ದನಗಳನ್ನು ರಸ್ತೆಗೆ ಬಿಟ್ಟಿದ್ದಕ್ಕೆ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ!
ಅಹ್ಮದಾಬಾದ್, ನವೆಂಬರ್ 22: ಗುಜರಾತ್ನಲ್ಲಿ ಬಿಡಾದಿ ದನಗಳ ಹಾವಳಿ ತಗ್ಗಿಸುವಂತೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಇದರ ಹೊರತಾಗಿ ಹಸುಗಳನ್ನು ರಸ್ತೆಗೆ ಬಿಟ್ಟ ಅಪರಾಧಕ್ಕಾಗಿ ಪ್ರಕಾಶ್ ಜೈರಾಮ್ ದೇಸಾಯಿ ಎಂಬ ಆರೋಪಿಗೆ ಕೋರ್ಟ್, ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ. ಆ ಮೂಲಕ ಜನರ ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡಿದ ಆರೋಪಿಯನ್ನು ಕಂಬಿ ಹಿಂದೆ ಕಳುಹಿಸಲಾಗಿದೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ನ ಜಾನುವಾರು ಉಪದ್ರವ ನಿಯಂತ್ರಣ ವಿಭಾಗದವರು (ಸಿಎನ್ಸಿಡಿ) ಬಿಡಾಡಿ ದನಗಳನ್ನು ಸೆರೆಹಿಡಿಯಲು ಹೋದಾಗ ಬೆದರಿಕೆ ಹಾಕಿದ್ದಕ್ಕಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಾರಂಗ ವ್ಯಾಸ್, ವ್ಯಕ್ತಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಾರೆ.
ಕಳೆದ 2019ರ ಜುಲೈ 27ರಂದು ಸಿಎನ್ಸಿಡಿ ತಂಡವು ಶಾಹಪುರ್ ದರ್ವಾಜಾದ ಹೊರಗಿನ ಶಾಂತಿಪುರ ಛಾಪ್ರಾ ಬಳಿ ಐದು ಪ್ರಾಣಿಗಳನ್ನು ಪತ್ತೆ ಮಾಡಿದ ಹಿನ್ನೆಲೆ ಶಹಾಪುರದ ನಿವಾಸಿ ದೇಸಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ತಂಡದ ಸದಸ್ಯರನ್ನು ಎದುರಿಸಿದ ದೇಸಾಯಿ, ಅವರಿಗೆ ಬೆದರಿಕೆ ಹಾಕಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವುದಾಗಿ ಆವಾಜ್ ಹಾಕಿದ್ದರು.

ದೇಸಾಯಿ ವಿರುದ್ಧ ಪ್ರಕರಣ:
ದೇಸಾಯಿ ವಿರುದ್ಧ ಗುಜರಾತ್ ಪೊಲೀಸ್ ಕಾಯ್ದೆಯಡಿ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಐಪಿಸಿ ಸೆಕ್ಷನ್ 308, 289, 186 ಮತ್ತು 506(2) ಅಡಿ ಆರೋಪ ಹೊರಿಸಲಾಗಿತ್ತು. ವಿಚಾರಣಾ ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್ ಆರು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು. ಇಬ್ಬರು ಪಂಚ ಸಾಕ್ಷಿಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸಲಿಲ್ಲ, ಏಕೆಂದರೆ ಅವರು ದೇಸಾಯಿ ಸಮುದಾಯಕ್ಕೆ ಸೇರಿದವರು ಎಂಬುದನ್ನು ನ್ಯಾಯಾಲಯವು ಗಮನಿಸಿತು.
ಆದರೆ, ದಾಳಿ ನಡೆಸಿದ ಪಕ್ಷದ ಸದಸ್ಯರು ದೇಸಾಯಿ ವಿರುದ್ಧ ಸಾಕ್ಷ್ಯ ನೀಡಿದರು. ದೇಸಾಯಿ ಅವರ ಜಾನುವಾರುಗಳು ರಸ್ತೆಗೆ ಬಿದ್ದಿದ್ದರಿಂದ ಯಾರಿಗೂ ಗಾಯವಾಗದ ಕಾರಣ, ಐಪಿಸಿ ಸೆಕ್ಷನ್ 308 ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಸರಿಯಾದ ವ್ಯವಸ್ಥೆ ಮಾಡದೆ ತನ್ನ ಪ್ರಾಣಿಗಳನ್ನು ರಸ್ತೆಗಳಲ್ಲಿ ಬಿಡಲು ಮತ್ತು ಜನರ ಜೀವಕ್ಕೆ ಅಪಾಯವನ್ನು ಉಂಟು ಮಾಡಿದ್ದಕ್ಕಾಗಿ ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಲಾಯಿತು.












Click it and Unblock the Notifications