ಗೆಳೆಯನ ಡಿನ್ನರ್ ಪಾರ್ಟಿಯಲ್ಲಿ ಕಲುಷಿತ ಮದ್ಯ ಸೇವಿಸಿ ಏಳು ಸಾವು
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಯೊಬ್ಬ ನೀಡಿದ ರಾತ್ರಿಯೂಟದ ಪಾರ್ಟಿಗೆ ತೆರಳಿದ್ದ ಗೆಳೆಯರು ಹಾಗೂ ಕೆಲ ನಾಗರಿಕರು ಅಸ್ವಸ್ಥ.
ಅಹಮದ್ ನಗರ, ಫೆಬ್ರವರಿ 17: ಗೆಳೆಯನೊಬ್ಬನ ಡಿನ್ನರ್ ಪಾರ್ಟಿಯಲ್ಲಿ ಕಲುಷಿತ ಮದ್ಯ ಸೇವಿಸಿದ್ದವರಲ್ಲಿ ಏಳು ಜನ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಹಮದ್ ನಗರ ಜಿಲ್ಲೆಯ ಪಂಗರ್ಮಾಲ್ ಎಂಬ ಹಳ್ಳಿಯ ಸ್ಥಳೀಯ ಚುನಾವಣೆಯಲ್ಲಿ ಶಿವಸೇನಾ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರನ್ನು ಔತಣಕೂಟಕ್ಕೆಂದು ಭಾನುವಾರ ರಾತ್ರಿ ಆಹ್ವಾನಿಸಿದ್ದ.
ಕೂಟದಲ್ಲಿ ಮದ್ಯದ ಹೊಳೆಯನ್ನೇ ಹರಿಸಲಾಗಿತ್ತು. ಆದರೆ, ರಾತ್ರಿಯೂಟ ಮುಗಿಸಿ ಮನೆಗೆ ತೆರಳಿದ ಹಲವರಲ್ಲಿ ಮರುದಿನ ಬೆಳಗ್ಗೆ ಹೊತ್ತಿಗೆ ಹೊಟ್ಟೆನೋವು ಹಾಗೂ ಯಾತನೆಗಳಿಗೆ ಒಳಗಾಗಿ ಹಿಂಸೆಪಟ್ಟಿದ್ದಾರೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತಾದರೂ ಕೆಲವರು ಚಿಕಿತ್ಸೆ ಫಲಿಸದೇ ಆನಂತರದ ದಿನಗಳಲ್ಲಿ ಸಾವಿಗೀಡಾಗಿದ್ದಾರೆ. ಶುಕ್ರವಾರದ ಹೊತ್ತಿಗೆ, ತೀವ್ರ ಅಸ್ವಸ್ಥನಾಗಿದ್ದ ಶಹಾದೇವ್ ಅವ್ಹಾದ್ ಎಂಬಾತ ನಿಧನವಾಗಿದ್ದು ಈ ಮೂಲಕ ಸಾವಿನ ಸಂಖ್ಯೆ ಏಳಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ, ಕಲುಷಿತ ಮದ್ಯವೇ ಕಾರಣ ಎಂದು ಹೇಳಿರುವ ಪೊಲೀಸರು ಜಾಕೀರ್ ಶೇಖ್, ಹನೀಫ್ ಶೇಖ್ ಹಾಗೂ ಜಿತು ಗಂಭೀರ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯಿಂದ ಬೇಸತ್ತ ಗ್ರಾಮಸ್ಥರು ಗುರುವಾರ ನಡೆದ ತಮ್ಮ ವಲಯದ ಜಿಲ್ಲಾ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿದ್ದರು.












Click it and Unblock the Notifications