ಶವದ ಮಾಂಸ ತಿಂದ ತಮಿಳುನಾಡು ಅರ್ಚಕ
ತಮಿಳುನಾಡು,ಮಾರ್ಚ್,12: ದೇವಸ್ಥಾನದ ಅರ್ಚಕನೋರ್ವ ಸುಟ್ಟು ಬೆಂದು ಹೋಗುತ್ತಿರುವ ಶವದ ಮಾಂಸವನ್ನು ತಿಂದ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ತಿರುಚ್ಚಿಯಲ್ಲಿ ಪೆರಿಯಕಡೈ ಅಂಕಾಳ ಪರಮೇಶ್ವರಿ ದೇವಾಲಯದ ಅರ್ಚಕ ರಾಜೇಂದ್ರನ್ ಮಾಂಸ ತಿಂದು ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ದೇವಿ ಪೆಚ್ಚಿಯಮ್ಮನ ವೇಷದಲ್ಲಿ ಬಂದ ಈತ ಎಲ್ಲರ ಸಮ್ಮುಖದಲ್ಲಿ ಶವದ ಮಾಂಸ ಸೇವಿಸಿದ್ದಾನೆ.[ಕಾರ್ಕಳ : ಪತ್ನಿ, ಪುತ್ರಿ ಬಾವಿಗೆ ತಳ್ಳಿ ಅರ್ಚಕ ಆತ್ಮಹತ್ಯೆ]
ಯಾವಾಗ ನಡೆಯಿತು?
ತಮಿಳುನಾಡಿನ ತಿರುಚ್ಚಿಯಲ್ಲಿ ಪೆರಿಯಕಡೈ ಅಂಕಾಳ ಪರಮೇಶ್ವರಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವ ಅದ್ಧೂರಿಯಾಗಿ ನೆರವೇರುತ್ತದೆ. ಶಿವರಾತ್ರಿ ಸಂದರ್ಭದಲ್ಲಿ ಅಂದರೆ ಮಾರ್ಚ್ 6 ರಿಂದ ಮೂರು ದಿನಗಳ ಕಾಲ ಉತ್ಸವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.[ಅಮ್ಮ ಆಲಯಂ, ಜಯಲಲಿತಾರಿಗೊಂದು ದೇಗುಲ]
ಶಿವರಾತ್ರಿ ಉತ್ಸವದ ಭಾಗವಾಗಿ ಕಳೆದ ಬುಧವಾರ ರಾತ್ರಿ ಸ್ಥಳೀಯ ಓಯಾಮರಿ ಸ್ಮಶಾನದಲ್ಲಿ 'ಸ್ಮಶಾನಕೊಲ್ಲ' ಎನ್ನುವ ಧಾರ್ಮಿಕ ಕೈಂಕರ್ಯ ನೆರವೇರಿತು. ಇದರಲ್ಲಿ ಪಾಲ್ಗೊಂಡ ಕೆಲವರು ಕೋಳಿ ಮೇಕೆ ಇತ್ಯಾದಿ ಪ್ರಾಣಿಗಳ ರಕ್ತ ಕುಡಿಯುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಕ್ರಿಯೆ.[ಚಿತ್ರದುರ್ಗ : ಪ್ರಸಾದದಲ್ಲಿ ವಿಷಹಾಕಿ ಅಕ್ಕನನ್ನು ಕೊಂದ ಅರ್ಚಕ]
ಆದರೆ ಈ ಸಂದರ್ಭದಲ್ಲಿ ಪೂಜಾರಿ ರಾಜೇಂದ್ರನ್ ಪೆಚ್ಚಿಯಮ್ಮ ವೇಷದಲ್ಲಿ ಬಂದು ಮೈಮೇಲೆ ದೇವರು ಬಂದ ಹಾಗೆ ವಿಚಿತ್ರವಾಗಿ ವರ್ತಿಸಿದ್ದಾನೆ. ಬಳಿಕ ಕೈಯಲ್ಲಿ ತ್ರಿಶೂಲ ಹಿಡಿದು ಸ್ಮಶಾನದಲ್ಲಿ ಹೊತ್ತಿ ಉರಿಯುತ್ತಿದ್ದ ಶವವೊಂದಕ್ಕೆ ತ್ರಿಶೂಲದಿಂದ ತಿವಿದು ಎತ್ತಿ ಬಾಯಿಗೆ ಇರಿಸಿಕೊಂಡು ಚಪ್ಪರಿಸಿ ತಿಂದಿದ್ದಾನೆ. ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.