ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?
Recommended Video
ನವದೆಹಲಿ, ಆಗಸ್ಟ್ 06: ತ್ರಿವಳಿ ತಲಾಖ್ ನಂತರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕವನ್ನು ಮಂಡಿಸಿ ಮೋದಿ ಸರ್ಕಾರ ಗೆದ್ದುಕೊಂಡಿದೆ. ಈಗ ಮೋದಿ ಹಾಗೂ ಅಮಿತ್ ಶಾ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಭಾರತೀಯ ಜನತಾ ಪಕ್ಷ ದಶಕಗಳಿಂದ ಆಸಕ್ತಿ ತೋರುತ್ತಾ ಬಂದಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ವಿರೋಧಿ ನಿಲುವು ತಳೆದಿವೆ.
'ಮೋದಿ ಸರಕಾರದ ವೈಫಲ್ಯ ಮುಚ್ಚಲು ಏಕರೂಪ ನಾಗರಿಕ ಸಂಹಿತೆ'
"ಈಗ ಮೋದಿ ಅಲೆಯಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದು, ಇದರಿಂದ ದೇಶಕ್ಕೆ ದೇಶದ ಜನರಿಗೆ ಅನುಕೂಲವಾಗಲಿದೆ, ಟಿಡಿಪಿ, ಬಿಎಸ್ಪಿ, ಎಎಪಿ ಕೂಡಾ ಆರ್ಟಿಕಲ್ 370 ರದ್ದು, ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿವೆ, ಹೀಗಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಬಿಜೆಪಿಗೆ ಇದು ಸಕಾಲ" ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆಯಲ್ಲಿ ಅಗತ್ಯ ಬೆಂಬಲ ಹೊಂದಿರುವ ಬಿಜೆಪಿಗೆ ರಾಜ್ಯಸಭೆಯಲ್ಲಿ ಇನ್ನು ಸಂಪೂರ್ಣ ಬಹಮತ ಸಿಕ್ಕಿಲ್ಲ, ಹೀಗಾಗಿ, ಅನ್ಯಪಕ್ಷ ಬೆಂಬಲ ಅಗತ್ಯ,
"118ನೇ ವಿಧಿಯಲ್ಲಿನ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಅಸಂವಿಧಾನಾತ್ಮಕ ಎಂದು ಘೋಷಿಸಿದ ನ್ಯಾಯಪೀಠ- 44ನೇ ವಿಧಿಯನ್ವಯ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ" ಎಂದು ನ್ಯಾಯಮೂರ್ತಿ ವಿ.ಎಸ್ ಖಾರೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು 2003ರಲ್ಲಿ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಏಕರೂಪ ನಾಗರಿಕ ನೀತಿಸಂಹಿತೆ ಎಂದರೇನು?: ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ. ಅಂತಹಾ ಸಂಹಿತೆಗಳು ಬಹುತೇಕ ಆಧುನಿಕ ರಾಷ್ಟ್ರಗಳಲ್ಲಿ ಈಗಾಗಲೇ ಜಾರಿಯಲ್ಲಿವೆ.
ನಾಗರಿಕ ನೀತಿಸಂಹಿತೆಯ ವ್ಯಾಪ್ತಿಯಲ್ಲಿ ಒಳಪಡುವ ಸಾಮಾನ್ಯ ಕ್ಷೇತ್ರಗಳೆಂದರೆ ಆಸ್ತಿಪಾಸ್ತಿಗಳ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಆಡಳಿತ, ಮದುವೆ, ವಿಚ್ಛೇದನ ಮತ್ತು ದತ್ತುಸ್ವೀಕಾರಗಳಾಗಿವೆ.