ಮೊದಲ ಬಾರಿಗೆ ಒಟ್ಟೊಟ್ಟಿಗೆ ಎರಡು ಚಂಡಮಾರುತ: ಪ್ರಭಾವ ಹೇಗಿರಲಿದೆ?
ಬೆಂಗಳೂರು, ನವೆಂಬರ್ 1: ಮೊದಲ ಬಾರಿ ಎರಡು ಚಂಡಮಾರುತಗಳು ಒಟ್ಟಿಗೆ ಅಪ್ಪಳಿಸಲಿದ್ದು, ಪರಿಣಾಮ ಭಯಂಕರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕ್ಯಾರ್, ಮಹಾ ಎರಡು ಚಂಡಮಾರುತದ ಅಬ್ಬರಕ್ಕೆ ಕರುನಾಡಿನ ಕರಾವಳಿ ಸೇರಿದಂತೆ ಬಹುತೇಕ ಭಾಗ ನಲುಗಿ ಹೋಗಿದೆ. ಈಗಾಗಲೇ ಮಹಾ ಅಬ್ಬರಕ್ಕೆ ಕರಾವಳಿ ಭಾಗದಲ್ಲಿ ಮಳೆ ಜೊತೆ ರಕ್ಕಸ ಅಲೆ ಸೃಷ್ಟಿಯಾಗಿದೆ. ಈ ಮಧ್ಯೆ ಇನ್ನೆರಡು ಚಂಡಮಾರುತದ ಎಚ್ಚರಿಕೆಯನ್ನು ಭೂಗರ್ಭ ವಿಜ್ಞಾನಿಗಳು ಕೊಟ್ಟಿದ್ದಾರೆ.

ಜಲ ಪ್ರವಾಹ ಉಂಟಾಗುವ ಸಾಧ್ಯತೆ
ಬಂಗಾಳಕೊಲ್ಲಿಯ ಸಾಗರದೊಳಗಿನ ಜ್ವಾಲಮುಖಿ ಸ್ಫೋಟದಿಂದ ಈ ಚಂಡಮಾರುತ ಸೃಷ್ಟಿಯಾಗಲಿದ್ದು ಜಲಪ್ರವಾಹ ತರುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರು, ಮೈಸೂರು, ಕೋಲಾರ ರಾಮನಗರ ಭಾಗಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ ತಿಂಗಳು ಚಿಲ್ಡ್ ವೆದರ್ ಇರುತ್ತೆ ಅಂತೆಲ್ಲ ಅಂದುಕೊಂಡಿದ್ದ ಕರುನಾಡಿಗೆ ಈಗ ಜಲರಕ್ಕಸನ ಕಾಟದ ಮುನ್ಸೂಚನೆ ಸಿಕ್ಕಿದ್ದು, ಭೀತಿಯ ವಾತವರಣ ಸೃಷ್ಟಿಯಾಗಿದೆ.

197 2ರಲ್ಲಿ ಎರಡು ಚಂಡಮಾರುತ ಅಪ್ಪಳಿಸಿತ್ತು
1972ರ ಡಿಸೆಂಬರ್ ನಲ್ಲಿ ಎರಡು ಚಂಡಮಾರುತಗಳು ದೇಶಕ್ಕೆ ಅಪ್ಪಳಿಸಿತ್ತು.ಚೆನ್ನೈನಲ್ಲಿ ಹೆಚ್ಚು ಮಳೆಯಾಗಿತ್ತು. ಇದೀಗ ಬಂಗಾಳಕೊಲ್ಲಿಯಲ್ಲಿ ಎರಡು ಚಂಡಮಾರುತಗಳು ಉದ್ಭವವಾಗುತ್ತಿರುವುದರಿಂದ ತಮಿಳುನಾಡು,ಕೇರಳ, ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಲಿದೆ.

ಬೆಂಗಳೂರು ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಹೈ ಅಲರ್ಟ್
ಕ್ಯಾರ್ ಚಂಡಮಾರುತದ ಹೊಡೆತ, ಮಹಾ ಚಂಡಮಾರುತದ ಘರ್ಜನೆ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

ಸದ್ದಿಲ್ಲದೇ ಎದ್ದಿರುವ ಎರಡು ಚಂಡಮಾರುತ
ಇದರ ನಡುವೆ ಇನ್ನೆರಡು ಸದ್ದಿಲ್ಲದೇ ಚಂಡಮಾರುತ ಬಂಗಾಳಕೊಲ್ಲಿಯ ಗರ್ಭದಲ್ಲಿ ಪುಟಿದೇಳಲು ತಯಾರಾಗಿದೆ. ಹೌದು ನವೆಂಬರ್ ತಿಂಗಳಲ್ಲಿ ಇನ್ನೆರಡು ಚಂಡಮಾರುತ ಫಾರ್ಮ್ ಆಗಲಿದ್ದು, ಮೊದಲ ವಾರದಲ್ಲಿಯೇ ಕರುನಾಡನ್ನು ಅಲ್ಲೋಲಕಲ್ಲೋಲ ಮಾಡುವ ಎಚ್ಚರಿಕೆಯನ್ನು ಭೂಗರ್ಭ ತಜ್ಞರು ಕೊಟ್ಟಿದ್ದಾರೆ.












Click it and Unblock the Notifications