕುಮಾರ್ ನೇಮಕವಾಗಿದ್ದಾರೆ. [ಇಸ್ರೋ ಅಧ್ಯಕ್ಷ ಸ್ಥಾನದಿಂದ ರಾಧಾಕೃಷ್ಣನ್ ನಿವೃತ್ತಿ]
AS Kiran Kumar appointed new ISRO chief http://t.co/QLxhpTWqzF pic.twitter.com/ug1bOZqv1i
— NDTV (@ndtv) January 12, 2015 ಕಿರಣ್ ಕುಮಾರ್ ಅವರು ಸದ್ಯ, ಇಸ್ರೊದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕರಾಗಿದ್ದಾರೆ. 1975ರಲ್ಲಿ ಇಸ್ರೋಗೆ ಸೇರಿದ ಕಿರಣ್ ಕುಮಾರ್, ಅಂದಿನಿಂದಲೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಮಂಗಳಯಾನ ಯೋಜನೆಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಹಾಸನ ಮೂಲದವರು : ಎ.ಎಸ್. ಕಿರಣ್ ಕುಮಾರ್ ಕರ್ನಾಟಕದ ಹಾಸನ ಜಿಲ್ಲೆಯವರು. ಆಲೂರಿನಲ್ಲಿ 1952ರಲ್ಲಿ ಜನಿಸಿದ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್ಸಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.












Click it and Unblock the Notifications