YS Sharmila arrested : ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಬಂಧನ
ಹೈದ್ರಾಬಾದ್, ನವೆಂಬರ್ 28: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ಅನ್ನು ಸೋಮವಾರ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅವರ ಬೆಂಬಲಿಗರು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಕರ್ತರ ನಡುವೆ ಘರ್ಷಣೆಯ ನಂತರ ಬಂಧಿಸಲಾಗಿದೆ.
ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾಗ ಎರಡು ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೆದ್ದಿತು. ಇದೇ ಸಂದರ್ಭದಲ್ಲಿ "ನೀವು ನನ್ನನ್ನು ಏಕೆ ಬಂಧಿಸುತ್ತಿದ್ದೀರಿ. ನಾನು ಇಲ್ಲಿ ಬಲಿಪಶುನಾ," ಎಂದು ಹೇಳುವುದು ಕೇಳಿಸಿತು.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷೆ ಸ್ಥಾನ ತೊರೆದ ಜಗನ್ ತಾಯಿ ವಿಜಯಲಕ್ಷ್ಮಿ
ವೈಎಸ್ಆರ್ ತೆಲಂಗಾಣ ಪಕ್ಷದಿಂದ ಆರಂಭಿಸಿದ್ದ 'ಪಾದಯಾತ್ರೆ'ಯಲ್ಲಿ ಶರ್ಮಿಳಾ ಭಾಗವಹಿಸಿದ್ದರು. ಅವರು ಇದುವರೆಗೆ 3,500 ಕಿ.ಮೀ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಭಾನುವಾರ ನರಸಂಪೇಟೆಯಲ್ಲಿ ಪಾದಯಾತ್ರೆ ನಡೆಸಿದ ಶರ್ಮಿಳಾ, ಸ್ಥಳೀಯ ಟಿಆರ್ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದ್ದರು. ಅವರು ನೀಡಿದ ಹೇಳಿಕೆಗಳಿಂದ ಕುಪಿತಗೊಂಡಿದ್ದ ಟಿಆರ್ಎಸ್ ಕಾರ್ಯಕರ್ತರು ಅವರ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು.
ಟಿಆರ್ಎಸ್ ಕಾರ್ಯಕರ್ತರ ಕೃತ್ಯದಿಂದ ಬೆಂಬಲಿಗರು ಕೆಂಡ:
ಟಿಆರ್ಎಸ್ ಕಾರ್ಯಕರ್ತರು ತೋರಿದ ಕೃತ್ಯದಿಂದ ಶರ್ಮಿಳಾ ಬೆಂಬಲಿಗರು ಕೆರಳಿ ಕೆಂಡವಾದರು. ಈ ಹಿನ್ನೆಲೆ ಅವರ ಮತ್ತು ಟಿಆರ್ಎಸ್ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ. ಇದರ ಮಧ್ಯೆ "ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ? ನಾನೇ ಬಲಿಪಶು, ಇಲ್ಲಿ ಆರೋಪಿಯಲ್ಲ" ಎಂದು ಶರ್ಮಿಳಾ ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಕಿರುಚಾಟ ಕೇಳಿಸಿತು.