ದೇಶದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಮಾರ್ಗಗಳು ಮುಚ್ಚಿಹೋಗಿವೆ: ರಾಹುಲ್ ಗಾಂಧಿ ವಾಗ್ದಾಳಿ
ಭೋಪಾಲ್, ನವೆಂಬರ್ 24: ದೇಶದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಮಾರ್ಗಗಳು ಮುಚ್ಚಿಹೋಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆ ವೇಳೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 20 ಕ್ಕೂ ಹೆಚ್ಚು ನಿಷ್ಠಾವಂತರೊಂದಿಗೆ ಬಿಜೆಪಿಗೆ ಪ್ರವೇಶಿಸಿದ ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡಿತು. ಈ ವಿಚಾರವಾಗಿ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಭ್ರಷ್ಟ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ. ಇದಕ್ಕೆ ಮಧ್ಯಪ್ರದೇಶವೇ ನಿದರ್ಶನ ಎಂದು ರಾಹುಲ್ ಆರೋಪಿಸಿದರು.
'ಮಧ್ಯಪ್ರದೇಶ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಅದು ನಮ್ಮ ಸರ್ಕಾರವಾಗಿತ್ತು. ಆದರೆ, ಬಿಜೆಪಿಯವರು 20 ರಿಂದ 25 ಭ್ರಷ್ಟ ಶಾಸಕರಿಗೆ ಕೋಟಿಗಟ್ಟಲೆ ಹಣ ನೀಡಿ ಖರೀದಿಸಿದರು. ಆ ನಂತರ ಸರ್ಕಾರ ರಚಿಸಿದರು' ಎಂದು ಬುರ್ಹಾನ್ಪುರದಲ್ಲಿ ನಡೆದ ಸಭೆಯಲ್ಲಿ ಅವರು ಹೇಳಿದರು.
'ದೇಶದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಮಾರ್ಗಗಳು ಮುಚ್ಚಲ್ಪಟ್ಟಿವೆ. ಈ ಕಾರಣಕ್ಕಾಗಿಯೇ ಭಾರತ್ ಜೋಡೊ ಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಲೋಕಸಭೆ, ಚುನಾವಣಾ ಮಾರ್ಗ, ಪತ್ರಿಕಾ ರಂಗ ಸೇರಿದಂತೆ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಎಲ್ಲಾ ಸಂಸ್ಥೆಗಳನ್ನು ಆರ್ಎಸ್ಎಸ್ ಹಾಗೂ ಬಿಜೆಪಿ ಮೂಲೆಗುಂಪು ಮಾಡಿದೆ. ಎಲ್ಲ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿಯವರೇ ತುಂಬಿಹೋಗಿದ್ದಾರೆ' ಎಂದು ಟೀಕಿಸಿದರು.

'ನ್ಯಾಯಾಂಗ ಒತ್ತಡದಲ್ಲಿದೆ. ನ್ಯಾಯಾಲಯಗಳ ಮೇಲೆ ಸಿದ್ದಾಂತವನ್ನು ಹೇರಲಾಗುತ್ತಿದೆ. ನಮಗಿರುವುದು ಇದೊಂದೇ ಮಾರ್ಗ. ಇದೊಂದೇ ಆಯ್ಕೆ. ನಾವು ರಸ್ತೆಗೆ ಇಳಿಯುವುದು. ಜನರನ್ನು ಅಪ್ಪಿಕೊಳ್ಳುವುದು. ರೈತರ ಮಾತುಗಳನ್ನು ಆಲಿಸುವುದು. ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳೊಂದಿಗೆ ಬೆರೆಯುವುದು..' ಎಂದು ರಾಹುಲ್ ಹೇಳಿದರು.
'ನಾನು 2000 ಕಿಮೀ ದೂರ ಕ್ರಮಿಸಿದ್ದೇನೆ. ಸ್ನೇಹಿತರೇ, ನಾನು ದಣಿದಿರುವುದನ್ನು ನೀವು ನೋಡಿದ್ದೀರಾ? ನನ್ನ ಮುಖದಲ್ಲಿ ಒಂದು ಕ್ಷಣವೂ ಆಯಾಸವೆಂಬುದು ಕಂಡಿಲ್ಲ. ನಾನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ಸಂಜೆ 6 ಗಂಟೆ ಸಮಯದಲ್ಲೂ ವೇಗವಾಗಿಯೇ ನಡೆಯುತ್ತೇನೆ. ನನ್ನಲ್ಲಿನ ಈ ಉತ್ಸಹವು ಈ ಉತ್ಸಾಹವು ಜನರು ನೀಡಿದ ಪ್ರೋತ್ಸಾಹದ ಪರಿಣಾಮವಾಗಿದೆ' ಎಂದು ತಿಳಿಸಿದರು.
ಇದೇ ವೇಳೆ, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.
'ಹಿಂದಿನ ಸರ್ಕಾರಗಳು ಯುವಕರ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದವು. ಯುವಕರು ಭಾರತೀಯ ಸೇನೆ ಮತ್ತು ರಾಷ್ಟ್ರಧ್ವಜವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮೋದಿ ಸರ್ಕಾರ ಯುವಕರ ಆಶೋತ್ತರಗಳನ್ನು ನಾಶಮಾಡಿದೆ' ಎಂದು ತಿಳಿಸಿದರು.

ಕೇವಲ ನಾಲ್ಕು ವರ್ಷ ಅಗ್ನಿವೀರರಾಗಿ ಸೇವೆ ಸಲ್ಲಿಸುವ ಯುವಕರನ್ನು ಜೀವನಪರ್ಯಂತ ನಿರುದ್ಯೋಗಿಗಳನ್ನಾಗಿಸುವ ಯೋಜನೆಯನ್ನು ಸರ್ಕಾರ ತಂದಿದೆ. ಆ ಮೂಲಕ ಸೈನಿಕರೊಂದಿಗೆ 'ಪವಿತ್ರ ಸಂಬಂಧ'ವನ್ನು ಮೋದಿ ಸರ್ಕಾರ ಕಡಿದುಕೊಂಡಿದೆ ಎಂದರು.
ಭಾರತ್ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿದೆ. ಈಗಾಗಲೇ ದೇಶದ ಆರು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಪ್ರಸ್ತುತ ಮಧ್ಯಪ್ರದೇಶವನ್ನು ಪ್ರವೇಶಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಕ್ರಮಿಸಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಕಾಂಗ್ರೆಸ್ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಕಲಾವಿದರು, ವ್ಯಾಪಾರಿಗಳು, ಕಾರ್ಮಿಕರು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಯಾತ್ರೆಯು 3500 ಕಿಮೀ ಕ್ರಮಿಸಲಿದೆ.
ಗುರುವಾರ ಮಧ್ಯಪ್ರದೇಶದ ಇಂದೋರ್ಗೆ ಯಾತ್ರೆ ತಲುಪಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ಅವರ ಪತಿ ರಾಬರ್ಟ್ ವಾದ್ರಾ ಪಾಲ್ಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications