ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ
ನವದೆಹಲಿ, ಏಪ್ರಿಲ್ 06: ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿವಾದ ಸೃಷ್ಟಿಸಿದ್ದಾರೆ.
ದೇಶದಲ್ಲಿ ಮೋದಿ ಅಲೆಯಿಂದ ಬಚಾವಾಗಲು ಪ್ರಾಣಿಗಳೆಲ್ಲ ಒಂದುಗೂಡುವಂತೆ ವಿರೋಧಪಕ್ಷಗಳು ಮಾಡುತ್ತಿವೆ ಎಂದು ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಎಲ್ಲ ವಿರೋಧಪಕ್ಷಗಳೂ ಒಂದುಗೂಡುವ ಪ್ರಯತ್ನ ನಡೆಯುತ್ತಿದೆ. ಭಾರಿ ನೆರೆ ಬಂದಾಗ ಎಲ್ಲ ಹಾವುಗಳು, ಮುಂಗುಸಿಗಳು, ಬೆಕ್ಕು, ನಾಯಿಗಳು ಮತ್ತು ಚಿರತೆ ಹಾಗೂ ಸಿಂಹಗಳು ಸಹ ನೀರಿನ ಮಟ್ಟದಿಂದ ಭಯಪಟ್ಟು ಬೃಹತ್ ಮರವನ್ನೇರುತ್ತವೆ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಮುಂಬೈನಲ್ಲಿ ನಡೆದ ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ವಿರುದ್ಧ ಸಂಘಟಿತವಾಗಿರುವ ರಾಜಕೀಯ ಪಕ್ಷಗಳನ್ನು ಗುರಿಯಾಗಿರಿಸಿಕೊಂಡು ಅವರು ಈ ಹೇಳಿಕೆ ನೀಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿವಿಧ ರಾಜಕೀಯ ಪಕ್ಷಗಳು ಒಂದುಗೂಡುತ್ತಿವೆ.
'ಮೋದಿ ಅಲೆಯ ಭಯ':
ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಅಮಿತ್ ಶಾ, ಮೋದಿ ಅವರ ಅಲೆಯಿಂದ ಭಯಗೊಂಡಿರುವ ವಿಭಿನ್ನ ಸೈದ್ಧಾಂತಿಕ ಧೋರಣೆಯ ಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧಿಸಲು ಒಂದಾಗುತ್ತಿವೆ ಎಂದು ಹೇಳಿದ್ದಾರೆ.
ಈಶಾನ್ಯ ಭಾರತದಲ್ಲಿ ನಡೆದ ಚುನಾವಣೆಯ ಫಲಿತಾಂಶಗಳನ್ನು ಉಲ್ಲೇಖಿಸಿದ ಅಮಿತ್ ಶಾ, ಮೋದಿ ಅವರ ಜನಪ್ರಿಯತೆ ಕೊಂಚವೂ ಮುಕ್ಕಾಗಿಲ್ಲ. ಸಮಾಜದ ಎಲ್ಲಾ ವರ್ಗಗಳಿಗೂ ಬಿಜೆಪಿ ನೇತೃತ್ವದ ಸರ್ಕಾರ ಮಾಡಿರುವ ಕೆಲಸಗಳನ್ನು ಜನರು ನೋಡಿದ್ದಾರೆ ಎಂದಿದ್ದಾರೆ.











Click it and Unblock the Notifications