ಸಿದ್ದಿಕಿ ಪತ್ರಕರ್ತನಲ್ಲ, ಪಿಎಫ್ಐ ಸಕ್ರಿಯ ಸದಸ್ಯ: ಉತ್ತರ ಪ್ರದೇಶ ಸರ್ಕಾರ
ನವದೆಹಲಿ, ನವೆಂಬರ್ 21: ಸಿದ್ದಿಕಿ ಕಪ್ಪನ್ ಅವರು ಪತ್ರಕರ್ತನ ಸೋಗಿನಲ್ಲಿ ಇರುವ ಪಿಎಫ್ಐ ಸದಸ್ಯನಾಗಿದ್ದು, ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಬಳಸಿಕೊಂಡು ಜಾತಿ ವಿಭಜನೆಗೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಸಲುವಾಗಿ ಅಲ್ಲಿಗೆ ತೆರಳುತ್ತಿದ್ದರು ಎಂದು ಸುಪ್ರೀಂಕೋರ್ಟ್ಗೆ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ.
ತಾವು ದೆಹಲಿ ಮೂಲದ ಪತ್ರಕರ್ತನಾಗಿದ್ದು, ಕೇರಳದ ಪತ್ರಿಕೆಗೆ ಕೆಲಸ ಮಾಡುತ್ತಿರುವುದಾಗಿ ಕಪ್ಪನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ನಡೆದ ಹತ್ರಾಸ್ಗೆ ವರದಿಗಾರಿಕೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಲಾಗಿತ್ತು.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಮಥುರಾ ಕಾರಾಗೃಹ ವರಿಷ್ಠಾಧಿಕಾರಿ ಅಫಿಡವಿಟ್ ಸಲ್ಲಿಸಿದರು. ಅದರಲ್ಲಿ ಅವರು 2018ರಲ್ಲಿಯೇ ಸ್ಥಗಿತಗೊಂಡಿದ್ದ 'ತೇಜಸ್' ಎಂಬ ಪತ್ರಿಕೆಯ ಗುರುತಿನ ಚೀಟಿಯನ್ನು ಕಪ್ಪನ್ ಬಳಸಿದ್ದರು ಎಂದು ಆರೋಪಿಸಿದ್ದಾರೆ. ಹತ್ರಾಸ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸಲು ಕಪ್ಪನ್ ಹಾಗೂ ಇತರೆ ಮೂವರು ಪಿಎಫ್ಐ ಸದಸ್ಯರು ಬಯಸಿದ್ದರು. ಈ ನಾಲ್ವರಿಂದ ಆಪಾದನೆಗೆ ಪೂರಕವಾದ ವಸ್ತುಗಳು ದೊರೆತಿವೆ ಎಂದು ಅವರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಕಪ್ಪನ್ ದಿಕ್ಕುತಪ್ಪಿಸುವ ಉತ್ತರಗಳನ್ನು ನೀಡಿದ್ದಾರೆ ಮತ್ತು ತನಿಖೆಗೆ ಸಹಕಾರ ನೀಡುತ್ತಿಲ್ಲ. ಜತೆಗೆ ತಪ್ಪು ವಿಳಾಸಗಳನ್ನು ನೀಡಿದ್ದಾರೆ. ಅವರ ಕೋಠಡಿಯಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಅವರ ಬಂಧನದ ವಿವರಗಳನ್ನು ಅವರ ಕುಟುಂಬಕ್ಕೆ ನೀಡಲಾಗಿತ್ತು ಮತ್ತು ಅವರು ವಕೀಲರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಕೇರಳ ಕಾರ್ಯನಿರತ ಪತ್ರಕರ್ತ ಒಕ್ಕೂಟವು ಕಪ್ಪನ್ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ, ಜಾಮೀನು ಅರ್ಜಿಯ ವಕಾಲತು ವಹಿಸುವ ಸಲುವಾಗಿ ತಮ್ಮ ವಕೀಲರನ್ನು ಭೇಟಿ ಮಾಡಲು ಸಿದ್ದಿಕಿಗೆ ಅನುಮತಿ ನೀಡಿತು. ಜತೆಗೆ ಈ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡಿದ ಸ್ವರೂಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.
ಕಪ್ಪನ್ ಅವರನ್ನು ಭೇಟಿ ಮಾಡಲು ವಕೀಲರಿಗೆ ಅನುಮತಿ ನೀಡಿರಲಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅವರು ವಕೀಲರನ್ನು ಭೇಟಿ ಮಾಡಲು ಯಾವ ಆಕ್ಷೇಪ ಇರಲಿಲ್ಲ, ಈಗಲೂ ಆಕ್ಷೇಪವಿಲ್ಲ ಎಂದು ತಿಳಿಸಿದರು.












Click it and Unblock the Notifications