ಎಎಪಿಯಿಂದ ಸ್ಪರ್ಧಿಸುವಂತೆ ಯಶವಂತ್ ಸಿನ್ಹಾಗೆ ಆಹ್ವಾನ
ನವದೆಹಲಿ, ಸೆಪ್ಟೆಂಬರ್ 25: ಲೋಕಸಭೆ ಚುನಾವಣೆ 2019ಕ್ಕೆ ರಣಕಹಳೆ ಊದಿರುವ ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನಡುವೆ ಬಿಜೆಪಿಯ ರೆಬೆಲ್, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಆಮ್ ಆದ್ಮಿ ಪಕ್ಷವು ಟಿಕೆಟ್ ಆಫರ್ ಮಾಡಿದೆ.
ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಯಶವಂತ್ ಸಿನ್ಹಾರನ್ನು ಕೋರಲಾಗಿದೆ. ಈ ಬಗ್ಗೆ ಮಾತುಕತೆ ಸದ್ಯ ಜಾರಿಯಲ್ಲಿದೆ ಎಂದು ಎಎಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರಿಗೂ ದೆಹಲಿಯ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲಾಗಿದೆ. ಆದರೆ, ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಬಿಹಾರದ ಪಾಟ್ನಾ ಸಾಹೀಬ್ ಕ್ಷೇತ್ರವನ್ನು ತೊರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಯಿದೆ,

ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ಕ್ಯಾಬಿನೆಟ್ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.
ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ಮೋದಿ ಸರ್ಕಾರ ವಿರುದ್ಧದ ಜನ್ ಅಧಿಕಾರ್ ಪ್ರತಿಭಟನಾ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜತೆ ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಕಾಣಿಸಿಕೊಂಡಿದ್ದರು.
ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಹಾಗೂ ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್ ಕೀರ್ತಿ ಅಜಾದ್ ಅವರನ್ನು ಸೆಳೆಯಲು ಎಎಪಿ ಯತ್ನಿಸುತ್ತಿದೆ.
ಯಶವಂತ್ ಸಿನ್ಹಾ ಅವರು 2009ರಲ್ಲಿ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಎನ್ಡಿಎಯಲ್ಲಿ ಸಚಿವರಾಗಿರುವ ಇವರ ಪುತ್ರ ಜಯಂತ್ ಸಿನ್ಹಾ ಅವರು ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications