ಉಕ್ರೇನ್ನಿಂದ 241 ಮಂದಿ ಭಾರತೀಯರನ್ನು ಹೊತ್ತುಬಂದ ಏರ್ ಇಂಡಿಯಾ
ನವದೆಹಲಿ, ಫೆಬ್ರವರಿ 23: ಉಕ್ರೇನ್ನಿಂದ ಭಾರತಕ್ಕೆ 241 ಮಂದಿ ಭಾರತೀಯರು ಬಂದಿಳಿದಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಗೆ ಬಂದಿಳಿದಿದೆ.
Recommended Video
ವೈದ್ಯಕೀಯ ವಿದ್ಯಾರ್ಥಿ ಅನಿಲ್ ರಪ್ರಿಯಾ ಮಾತನಾಡಿ, ಉಕ್ರೇನ್ನಲ್ಲಿ ಸದ್ಯಕ್ಕೆ ಗಂಭೀರ ಪರಿಸ್ಥಿತಿ ಇಲ್ಲ. ಯುದ್ಧ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿಂದಾಗಿ ಭಾರತೀಯ ರಾಯಭಾರಿ ಕಚೇರಿಯ ನಿರ್ದೇಶನದ ಮೇರೆಗೆ ನಾವು ಭಾರತಕ್ಕೆ ವಾಪಸ್ ಬಂದಿದ್ದೇವೆ ಎಂದರು.
ಸದ್ಯಕ್ಕೆ ಉಕ್ರೇನ್ನಲ್ಲಿ ಸಾಮಾನ್ಯ ಸ್ಥಿತಿ ಇದ್ದರೂ ನಾವು ಅಲ್ಲಿರುವುದು ಉತ್ತಮವಲ್ಲ ಎಂದು ನಮ್ಮ ಪೋಷಕರು ತಿಳಿಸಿದ್ದರು. ಹೀಗಾಗಿ ಭಾರತಕ್ಕೆ ವಾಪಸ್ ಆಗಿದ್ದೇವೆ ಎಂದು ಉಕ್ರೇನ್ನಲ್ಲಿ ವ್ಯಾಸಂಗ ಮಾಡುವ ದೆಹಲಿಯ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಅದರಲ್ಲಿ ಮೊದಲ ವಿಮಾನ ನಿನ್ನೆ ರಾತ್ರಿ ಉಕ್ರೇನ್ನಿಂದ 241 ಭಾರತೀಯರನ್ನು ಹೊತ್ತು ತಂದಿದೆ.
ಉಕ್ರೇನ್ನಲ್ಲಿ ಅಸಾಧಾರಣ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರನ್ನು ಕೇಳಿಕೊಂಡಿತ್ತು. ಅದರಂತೆ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ನಾಗರಿಕರು ಭಾರತಕ್ಕೆ ಬಂದಿಳಿದಿದ್ದಾರೆ.
ಇದಲ್ಲದೇ ಫೆಬ್ರವರಿ 22, 24, 26 ರಂದು ಇನ್ನೂ ಮೂರು ವಿಮಾನಗಳು ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಲವಾರು ವಿದ್ಯಾರ್ಥಿಗಳು, ಪ್ರಜೆಗಳು ತಾಯ್ನಾಡಿಗೆ ವಾಪಸ್ ಆಗಿದ್ದು ಸಂತಸ ತಂದಿದೆ. ಭಾರತೀಯ ರಾಯಭಾರಿ ಕಚೇರಿಯ ಮನವಿಯ ಮೇರೆಗೆ ನಾವು ಇಲ್ಲಿಗೆ ಮರಳಿದ್ದೇವೆ ಎಂದು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಗಡಿಯಲ್ಲಿ ದಿನೇದಿನೆ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಭಾರತ ಇಂದು ತೀವ್ರ ಆತಂಕ ವ್ಯಕ್ತಪಡಿಸಿದೆ. ಪೂರ್ವ ಯುರೋಪ್ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಬೇಕು ಮತ್ತು ಸಮಸ್ಯೆಗೆ ಪರಸ್ಪರ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.
ಪೂರ್ವ ಉಕ್ರೇನ್ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪ್ರದೇಶಗಳ ಸ್ವಾತಂತ್ರ್ಯವನ್ನು ರಷ್ಯಾ ಮಾನ್ಯ ಮಾಡುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಹಿರಂಗವಾಗಿ ಘೋಷಿಸಿದ ಬಳಿಕ, ಉಕ್ರೇನ್, ಯುಎಸ್ ಮತ್ತು ಯುಕೆ ಜತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಅಧಿವೇಶನ ನಡೆಸಿತು.
ಈ ಅಧಿವೇಶನದಲ್ಲಿ ಭಾಗಿಯಾದ ಭಾರತದ ಟಿ.ಎಸ್.ತಿರುಮೂರ್ತಿ (ವಿಶ್ವಸಂಸ್ಥೆಯ ಭಾರತದ ಪರ ಶಾಶ್ವತ ಪ್ರತಿನಿಧಿ), ನಾವು ಉಕ್ರೇನ್-ರಷ್ಯಾ ಗಡಿಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ, ತುಂಬ ಹತ್ತಿರದಿಂದ ಗಮನಿಸುತ್ತಿದ್ದೇವೆ. ಹಾಗೇ, ರಷ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆಯೂ ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ರಷ್ಯಾ ಫೆಡರೇಶನ್ ಮತ್ತು ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಲೇ ಇದೆ. ಈ ಬೆಳವಣಿಗಗಳಿಂದ ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ದುರ್ಬಲಗೊಳ್ಳುತ್ತಿದೆ. ಸದ್ಯ ಎಲ್ಲ ಭಾಗಗಳಿಂದಲೂ ಸಂಯಮ ಬೇಕು. ಎಲ್ಲ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ಪರಿಗಣಿಸಿ, ಪ್ರಾದೇಶಿಕವಾಗಿ ದೀರ್ಘಾವಧಿ ಶಾಂತಿ ಮತ್ತು ಸುಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ವರ್ತಿಸಬೇಕು ಎಂದು ತಿರುಮೂರ್ತಿ ಹೇಳಿದ್ದಾರೆ.
ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ ಅವರು, ಇತ್ತೀಚೆಗೆ ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ನಾವು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ ಭಾರತ ಮೌನವಹಿಸಿತ್ತು. ಆದರೆ ಬಿಕ್ಕಟ್ಟು ಹೆಚ್ಚುತ್ತಿದ್ದಂತೆ, ಪರಸ್ಪರ ದೇಶಗಳು ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಕರೆ ನೀಡಿತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಸಾಧ್ಯತೆ ಹೆಚ್ಚುತ್ತಿದ್ದಂತೆ, ಉಕ್ರೇನ್ನಲ್ಲಿರುವ ಭಾರತೀಯರು ವಾಪಸ್ ದೇಶಕ್ಕೆ ತೆರಳಿ ಎಂಬ ಸೂಚನೆಯನ್ನು ಭಾರತ ನೀಡಿದೆ. ಇನ್ನೂ ಸಹ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಉಕ್ರೇನ್ಗೆ ಏರ್ ಇಂಡಿಯಾ ವಿಮಾನಗಳ ಸಂಚಾರ ಆರಂಭಿಸಿದೆ.
ಉಕ್ರೇನ್ನಲ್ಲಿರುವ ಭಾರತೀಯರನ್ನು ವಾಪಸ್ ದೇಶಕ್ಕೆ ಕರೆತರಲು ಇಂದು ಒಂದು ವಿಮಾನ ಹೊರಡಲಿದ್ದು, ಮತ್ತೊಂದು ವಿಮಾನ ಗುರುವಾರ ಹಾಗೂ ಮೂರನೇ ವಿಮಾನ ಶನಿವಾರ ಹೊರಡಲಿದೆ ಎಂದು ಹೇಳಲಾಗಿದೆ. ಉಕ್ರೇನ್ನಲ್ಲಿ ಇರುವ ಭಾರತೀಯರಲ್ಲಿ ಹೆಚ್ಚಿನ ಜನ ವಿದ್ಯಾರ್ಥಿಗಳೇ ಆಗಿದ್ದು, ಅವರ ಸುರಕ್ಷತೆ ನಮ್ಮ ಆದ್ಯತೆ ಎಂದು ಭಾರತ ಹೇಳಿದೆ. ಈ ನಿಟ್ಟಿನಲ್ಲಿರುವ ಉಕ್ರೇನ್ನಲ್ಲಿರುವ ರಾಯಭಾರಿ ಕಚೇರಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.












Click it and Unblock the Notifications