ಕೃಷಿ ಕಾಯ್ದೆ ವಿರುದ್ಧ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಭಯ್ ಗೆಲುವಿನ ಹಾದಿಯಲ್ಲಿ
ಚಂಡೀಗಢ, ನವೆಂಬರ್ 02: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್ಎಲ್ಡಿ) ನಾಯಕ ಅಭಯ್ ಚೌತಾಲ ಹರಿಯಾಣ ಎಲೆನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾಂಡಾ ವಿರುದ್ಧ ಸುಮಾರು 5,000 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.
ಆರಂಭದಿಂದಲೂ ಮುನ್ನಡೆಯನ್ನು ಸಾಧಿಸಿರುವ ಐಎನ್ಎಲ್ಡಿ ನಾಯಕ ಅಭಯ್ ಚೌತಾಲ ಈ ಹಿಂದೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಚುನಾವಣೆಯ ಕಣಕ್ಕೆ ಇಳಿದು ಮುನ್ನಡೆ ಸಾಧಿಸಿದ್ದಾರೆ.
ಐಎನ್ಎಲ್ಡಿ ನಾಯಕನ ಸೋದರಳಿಯ, ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ನೇತೃತ್ವದ ಮಿತ್ರಪಕ್ಷ ಜೆಜೆಪಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾಂಡಾಗೆ ಬೆಂಬಲವನ್ನು ನೀಡಿದ್ದರೂ ಕೂಡಾ ಐಎನ್ಎಲ್ಡಿ ನಾಯಕ ಅಭಯ್ ಚೌತಾಲ ಮುನ್ನಡೆಯಲ್ಲಿದ್ದಾರೆ. ಇನ್ನು ಈ ನಡುವೆ 2019 ರ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಪವನ್ ಬೇನಿವಾಲ್ ಮೂರನೇ ಸ್ಥಾನದಲ್ಲಿ ಇದ್ದಾರೆ.

ಇನ್ನು ಈ ವಿಚಾರದಲ್ಲಿ ಮಾತನಾಡಿದ ಐಎನ್ಎಲ್ಡಿ ನಾಯಕ ಅಭಯ್ ಚೌತಾಲ, "ಬಿಜೆಪಿಯು ಹಣವನ್ನು ಹಂಚಿಕೆ ಮಾಡಿ ಮತ ಪಡೆಯುವ ಯತ್ನವನ್ನು ಮಾಡಿದೆ. ಇಲ್ಲವಾದರೆ ನಾನು 30,000 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದೆ," ಎಂದು ಹೇಳಿದ್ದಾರೆ.
"ನಾನು ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಎಂ ಎಲ್ ಖಟ್ಟರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ಕುದುರೆ ವ್ಯಾಪಾರ ನಡೆಸದಿದ್ದರೆ, ಈ ರೀತಿಯಾಗಿ ಕಡಿಮೆ ಮತದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿರಲಿಲ್ಲ. ನಾನು 30,000 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಲಿದ್ದೆ. ಮತದಾರರಿಗೆ ಕೋಟ್ಯಾಂತರ ರೂಪಾಯಿಯನ್ನು ಹಂಚಿಕೆ ಮಾಡಲಾಗಿದೆ ಎಂಬುವುದು ಸ್ಪಷ್ಟವಾಗಿದೆ. ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನಾನು ನನ್ನ ಕಣ್ಣಾರೆ ಇದನ್ನು ನೋಡಿದ್ದೇನೆ," ಎಂದು ಆರೋಪಿಸಿದ್ದಾರೆ.
"ಇದು ನನ್ನ ಗೆಲುವು ಅಲ್ಲ, ಇದು ರೈತರ ಗೆಲುವು,"
"ಇದು ನನ್ನ ಗೆಲುವು ಅಲ್ಲ, ಇದು ರೈತರ ಗೆಲುವು," ಎಂದು ಕೂಡಾ ಹೇಳಿರುವ ಅಭಯ್ ಚೌತಾಲ, "ಬಿಜೆಪಿ-ಜೆಜೆಪಿ ಎಷ್ಟೇ ಹಣ ಹಂಚಿದರೂ ಅವರಿಗೆ ಸೋಲು ಆಗಿದೆ. ಅವರು ಅವರಿಂದ ಆದಷ್ಟು ಹಣ ಹಂಚಿ ಮತ ಪಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ವಿಫಲವಾಗಿದ್ದಾರೆ. ಇದು ನನ್ನ ಗೆಲುವು ಅಲ್ಲ. ರೈತರ ಹಾಗೂ ಈ ಕ್ಷೇತ್ರದ ಜನರ ಗೆಲುವು," ಎಂದು ಹೇಳಿದ್ದಾರೆ.
ಒಟ್ಟು 16 ಸುತ್ತಿನ ಮತ ಎಣಿಕೆಯು ಎಲೆನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ. ಅಕ್ಟೋಬರ್ 30 ರಂದು ಚುನಾವಣೆ ನಡೆದಿದ್ದು, ಒಟ್ಟು ಶೇಕಡ 81 ರಷ್ಟು ಮತದಾನ ಆಗಿದೆ. ಆರಂಭದಿಂದಲೂ ಐಎನ್ಎಲ್ಡಿ ನಾಯಕ ಅಭಯ್ ಚೌತಾಲ ಬಿಜೆಪಿಯ ವಿರುದ್ಧ ಮುನ್ನಡೆಯನ್ನು ಸಾಧಿಸಿದ್ದಾರೆ. ಎರಡು ಸುತ್ತಿನ ಮತ ಎಣಿಕೆಯಲ್ಲೀ ಅಭಯ್ ಮುನ್ನಡೆ ಸಾಧಿಸಿದ್ದಾರೆ.
ಹರಿಯಾಣದ ಸಿರ್ಸಾ ಜಿಲ್ಲೆಯ ಎಲೆನಾಬಾದ್ ವಿಧಾನಸಭಾ ಕ್ಷೇತ್ರವು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಪ್ರತಿಪಕ್ಷ ಐಎನ್ಎಲ್ಡಿಯ ಅಭಯ್ ಸಿಂಗ್ ಚೌತಾಲಾ ಕೃಷಿ ಕಾಯ್ದೆಯ ವಿರುದ್ಧವಾಗಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿನ್ನೆಲೆಯಿಂದಾಗಿ ಇಲ್ಲಿ ಮತ್ತೆ ಚುನಾವಣೆ ನಡೆದಿದೆ. ಈ ಬಾರಿ ಮತ್ತೆ ಸ್ಪರ್ಧೆಗೆ ಇಳಿದಿರುವ ಅಭಯ್ ಸಿಂಗ್ ಚೌತಾಲಾ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದು, ಈ ಗೆಲುವು ರೈತರಿಗೆ ಅರ್ಪಣೆ ಎಂದು ಈಗಾಗಲೇ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications