ಆಂಧ್ರದ ಭ್ರಷ್ಟ ಅಧಿಕಾರಿಗಳ ಬಳಿ ಜ್ಯುವೆಲರಿ ಅಂಗಡಿಯಷ್ಟು ಆಭರಣ
ವಿಜಯವಾಡ, ಸೆಪ್ಟೆಂಬರ್ 26 : ಆಂಧ್ರದ ಇಬ್ಬರು ಸರಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ಸೋಮವಾರ ದಾಳಿ ನಡೆದಿದ್ದು, ಅವರಿಬ್ಬರಿಂದ ವಶಪಡಿಸಿಕೊಂಡ ಚಿನ್ನ-ಬೆಳ್ಳಿ-ವಜ್ರದ ಆಭರಣಗಳನ್ನು ನೋಡಿದರೆ ಯಾವುದೋ ಆಭರಣದ ಮಳಿಗೆಯೇನೋ ಎಂಬಂತೆ ಭಾಸವಾಗುತ್ತದೆ.
ಏಷ್ಯಾ ಖಂಡದಲ್ಲೇ ಭ್ರಷ್ಟಾಚಾರದಲ್ಲಿ ಭಾರತ ನಂಬರ್ ಒನ್: ಸಮೀಕ್ಷೆ
ಇನ್ನು ಈ ಪ್ರಮಾಣದ ನಗದು ಅದೆಲ್ಲಿಂದ ತಂದಿಟ್ಟುಕೊಂಡರೋ! ಒಟ್ಟಿನಲ್ಲಿ ಈ ಇಬ್ಬರೂ ಅಧಿಕಾರಿಗಳು ಆದಾಯವನ್ನೂ ಮೀರಿ ಗಳಿಸಿದ ಒಟ್ಟು ಆಸ್ತಿ 250ರಿಂದ 300 ಕೋಟಿ ರುಪಾಯಿ ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಆಂಧ್ರಪ್ರದೇಶದ ಪಟ್ಟಣ ಯೋಜನಾ ಅಧಿಕಾರಿಗಳಾದ ವಿಜಯವಾಡ, ವಿಶಾಖಪಟ್ಟಣದಲ್ಲಿನ ಎನ್.ವಿ.ಶಿವಪ್ರಸಾದ್ ಹಾಗೂ ಜಿ.ವೆಂಕಟ ರಘು ಅವರ ಮನೆ ಮೇಲೆ ದಾಳಿ ನಡೆದಿದೆ.
ಅಷ್ಟೇ ಅಲ್ಲ, ಇವರಿಬ್ಬರ ಸಂಬಂಧಿಕರ ಮನೆಗಳೂ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು, ಚಿನ್ನ-ಬೆಳ್ಳಿ-ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ. ರಘುಗೆ ಸೇರಿದ ಹದಿನೈದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಮಂಗಳಗಿರಿಯಲ್ಲಿ ಮನೆ, ವಿಜಯವಾಡ, ಶಿರಡಿ (ಮಹಾರಾಷ್ಟ್ರ), ನೆಲ್ಲೂರು, ತಿರುಪತಿ ವಿಶಾಖಪಟ್ಟಣದಲ್ಲಿ ದಾಳಿ ನಡೆಸಿದ್ದಾರೆ. ಇನ್ನು ಶಿವಪ್ರಸಾದ್ ಗೆ ಸೇರಿದ ವಿಜಯವಾಡದ ಎಂಟು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಲೋಕ್ ಪಾಲ್ ವಿಳಂಬ, ಹೋರಾಟದ ಎಚ್ಚರಿಕೆ ನೀಡಿದ ಅಣ್ಣ ಹಜಾರೆ
"ಇಬ್ಬರೂ ಅಧಿಕಾರಿಗಳು ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಿದ್ದಾರೆ. ಐವತ್ತು ಲಕ್ಷ ಮೌಲ್ಯದ ನಗದು, ಎಂಟು ಕೆ.ಜಿಗೂ ಮೇಲ್ಪಟ್ಟ ಚಿನ್ನ ಹಾಗೂ ವಜ್ರದ ಆಭರಣಗಳು, ಇಪ್ಪತ್ಮೂರು ಕೆ.ಜಿ. ಬೆಳ್ಳಿ, ಮೂವತ್ತಕ್ಕೂ ಹೆಚ್ಚು ಆಸ್ತಿಗಳು (ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್, ಕೃಷಿ ಭೂಮಿ) ಎನ್.ವಿ.ಎಸ್. ಪ್ರಸಾದ್ ಬಳಿ ಪತ್ತೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಲಕ್ಷ ಮೌಲ್ಯದ ಆಭರಣ, ಐದು ಲಕ್ಷ ಮೌಲ್ಯದ ಬೆಳ್ಳಿ, ಹತ್ತು ಲಕ್ಷದಷ್ಟು ನಗದನ್ನು ರಘುನಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ಅಧಿಕಾರಿಗಳು ಆದಾಯ ಮೀರಿ 250ರಿಂದ 300 ಕೋಟಿ ರುಪಾಯಿ ಆಸ್ತಿ ಸಂಪಾದಿಸಿರಬಹುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಂದಾಜಿಸಿದ್ದಾರೆ.