ಬಿಜೆಪಿ ದಂಡಯಾತ್ರೆ ತಡೆಯಲು ರಾಹುಲ್ ಗಾಂಧಿಯಿಂದ ಸಾಧ್ಯವೇ?
2014ರ ಜಯನಾಮ ಸಂವತ್ಸರ ಕಾಂಗ್ರೆಸ್ ಪಾಲಿಗೆ ಜಯವನ್ನು ತಂದುಕೊಂಡದೇ ದುಸ್ವಪ್ನದಂತೆ ಕಾಡಿತ್ತು. ಒಂದೆಡೆ ಲೋಕಸಭೆಯ ಚುನಾವಣೆಯಲ್ಲಿನ ಹೀನಾಯ ಸೋಲು, ಇನ್ನೊಂದೆಡೆ ವಿಧಾನಸಭಾ ಚುನಾವಣೆಯಲ್ಲೂ ಕಳಚಿಕೊಳ್ಳುತ್ತಿರುವ ಪಕ್ಷದ ಅಸ್ತಿತ್ವ.
ಹೈಕಮಾಂಡ್ ಮಟ್ಟದಲ್ಲೇ ಕಳೆಗುಂದುತ್ತಿರುವ ಪಕ್ಷದ ವರ್ಚಸ್ಸು, ಪಕ್ಷದ ಸಾಲು ಸಾಲು ಸೋಲಿನಿಂದ ಕಂಗೆಟ್ಟಿರುವ ಮೂಲ ಕಾರ್ಯಕರ್ತರಿಗೆ ರಾಹುಲ್ ಗಾಂಧಿ 2015ರಲ್ಲಿ ಸಂಜೀವಿನಿ ಟಾನಿಕ್ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನುವುದು ಸದ್ಯದ ಸುದ್ದಿ.
ಕಾಂಗ್ರೆಸ್ ಇಂದು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹಿಂದೊಮ್ಮೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡಾ ಎದುರಿಸಿದ್ದರು. ತುರ್ತು ಪರಿಸ್ಥಿತಿಯ ಅವಧಿ ಮುಗಿದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು.
ಆ ಸಮಯದಲ್ಲಿ ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದ ಇಂದಿರಾ, ಚುನಾವಣೆಯಲ್ಲಿ ಗೆದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದರು. (ಅಂಬಿ ವಿರುದ್ದ ಮಂಡ್ಯ ಕಾಂಗ್ರೆಸ್ಸಿಗರ ಪತ್ರ)
ಆದರೆ ಅಂದು ಅಜ್ಜಿ ಮಾಡಿದ ಸಾಧನೆಯನ್ನು ಇಂದು ಮೊಮ್ಮಗ ಮಾಡಲು ಸಾಧ್ಯವೇ ಎನ್ನುವುದು ಪಕ್ಷದ ಕಾರ್ಯಕರ್ತರಿಂದ ಹಿಡಿದು, ಹಿರಿಯ ಮತ್ತು ಕಿರಿಯ ನಾಯಕರುಗಳಿಗೆ ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಅಂದಿನ ರಾಜಕೀಯ ಮತ್ತು ಪರಿಸ್ಥಿತಿಯೇ ಬೇರೆ, ಈಗಿನ ಸ್ಥಿತಿಗತಿಗಳೇ ಬೇರೆ.
ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ರಾಜಕೀಯದ ನೆರಳಿನಲ್ಲಿ ಬೆಳೆದವರು. ಸೋನಿಯಾ ಗಾಂಧಿ ಪವರ್ ಫುಲ್ ಮಹಿಳೆ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಎಲ್ಲದಕ್ಕೂ ಹೈಕಮಾಂಡ್ ಎನ್ನುವ ಹೊಸ ಸಂಪ್ರದಾಯಕ್ಕೆ ಮರುಜೀವ ಕೊಟ್ಟಿದ್ದೇ ಸೋನಿಯಾ ಎಂದರೆ ತಪ್ಪಾಗದು.
ಲೋಕಸಭೆ ಮತ್ತು ಕೆಲವು ರಾಜ್ಯಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿನ ಸೋಲು, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಹೆಚ್ಚಲು ಕಾರಣವಾಯಿತು.
ಕೆಲವು ಹಿರಿಯ ಮುಖಂಡರು, ಇಂದಿರಾ ಕುಟುಂಬದ ಆಪ್ತರೇ ರಾಹುಲ್ ವಿರುದ್ದ ಹೇಳಿಕೆ ನೀಡಲಾರಂಭಿಸಿದರು. ಕಾರ್ಯಕರ್ತರು ರಾಹುಲ್ ಬದಲು ಪ್ರಿಯಾಂಕಾಗೆ ಪಕ್ಷದ ಜವಾಬ್ದಾರಿ ವಹಿಸಿ ಎಂದು ದಂಬಾಲು ಬಿದ್ದದ್ದೂ ಸಾರ್ವಜನಿಕವಾಗಿತ್ತು.
ಇವೆಲ್ಲರದರ ನಡುವ್ ರಾಹುಲ್ ಗಾಂಧಿ ನೀಡುತ್ತಿದ್ದ ಬಾಲಿಶ ಹೇಳಿಕೆಗಳು ಪಕ್ಷದ ವರ್ಚಸ್ಸನ್ನು ಇನ್ನಷ್ಟು ಕುಬ್ಜವಾಗಿಸಿತು. ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ನೀಡುತ್ತಿದ್ದ ಹೇಳಿಕೆಗಳು ಸಾರ್ವಜನಿಕವಾಗಿ ನಗೆಪಟಾಲಿಗೆ ಗುರಿಯಾಗುತ್ತಿದ್ದವು. (ರಾಹುಲ್ ಗಾಂಧಿ ದೃಢ ಹೆಜ್ಜೆ ಇಡಲಿ)
ರಾಬರ್ಟ್ ವಾಧ್ರಾ ಅವರ ಭೂಹಗರಣ ಸೋನಿಯಾ ಕುಟುಂಬವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ಲೋಕಸಭಾ ಅಧಿವೇಶನದಲ್ಲಿ ಮತಾಂತರ ಕುರಿತಂತೆ ಗದ್ದಲ ಎಬ್ಬಿಸಿ ಕಲಾಪ ನಡೆಯದಂತೆ ಮಾಡಿದ್ದೂ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ತಂದಿದೆ.
ನರೇಂದ್ರ ಮೋದಿ ವರ್ಚಸ್ಸು ಮತ್ತು ಆಡಳಿತ ಶೈಲಿಯ ಮುಂದೆ ಕಾಂಗ್ರೆಸ್ ಪಕ್ಷದ ಇಮೇಜು ದಿನದಿಂದ ದಿನಕ್ಕೆ ಕಳೆಗುಂದತ್ತಲೇ ಸಾಗುತ್ತಿದೆ.
ಇನ್ನೊಂದೆಡೆ ಬಿಜೆಪಿಯ ಚಾಣಾಕ್ಷ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರ ತಂತ್ರಗಾರಿಕೆ ಅಸೆಂಬ್ಲಿ ಚುನಾವಣೆಯಲ್ಲೂ ಪಕ್ಷಕ್ಕೆ ಉತ್ತಮ ಲಾಭ ತಂದುಕೊಡುತ್ತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ.
ಈ ಸೋಲಿನಿಂದ ಹೊರಬರಲು, ಪಕ್ಷಕ್ಕೆ ಮತ್ತೆ ಬಲವರ್ಧನೆ ನೀಡಲು ಕಾಂಗ್ರೆಸ್ ಈಗ ನೀಲಿನಕ್ಷೆಯನ್ನು ಸಿದ್ದತೆಯನ್ನು ಸಿದ್ದಪಡಿಸಿಕೊಳ್ಳುತ್ತಿದೆ. ಈ ನೀಲಿನಕ್ಷೆ ಮಾರ್ಚ್ 2015ರ ಅಂತ್ಯದೊಳಗೆ ಹೈಕಮಾಂಡ್ ಕೈತಲುಪಲಿದೆ.
ಈ ಮಧ್ಯೆ, ಎಲ್ಲಾ ರಾಜ್ಯದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಸಂಪರ್ಕಿಸಿರುವ ಸೋನಿಯಾ, ಬೇರು ಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. (ಮೋದಿ ವಿಷಬೀಜ ಬಿತ್ತುತಿಹರು)
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಲ್ಲಾ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸಂಪರ್ಕದಲ್ಲಿದ್ದು ಅವರ ಮಾಹಿತಿ ಮತ್ತು ಸಲಹೆಯನ್ನು ಕಲೆಕಾಹುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಕೇಳಿಕೊಂಡಿದ್ದಾರೆ.
ಸಾಮಾಜಿಕ ತಾಣಗಳ ಮೂಲಕ ಮೋದಿ ಸರಕಾರ ಜನರನ್ನು ತಲುಪುತ್ತಿರುವ ಹಾಗೇ, ಕಾಂಗ್ರೆಸ್ ಕೂಡಾ ಈ ನಿಟ್ಟಿನಲ್ಲಿ ಹೆಜ್ಜೆ ಇಡಲು ಕಾರ್ಯತಂತ್ರ ರೂಪಿಸಲು ಪಕ್ಷದ ಯುವ ಘಟಕಕ್ಕೆ ಸೂಚಿಸಿದೆ.
ಈ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಇದೇ ಮಾರ್ಚ್ ತಿಂಗಳಿನಲ್ಲಿ ಸಭೆ ಸೇರಲು ಕಾಂಗ್ರೆಸ್ ನಿರ್ಧರಿಸಿದೆ ಮತ್ತು ಕೆಲವೊಂದು ನಿರ್ಣಾಯಕ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ವರಿಷ್ಠರು ಬರಲಿದ್ದಾರೆ ಎನ್ನುವ ಮಾಹಿತಿಯಿದೆ.
ರಾಹುಲ್ ಗಾಂಧಿಗೆ ಎಲ್ಲಾ ರೀತಿಯ ಪವರ್ ನೀಡಿ ಅವರನ್ನು ಸೂಪರ್ ಪವರ್ ಮಾಡುವುದು ಪಕ್ಷದ ಸದ್ಯದ ಗುರಿ.
ಒಂದು ವೇಳೆ ರಾಹುಲ್ ಗಾಂಧಿ ಪಕ್ಷದ ಸಂಪೂರ್ಣ ನಾಯಕತ್ವ/ಜವಾಬ್ದಾರಿ ವಹಿಸಿಕೊಳ್ಳಲು ಸಿದ್ದವಿಲದೇ ಇದ್ದ ಪಕ್ಷದಲ್ಲಿ ಬೇರೆ ಆಯ್ಕೆಯ ಬಗ್ಗೆಯೂ ಮಾರ್ಚ್ ತಿಂಗಳ ಸಭೆಯಲ್ಲಿ ನಿರ್ಧರಿಸಲಾಗುವುದು ಎನ್ನಲಾಗುತ್ತಿದೆ.