ರಾಹುಲ್ ಗಾಂಧಿ ಪಟ್ಟಾಭಿಷೇಕಕ್ಕೆ 'ವಿಘ್ನ' ತಂದೊಡ್ಡಿತೇ ಸರ್ವೇ ಫಲಿತಾಂಶ?
ದಿನದಿಂದ ದಿನಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆಂದು ಸೋನಿಯಾ ಗಾಂಧಿ ಪಟ್ಟಾಭಿಷೇಕಕ್ಕೆ ಪೂರ್ವ ತಯಾರಿ ನಡೆಸುತ್ತಿರುವಾಗಲೇ, ಏನಾದರೂ ರಾಜಕೀಯ ವಿಘ್ನಗಳು ಎದುರಾಗಿ ರಾಹುಲ್ ಗಾಂಧಿಗೆ ಈ ಸುಯೋಗ ಕೂಡಿ ಬರುವ ದಿನ ಮುಂದಕ್ಕೆ ಹೋಗುತ್ತಲೇ ಇದೆ.
ಅಧ್ಯಕ್ಷರಾಗಲಿ ಬಿಡಲಿ ಎಲ್ಲಾ ರಾಹುಲ್ , ಸೋನಿಯಾ ಗಾಂಧಿ ಅಣತಿಯಂತೆಯೇ ಕಾಂಗ್ರೆಸ್ ನಲ್ಲಿ ನಡೆಯುವುದು ಎನ್ನುವುದು ಸತ್ಯವಾದರೂ, ಕಳೆದ ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ನೀಡಲು, ಮಾಡುತ್ತಿದ್ದ ಎಲ್ಲಾ ಕಸರತ್ತುಗಳು ಯಾಕೋ ಫಲ ನೀಡುತ್ತಲೇ ಇಲ್ಲ.
ಎಲ್ಲಾ ಅಂದುಕೊಂಡಂತಾಗಿದ್ದರೆ ಇಂದಿರಾ ಗಾಂಧಿಯವರ ಜನ್ಮದಿನವಾದ ನವೆಂಬರ್ 19ರಂದು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಹುದ್ದೆಗೇರುತ್ತಿದ್ದರು. ಆದರೆ, ಈ ಬಾರಿಯೂ ರಾಹುಲ್ ಗಾಂಧಿ ಈ ಪದವಿಗೆ ಏರುವ ಸಾಧ್ಯತೆ ಕ್ಷೀಣಿಸುತ್ತಿದೆ.
ಪ್ರತೀ ಬಾರಿಯೂ ರಾಹುಲ್ ಅಧ್ಯಕ್ಷ ಪದವಿಗೆ ಏರಿಯೇ ಬಿಟ್ಟರು ಎನ್ನುತ್ತಿರುವಾಗಲೇ ಎದುರಾಗುತ್ತಿದ್ದ ಅಸೆಂಬ್ಲಿ ಚುನಾವಣೆಗಳು ಈ ಪ್ರಕ್ರಿಯೆಗೆ ತಡೆಯೊಡ್ಡುತ್ತಿದ್ದವು. ಈಗ ಮತ್ತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಎದುರಾಗಿರುವುದರಿಂದ ರಾಹುಲ್ ಪಟ್ಟಾಭಿಷೇಕ ಮತ್ತೆ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.
ಎರಡು ರಾಜ್ಯಗಳ ಚುನಾವಣೆ ಈ ವರ್ಷಾಂತ್ಯದಲ್ಲಿ ಇದ್ದರೂ, ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ಇದೇ ನವೆಂಬರ್ ನಲ್ಲಿ ಏರುವ ಸಾಧ್ಯತೆ ದಟ್ಟವಾಗಿತ್ತು. ಅದರಲ್ಲೂ, ಇಂದಿರಾ ಗಾಂಧಿಯವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಲ್ಲೇ ಸಾರಥ್ಯವಹಿಸುವ ಸಾಧ್ಯತೆಯ ಬಗ್ಗೆಯೂ ಮಾತು ಚಾಲ್ತಿಯಲ್ಲಿತ್ತು.
ಆದರೆ, ಈ ಎಲ್ಲಾ ಪ್ರಕ್ರಿಯೆಗೆ ಸದ್ಯ ಬ್ರೇಕ್ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ, ಇದಕ್ಕೆ ಕಾರಣ, ಮುಂದೆ ಓದಿ..

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು
ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶೀಘ್ರವೇ ರಾಹುಲ್ ಗಾಂಧಿಗೆ ಎಐಸಿಸಿ ಹೊಣೆಗಾರಿಕೆ ನೀಡಲಾಗುವುದು. ದೀಪಾವಳಿ ನಂತರ ರಾಹುಲ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಖುದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು.

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ
ಆದರೆ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಮುಗಿದ ನಂತರವಷ್ಟೇ, ಅಂದರೆ ಕರ್ನಾಟಕ ಚುನಾವಣೆಯ ಆಸುಪಾಸಿನಲ್ಲಿ ರಾಹುಲ್ ಗಾಂಧಿಗೆ ಎಐಸಿಸಿ ಜಬಾಬ್ದಾರಿ ವಹಿಸಲಾಗುವುದು ಎನ್ನುವ ಮಾತು ಕೇಳಿ ಬರುತ್ತಿದೆ. ರಾಹುಲ್ ಪದೋನ್ನತಿಗೆ ಬ್ರೇಕ್ ಬಿದ್ದಿದ್ದೇ ಗುಜರಾತ್ ಚುನಾವಣೆ ಎನ್ನುವ ಮಾತಿದೆ.

ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಪಕ್ಷಕ್ಕೆ ಹಿನ್ನಡೆ
ಗುಜರಾತ್ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಟೇದಾರ್ ಸಮುದಾಯದ ನಾಯಕರನ್ನು ಭೇಟಿ ಮಾಡಿ ಹೊಸ ಉತ್ಸಾಹದಲ್ಲಿದ್ದ ರಾಹುಲ್ ಗಾಂಧಿಗೆ ಎರಡು ರಾಜ್ಯಗಳ ಚುನಾವಣಾಪೂರ್ವ ಸಮೀಕ್ಷೆ ತೀವ್ರ ಹಿನ್ನಡೆಯನ್ನು ತಂದಿದೆ. ಇದೇ ಕಾರಣಕ್ಕಾಗಿ ರಾಹುಲ್ ಪಟ್ಟಾಭಿಷೇಕ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತು ಎಐಸಿಸಿ ವಲಯದಲ್ಲಿ ಹರಿದಾಡುತ್ತಿದೆ.

ಪಕ್ಷ ಪರಾಭವಗೊಂಡರೆ ರಾಹುಲ್ ಗಾಂಧಿ ಹೊಣೆ
ಈಗ ರಾಹುಲ್ ಗಾಂಧಿಗೆ ಸಾರಥ್ಯ ನೀಡಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಪಕ್ಷ ಪರಾಭವಗೊಂಡರೆ, ಅದಕ್ಕೆ ರಾಹುಲ್ ಗಾಂಧಿ ಹೊಣೆಹೋರಬೇಕಾಗುತ್ತದೆ. ಹಾಗಾಗಿ, ಚುನಾವಣೆಯ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.

ಸರ್ವೇಗಳೇ ರಾಹುಲ್ ಪಟ್ಟಾಭಿಷೇಕವನ್ನು ಮುಂದಕ್ಕೆ ಹಾಕಿದ್ದು
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಮತ್ತು ಟೈಮ್ಸ್ ನೌ - ವಿಎಂಆರ್ ಪ್ರತ್ಯೇಕ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ಪೂರ್ವ ಸಮೀಕ್ಷೆ ನಡೆಸಿತ್ತು. ಆ ಎರಡೂ ಸಮೀಕ್ಷೆಯಲ್ಲೂ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಲಿದೆ ಎನ್ನುವ ಸರ್ವೇ ಫಲಿತಾಂಶ ಪ್ರಕಟವಾಗಿತ್ತು. ಈ ಎರಡು ಸರ್ವೇಗಳೇ ರಾಹುಲ್ ಪಟ್ಟಾಭಿಷೇಕವನ್ನು ಮುಂದಕ್ಕೆ ಹಾಕುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ.












Click it and Unblock the Notifications