ಜಾಮಾ ಮಸೀದಿಗೆ ಏಕಾಂಗಿ ಮಹಿಳೆಯರ ಪ್ರವೇಶ ನಿಷೇಧ ಹಿಂಪಡೆಯಲು ಒಪ್ಪಿಗೆ: ವರದಿ
ದೆಹಲಿಯ ಜಾಮಾ ಮಸೀದಿಗೆ ಏಕಾಂಗಿಯಾಗಿ ಹುಡುಗಿಯರು ಪ್ರವೇಶಿಸುವುದನ್ನು ನಿಷೇಧಿಸಿದ ಆದೇಶ ಹಿಂಪಡೆಯಲಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶಾಹಿ ಇಮಾಮ್ ಬುಖಾರಿ ಅವರೊಂದಿಗೆ ಮಾತನಾಡಿ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು. ಬಳಿಕ ಅವರು ಜಾಮಾ ಮಸೀದಿಗೆ ಮಹಿಳೆಯರು ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಹೋಗುವ ನಿಷೇಧವನ್ನು ವಾಪಸ್ ಪಡೆದಿದ್ದಾರೆ.
ಪ್ರವಾಸಿಗರು ಪ್ರಸಿದ್ಧ ಮಸೀದಿಯ ಪಾವಿತ್ರ್ಯತೆಯನ್ನು ಗೌರವಿಸಬೇಕು ಮತ್ತು ಕಾಪಾಡಬೇಕು ಎಂಬ ಮನವಿಯೊಂದಿಗೆ ಇಮಾಮ್ ಬುಖಾರಿ ಅವರು ಆದೇಶವನ್ನು ಹಿಂಪಡೆಯಲು ಒಪ್ಪಿಕೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಕೆಲ ಗಂಟೆಗಳ ಹಿಂದೆ ಜಾಮಾ ಮಸೀದಿ ಆಡಳಿತ ಒಂಟಿಯಾಗಿ ಅಥವಾ ಗುಂಪಿನಲ್ಲಿ ಹುಡುಗಿಯರು/ಮಹಿಳೆಯರು ಜಾಮಾ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಿತು.
ಈ ಆದೇಶದ ನಂತರ, ದೆಹಲಿ ಮಹಿಳಾ ಆಯೋಗವು ಸಭೆಯ ವಿವರಗಳನ್ನು ಮತ್ತು ನಿರ್ಧಾರಕ್ಕೆ ಜವಾಬ್ದಾರರಾಗಿರುವ ವ್ಯಕ್ತಿಯನ್ನು ಕೋರಿ ನೋಟಿಸ್ ನೀಡಿತು. ಮಸೀದಿಗೆ ಮಹಿಳೆಯರನ್ನು ಮುಕ್ತವಾಗಿ ಪ್ರವೇಶಿಸುವುದನ್ನು ಮತ್ತು ಅವರ ಧರ್ಮವನ್ನು ಆಚರಿಸುವುದನ್ನು ತಡೆಯುವುದು ತಾರತಮ್ಯವಾಗಿದೆ. ಆದೇಶವನ್ನು ಸ್ತ್ರೀ ದ್ವೇಷ ಮತ್ತು ಭಾರತದ ಸಂವಿಧಾನದ ನೀತಿಗೆ ವಿರುದ್ಧವಾಗಿದೆ ಎಂದು ನೋಟಿಸ್ನಲ್ಲಿ ಬರೆಯಲಾಗಿದೆ. ಹಾಗಾಗಿ ನಿಷೇಧವನ್ನು ತಕ್ಷಣವೇ ಹಿಂಪಡೆಯುವಂತೆ ಬಲವಾಗಿ ಶಿಫಾರಸು ಮಾಡಲಾಗಿದೆ ಎಂದು ಆಯೋಗ ಹೇಳಿದೆ.
ದೆಹಲಿಯ ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಲ್ಲಿಸುವ ನಿರ್ಧಾರವು ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ. "ನಾನು ಜಾಮಾ ಮಸೀದಿಯ ಇಮಾಮ್ಗೆ ನೋಟಿಸ್ ನೀಡುತ್ತಿದ್ದೇನೆ, ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ," ಎಂದು ಅವರು ಹೇಳಿದರು.
#WATCH| Delhi|Women's entry not banned. When women come alone-improper acts done, videos shot,ban is to stop this. No restrictions on families/married couples.Making it a meeting point inapt for religious places:Sabiullah Khan,Jama Masjid PRO on entry of women coming alone banned pic.twitter.com/HiOebKaiGr
— ANI (@ANI) November 24, 2022
ಜಾಮಾ ಮಸೀದಿ ಪಿಆರ್ಒ ಸಬೀವುಲ್ಲಾ ಖಾನ್ ಮಾತನಾಡಿ, ಹೆಣ್ಣುಮಕ್ಕಳು ಅಥವಾ ಮಹಿಳೆಯರು ಕುಟುಂಬದೊಂದಿಗೆ ಬರಲು ಯಾವುದೇ ನಿರ್ಬಂಧವಿಲ್ಲ ಮತ್ತು ವಿವಾಹಿತ ದಂಪತಿಗಳಿಗೂ ಯಾವುದೇ ನಿರ್ಬಂಧವಿಲ್ಲ. "ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿಲ್ಲ. ಮಹಿಳೆಯರು ಏಕಾಂಗಿಯಾಗಿ ಬಂದಾಗ ಅನುಚಿತ ಕೃತ್ಯಗಳು ಮತ್ತು ವಿಡಿಯೊಗಳನ್ನು ಮಾಡಲಾಗುತ್ತದೆ. ಇದನ್ನು ತಡೆಯಲು ನಿಷೇಧ ಹೇರಲಾಗಿದೆ. ಕುಟುಂಬಗಳು ಅಥವಾ ವಿವಾಹಿತ ದಂಪತಿಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಧಾರ್ಮಿಕ ಸ್ಥಳಗಳಿಗೆ ಕೆಟ್ಟ ವರ್ತನೆಗಳು ಅಸಮರ್ಥನೀಯವಾಗಿದೆ" ಎಂದು ಎಎನ್ಐ ಜೊತೆ ಮಾತನಾಡುವಾಗ ಖಾನ್ ಹೇಳಿದರು.