ಜಮ್ಮು ಮತ್ತು ಕಾಶ್ಮೀರಕ್ಕೆ ಅಮಿತ್ ಶಾ ಭೇಟಿ, ಇಂಟರ್ನೆಟ್ ಸ್ಥಗಿತ
ಶ್ರೀನಗರ, ಅಕ್ಟೋಬರ್ 4: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ರಜೌರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಸಂಜೆ 7ರವರೆಗೆ ಈ ನೆಟ್ವರ್ಕ ಕಡಿತವಾಗಿರುತ್ತದೆ.
ಜಮ್ಮು ಮತ್ತು ಕಾಶ್ಮೀರ ಆಡಳಿತದ ಅಧಿಕೃತ ಹೇಳಿಕೆ ಪ್ರಕಾರ, ದೇಶವಿರೋಧಿ ಕೃತ್ಯ ಎಸಗುವವರು ಅಂತರ್ಜಾಲ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಹಾಗೂ ಅದು ಸಾರ್ವಜನಿಕ ಸುವ್ಯವಸ್ಥೆ ಹದಗೆಡಬಹುದು ಎಂಬ ಆತಂಕದಿಂದ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಮಂಗಳವಾರ ಸಂಜೆ 7ರವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮಿತ್ ಶಾ ಭೇಟಿ; ಪಹಾಡಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಘೋಷಣೆ ಸಾಧ್ಯತೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬೆಳಗ್ಗೆ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗೃಹ ಸಚಿವ ಅಮಿತ್ ಶಾ ಸಂಜಿಚಟ್ ಹೆಲಿಪ್ಯಾಡ್ ಮೂಲಕ ಕತ್ರಾದ ವೈಷ್ಣೋದೇವಿ ದೇಗುಲವನ್ನು ತಲುಪಿದರು. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇದ್ದರು. ಜಮ್ಮು ಮತ್ತು ರಜೌರಿಯ ನಿರ್ದಿಷ್ಟ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವರಾಗಿ ನೇಮಕಗೊಂಡ ನಂತರ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ. ಅವರು ನವರಾತ್ರಿ ಉತ್ಸವದ ಒಂಬತ್ತನೇ ದಿನವಾದ ಆಯುಧಪೂಜೆ ದಿನ ಇಲ್ಲಿ ಭೇಟಿ ವಿಶೇಷವೆನಿಸಿದೆ. ಅಮಿತ್ ಶಾ ನಂತರ ವೈಷ್ಣೋ ದೇವಿ ದೇವಸ್ಥಾನದಿಂದ ಸುಮಾರು ಒಂದೂವರೆ ಗಂಟೆಗಳ ದೂರದಲ್ಲಿರುವ ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮಿತ್ ಶಾ ಭೇಟಿ ಮುನ್ನ ನಡೆದ ಅವಳಿ ಸ್ಫೋಟದ ಹಿಂದೆ ಲಷ್ಕರ್-ಎ-ತೊಯ್ಬಾ ಕೈವಾಡ!
ರಘುನಾಥ ದೇವಸ್ಥಾನದಲ್ಲಿ ಪ್ರಾರ್ಥನೆ
ಅಲ್ಲದೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಜಮ್ಮುವಿನ ಕನ್ವೆನ್ಷನ್ ಸೆಂಟರ್ನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ರಜೌರಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಮತ್ತು ಜಮ್ಮುವಿನ ರಘುನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅವರು ಕಾಶ್ಮೀರ ಕಣಿವೆಗೆ ತೆರಳುವ ಮುನ್ನ ಇಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.
ನಂತರ ಸಂಜೆ ಅವರು ಈ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಸಭೆಗಳು ಸೇರಿದಂತೆ ಹಲವಾರು ನಿರ್ಣಾಯಕ ಸಭೆಗಳನ್ನು ನಡೆಸಲಿದ್ದಾರೆ. ಬುಧವಾರ (ಅಕ್ಟೋಬರ್ 5) ಶ್ರೀನಗರದ ರಾಜಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಉನ್ನತ ಮಟ್ಟದ ಸಭೆಯಲ್ಲಿ ಎಲ್ಜಿ ಮನೋಜ್ ಸಿನ್ಹಾ, ಸೇನೆಯ ಉನ್ನತ ಅಧಿಕಾರಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತ ಭಾಗವಹಿಸಲಿದ್ದಾರೆ.
ಮೋದಿ ಸರ್ಕಾರದ ಪರವಾಗಿ ಅಮಿತ್ ಶಾಗೆ ಸನ್ಮಾನ
ನಂತರ ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಮೊದಲು ಅಮಿತ್ ಶಾ ಅವರು ಮಧ್ಯಾಹ್ನ 3.30ರ ಸುಮಾರಿಗೆ ಶ್ರೀನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೋದಿ ಸರ್ಕಾರದ ಪರವಾಗಿ ಶಾ ಅವರನ್ನು ಸನ್ಮಾನಿಸಲು ಬಕರ್ವಾಲ್ ಮತ್ತು ಗುಜ್ಜರ್ಗಳಂತಹ ಸಮುದಾಯಗಳು ನಡೆಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣಿವೆಗೆ ಅವರ ಭೇಟಿಯ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯ ಕೋರ್ ಗ್ರೂಪ್ ಸಭೆ
ಅಚ್ಚರಿಯ ನಡೆಯಲ್ಲಿ ಮೋದಿ ಸರ್ಕಾರ ಇತ್ತೀಚೆಗೆ ಗುಲಾಂ ಅಲಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಗುಲಾಂ ಅಲಿ 2008ರಲ್ಲಿ ಬಿಜೆಪಿ ಸೇರಿದರು ಮತ್ತು ಗುಜ್ಜರ್ ಬುಡಕಟ್ಟು ಸಮುದಾಯದವರು. ರಾಜ್ಯ ಕೋರ್ ಗ್ರೂಪ್ ಸಭೆ ಮತ್ತು ಪಕ್ಷದ ಸಂಸದರು ಮತ್ತು ಶಾಸಕರೊಂದಿಗಿನ ಸಭೆ ಸೇರಿದಂತೆ ಹಲವಾರು ಸಾಂಸ್ಥಿಕ ಸಭೆಗಳು ಅಮಿತ್ ಶಾ ಭೇಟಿಯ ಪಟ್ಟಿಯಲ್ಲಿವೆ.
ಗುಜ್ಜರ್-ಬಕರ್ವಾಲ್, ರಜಪೂತ್ ಜನರ ಭೇಟಿ
2019ರ ಆಗಸ್ಟ್ನಲ್ಲಿ ಮೋದಿ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಏತನ್ಮಧ್ಯೆ ಅಮಿತಾ ಶಾ ಸೋಮವಾರ ಗುಜ್ಜರ್-ಬಕರ್ವಾಲ್, ರಜಪೂತ್, ಪಹಾರಿ ಮತ್ತು ಜಮ್ಮು ಸಿಖ್ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಜನರನ್ನು ಭೇಟಿಯಾದರು.