ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಉಚ್ಚಾಟನೆ
ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ, ಅಧ್ಯಕ್ಷ ಮಧುಸೂದನನ್ ಉಚ್ಚಾಟಿಸಿದ್ದಾರೆ.
ಚೆನ್ನೈ, ಫೆ 10: ಇದಪ್ಪಾ ವರಸೆ ಅಂದ್ರೆ.. ತನ್ನನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತೊಗೆದ ಕೆಲವೇ ಗಂಟೆಯಲ್ಲಿ, ಎಐಎಡಿಎಂಕೆ ಅಧ್ಯಕ್ಷ ಮಧುಸೂದನನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಿದ್ದಾರೆ.
ಈ ನಡುವೆ, ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಟರಾಜನ್ ನಡುವಿನ ' ನಾನಾ..ನೀನಾ' ರಾಜಕೀಯ ಸಮರ ತಾರಕಕ್ಕೇರಿದ್ದು, ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಪನ್ನೀರ್ ಸೆಲ್ವಂ ಕಡೆ ವಾಲುತ್ತಿರುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. (ಶಶಿಕಲಾ ಮತ್ತು ಮನ್ನಾರ್ ಗುಡಿ ಗ್ಯಾಂಗ್)
ಇತ್ತ, ಕರ್ನಾಟಕ ರಾಜ್ಯದ ಕಾಪಿರೈಟ್ ಸ್ವತ್ತಿನಂತಿದ್ದ ರಿಸಾರ್ಟ್ ರಾಜಕಾರಣ, ತಮಿಳುನಾಡಿನಲಿ ಶುಕ್ರವಾರವೂ (ಫೆ 10) ಮುಂದುವರಿದಿದ್ದು, ಶಶಿಕಲಾ ನಟರಾಜನ್ ಕಡೆಯವರು ಪಕ್ಷದ ಶಾಸಕರನ್ನು ಚೆನ್ನೈ ಹೊರವಲಯದ ರಿಸಾರ್ಟಿಗೆ ಕರೆದು ಕೊಂಡು ಹೋಗಿದ್ದಾರೆ.
ಆದರೆ ಖಚಿತ ಮಾಹಿತಿಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಚಿನ್ನಮ್ಮನ ಮೇಲೆ ನಿಷ್ಠೆ ತೋರುತ್ತಿರುವವರ ಶಾಸಕರ ಸಂಖ್ಯೆ ಕುಗ್ಗುತ್ತಿದೆ. 131 ಶಾಸಕರು ನಮ್ಮ ಜೊತೆ ಇದ್ದಾರೆಂದು ಶಶಿಕಲಾ ಬಣ ಹೇಳುತ್ತಿದ್ದರೂ, ರೆಸಾರ್ಟಿಗೆ ಹೋದವರು 90 ಶಾಸಕರು ಮಾತ್ರ ಎನ್ನುವ ಮಾಹಿತಿಯಿದೆ.
ಓ ಪನ್ನೀರ್ ಸೆಲ್ವಂಗೆ ಬೆಂಬಲ ಸೂಚಿಸಿದ್ದ ಪಕ್ಷದ ಅಧ್ಯಕ್ಷ ಮಧುಸೂದನನ್ ಅವರನ್ನು ಶಶಿಕಲಾ ನಟರಾಜನ್ ಎಐಡಿಎಂಕೆಯಿಂದ ಉಚ್ಚಾಟಿಸಿದ್ದರು. ಟಿಟ್ ಫಾರ್ ಟ್ಯಾಟ್ ಎನ್ನುವಂತೆ, ಅವರ್ಯಾರು ನನ್ನನ್ನು ಉಚ್ಚಾಟಿಸಲು ಎಂದು ಮಧುಸೂದನ್, ಶಶಿಕಲಾ ಅವರನ್ನೇ ಈಗ ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಪನ್ನೀರ್ ಸೆಲ್ವಂಗೆ ಡಿಎಂಕೆ ಬೆಂಬಲ, ಮುಂದೆ ಓದಿ..
ಶಶಿಕಲಾ ವಿರುದ್ದ ಹರಿಹಾಯ್ದ ಮಧುಸೂದನನ್
ಶಶಿಕಲಾ ವಿರುದ್ದ ಟೀಕಾ ಪ್ರಹಾರ ನಡೆಸಿರುವ ಎಐಎಡಿಎಂಕೆ ಅಧ್ಯಕ್ಷ ಮಧುಸೂದನನ್, ಇದು ಕಾರ್ಯಕರ್ತರನ್ನು ನಂಬಿ ಬೆಳೆದಿರುವ ಪಕ್ಷ. ಕುಟುಂಬ ರಾಜಕಾರಣ ನಮ್ಮಲಿಲ್ಲ. ಹೀಗಿರುವಾಗ, ಶಶಿಕಲಾ ತನ್ನ ಕುಟುಂಬವನ್ನು ಪಕ್ಷದ ಆಂತರಿಕ ವಿಚಾರಕ್ಕೆ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಮನ್ನಾರ್ ಗುಡಿ ಗ್ಯಾಂಗ್ ವಿರುದ್ದ ಹರಿಹಾಯ್ದಿದ್ದಾರೆ.
ಶಶಿಕಲಾ ಪಕ್ಷದಿಂದ ಉಚ್ಚಾಟನೆ
ತನ್ನನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಶಶಿಕಲಾ ನಟರಾಜನ್ ಅವರನ್ನು ಮಧುಸೂದನನ್ ಉಚ್ಚಾಟಿಸಿದ್ದಾರೆ.
ಡಿಎಂಕೆ ಬೆಂಬಲ ಪನ್ನೀರ್ ಸೆಲ್ವಂಗೆ
ದಿನದ ಮತ್ತೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ, ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಪರವಾಗಿ ಪ್ರಮುಖ ವಿರೋಧ ಪಕ್ಷ ನಿಂತಿದೆ. ಸದನದಲ್ಲಿ ಅಗತ್ಯ ಬಿದ್ದರೆ ಪನ್ನೀರ್ ಸೆಲ್ವಂ ಪರವಾಗಿ ನಮ್ಮ ಶಾಸಕರು ಮತ ಚಲಾಯಿಸಲಿದ್ದಾರೆಂದು, ಡಿಎಂಕೆ ಮುಖಂಡ ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆ ಮುಖಂಡ
ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿಯಾದ ಡಿಎಂಕೆ ನಿಯೋಗ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲೂ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ, ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಸ್ಟಾಲಿನ್, ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.
ಶಶಿಕಲಾ ನಟರಾಜನ್ ಆರೋಪ
ನಿನ್ನೆಯಷ್ಟೇ, ಪಕ್ಷದೊಳಗಿನ ಗೊಂದಲಕ್ಕೆ ಡಿಎಂಕೆ ಕಾರಣ. ಪನ್ನೀರ್ ಸೆಲ್ವಂ, ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆಂದು ಶಶಿಕಲಾ ಆರೋಪಿಸಿದ್ದರು. ಇದಕ್ಕೆ ಪೂರಕ ಎನ್ನುವಂತೆ ಸ್ಟಾಲಿನ್, ಪನ್ನೀರ್ ಸೆಲ್ವಂಗೆ ಅಗತ್ಯ ಬಿದ್ದರೆ ಬೆಂಬಲ ಸೂಚಿಸುತ್ತೇವೆಂದು ಹೇಳಿದ್ದಾರೆ.