ಅಪಾಯಕಾರಿ ಹಂತಕ್ಕೆ ತಲುಪಿದ ದೆಹಲಿ ವಾಯುಮಾಲಿನ್ಯ ಪ್ರಮಾಣ
ನವದೆಹಲಿ, ನವೆಂಬರ್, 3: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಈ ಮೂಲಕ ದೆಹಲಿಯ ವಾಯುಮಾಲಿನ್ಯ ಪ್ರಮಾಣವು ಅಪಾಯಕಾರಿ ಹಂತಕ್ಕೆ ತಲುಪಿದೆ.
ನೆರೆಯ ರಾಜ್ಯಗಳಲ್ಲಿ ಕೃಷಿ ಬೆಳೆಗಳ ನಿರುಪಯೋಗ ತಾಜ್ಯವನ್ನು ಸುಡಲಾಗುತ್ತಿದೆ. ಹೊಗೆ ಉಗುಳುವ ವಾಹನಗಳಿಂದ ಗಾಳಿಯು ಮಲಿನಗೊಂಡಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ತೀವ್ರ ಹೆಚ್ಚಳ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ 408 (AQI)ಕ್ಕೆ ತಲುಪಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಾಲಿನ್ಯದ ಹೆಚ್ಚಳಕ್ಕೆ ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳೂ ಕಾರಣವಾಗಿವೆ ಎಂದು ಇಲಾಖೆ ಹೇಳಿದೆ.
ಚಳಿಗಾಲ ಆರಂಭವಾಗಿದ್ದರಿಂದ ಗಾಳಿಯಲ್ಲಿ ಅತಿಯಾದ ತೇವಾಂಶವಿದೆ. ಈ ತೇವಾಂಶವು ಧೂಳಿನ ಕಣಗಳನ್ನು ಹಿಡಿದಿಟ್ಟುಕೊಳ್ಳುವುದರಿಂದಲೂ ಗಾಳಿಯ ಗುಣಮಟ್ಟ ಕುಸಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಯ ವಿಷಕಾರಿ ಗಾಳಿಯನ್ನು ಸೇವಿಸುತ್ತಿರುವ ಕೆಲವು ನಿವಾಸಿಗಳು ಆರೋಗ್ಯ ತೊಂದರೆ ಎದುರಿಸುತ್ತಿದ್ದಾರೆ. ವಯಸ್ಸಾದ ಹಿರಿಯರು ಹಾಗೂ ಶಾಲೆಗೆ ತೆರಳುವ ಮಕ್ಕಳು ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ವರದಿ ಆಗಿದೆ.
ವಿಷಕಾರಿ ಗಾಳಿಗೆ ದೀರ್ಘ ಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಮಕ್ಕಳು ಬೆಳಿಗ್ಗೆ ಶಾಲೆಗಳಿಗೆ ಹೊರಡುವ ಸಮಯದಲ್ಲಿ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ವಾಯು ಗುಣಮಟ್ಟ ಕುಸಿದ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಒತ್ತಾಯಿಸಿದೆ.
ಶಾಲೆಗಳನ್ನು ಮುಚ್ಚುವ ಬದಲು ಮಾಲಿನ್ಯ ಮಟ್ಟವನ್ನು ತಡೆಗಟ್ಟಲು ಅಧಿಕಾರಿಗಳು ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೋಷಕರು ಹೇಳಿದ್ದಾರೆ.
'ಶಾಲೆಗಳನ್ನು ಮುಚ್ಚುವುದು ಪರಿಹಾರವಲ್ಲ, ಮಾಲಿನ್ಯ ಮಟ್ಟವನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಮಹಿಳೆಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.

ವಾಯು ಗುಣಮಟ್ಟ ಸೂಚ್ಯಂಕ ಪ್ರಮಾಣ
0 ಯಿಂದ 5 - ಉತ್ತಮ
51 -100 - ಸಮಾಧಾನಕರ
101 - 200 - ಮಧ್ಯಮ
201 - 300 - ಕಳಪೆ
301 - 400 - ಅತಿ ಕಳಪೆ
401- 500 - ಅತ್ಯಂತ ಅಪಾಯಕಾರಿ












Click it and Unblock the Notifications