2019 ರ ತಬ್ರೇಜ್ ಅನ್ಸಾರಿ ಹತ್ಯೆ ಪ್ರಕರಣ: ಎಲ್ಲಾ ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ
ನವದೆಹಲಿ, ಜುಲೈ. 05: 2019 ರ ತಬ್ರೇಜ್ ಅನ್ಸಾರಿ ಹತ್ಯೆ ಪ್ರಕರಣದ 10 ಅಪರಾಧಿಗಳಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ನರಹತ್ಯೆ) ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಬುಧವಾರ ವಿಧಿಸಲಾಗಿದೆ. ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಜಾರ್ಖಂಡ್ನ ಸೆರೈಕೆಲಾ ನ್ಯಾಯಾಲಯವು ಘೋಷಿಸಿದ್ದು, ಅಪರಾಧಿಗಳಿಗೆ 15,000 ರೂಪಾಯಿ ದಂಡವನ್ನೂ ವಿಧಿಸಿದೆ.
ಈ ಹಿಂದೆ ಜೂನ್ 27 ರಂದು ನ್ಯಾಯಾಲಯವು 10 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಅಶೋಕ್ ಕುಮಾರ್ ರಾಯ್ ಅವರು ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಜುಲೈ 5 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.

ಆರೋಪಿಗಳಲ್ಲಿ ಒಬ್ಬರಾದ ಕುಶಾಲ್ ಮಹಾಲಿ ಅವರು ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದರು ಎಂದು ಅಶೋಕ್ ಕುಮಾರ್ ರಾಯ್ ಪಿಟಿಐಗೆ ತಿಳಿಸಿದ್ದಾರೆ. ಇತರ ಇಬ್ಬರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಪರಾಧಿಗಳಾದ ಭೀಮ್ ಸಿಂಗ್ ಮುಂಡಾ, ಕಮಲ್ ಮಹತೋ, ಮದನ್ ನಾಯಕ್, ಅತುಲ್ ಮಹಾಲಿ, ಸುನಾಮೋ ಪ್ರಧಾನ್, ವಿಕ್ರಮ್ ಮಂಡಲ್, ಚಾಮು ನಾಯಕ್, ಪ್ರೇಮ್ ಚಂದ್ ಮಹಾಲಿ, ಮಹೇಶ್ ಮಹಾಲಿ, ಅಮಿತ್ ಶೇಖರ್ ಅವರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದ ಕೂಡಲೇ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪ್ರಮುಖ ಆರೋಪಿ ಪ್ರಕಾಶ್ ಮಂಡಲ್ ಅಲಿಯಾಸ್ ಪಪ್ಪು ಮಂಡಲ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳ್ಳತನದ ಆರೋಪದ ಮೇಲೆ ತಬ್ರೇಜ್ ಅನ್ಸಾರಿ ಅವರನ್ನು ಜೂನ್ 17, 2019 ರಂದು ಸೆರೈಕೆಲಾ ಪೊಲೀಸ್ ಠಾಣೆ ವ್ಯಾಪ್ತಿಯ ಧಟ್ಕಿಡಿಹ್ ಗ್ರಾಮದಲ್ಲಿ ರಾಡ್ಗಳಿಂದ ಮನ ಬಂದಂತೆ ಥಳಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಪುಣೆಯಲ್ಲಿ ಕೂಲಿ ಮತ್ತು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ತಬ್ರೇಜ್ ಅನ್ಸಾರಿ, ಈದ್ ಆಚರಿಸಲು ಮನೆಗೆ ಬಂದಿದ್ದಾಗ ಮೋಟಾರ್ ಸೈಕಲ್ ಕದಿಯಲು ಯತ್ನಿಸಿದ ಶಂಕೆಯಿಂದ ಹೊಡೆದು ಹತ್ಯೆ ಮಾಡಿದ್ದರು.












Click it and Unblock the Notifications