ಭಾರತ್ ಬಂದ್ ವೇಳೆ 9 ಮಂದಿ ಸಾವು: ದಿನದ 10 ಬೆಳವಣಿಗೆ
ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ವೇಳೆ ಸೋಮವಾರ 9 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಘರ್ಷಣೆ ವೇಳೆ 7 ಮಂದಿ ಮೃತಪಟ್ಟಿದ್ದಾರೆ. ಇನ್ನು ರಾಜಸ್ತಾನದ ಅಳ್ವಾರ್ ಹಾಗೂ ಉತ್ತರಪ್ರದೇಶದ ಮುಜಾಫರ್ ನಗರ್ ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಪಂಜಾಬ್ ಹಾಗೂ ಜಾರ್ಖಂಡ್ ನ ಕೆಲ ಭಾಗದಲ್ಲಿ ಹಿಂಸಾಚಾರದ ವರದಿ ಆಗಿದೆ. ಪಂಜಾಬ್ ನಲ್ಲಿ ಭಾರೀ ಪ್ರಮಾಣದ ಬಂದೋಬಸ್ತ್ ಮಾಡಲಾಗಿತ್ತು. ಸಂಚಾರ ಸ್ತಬ್ಧವಾಗಿತ್ತು. ವಿವಿಧ ದಲಿತ ಸಂಘಟನೆಗಳು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸರಕಾರವು ಮನವಿ ಮಾಡಿದೆ.

ಇಡೀ ದಿನದ ಹತ್ತು ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
* ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿ ಮುಖಂಡ ಸೇರಿದಂತೆ ಇತರ ನಾಲ್ವರು ಪೊಲೀಸರು ಹಾಗೂ ಪ್ರತಿಭಟನಾನಿರತರ ಮಧ್ಯದ ಘರ್ಷಣೆ ವೇಳೆ ಮೃತಪಟ್ಟರೆ, ಆರು ಮಂದಿ ಗಾಯಾಳುಗಳಾಗಿದ್ದಾರೆ. ನಿಷೇಧಾಜ್ಞೆ ಮಧ್ಯೆಯೂ ಗ್ವಾಲಿಯರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ರೈಲು ತಡೆದರು ಹಾಗೂ ವಾಹನಗಳಿಗೆ ಬೆಂಕಿ ಇಟ್ಟರು.
* ರಾಜಸ್ತಾನದ ಅಳ್ವಾರ್ ನಲ್ಲಿ ಪೊಲೀಸರ ಗುಂಡಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ರಾಜಸ್ತಾನದ ಇತರೆಡೆ ಹಿಂಸಾಚಾರದ ವರದಿಗಳಾಗಿವೆ. ಜಾರ್ಖಂಡ್ ನ ರಾಜಧಾನಿ ರಾಂಚಿಯಲ್ಲಿ ಪೊಲೀಸರು ಪ್ರತಿಭಟನಾನಿರತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
* ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಪೊಲೀಸರ ಜತೆಗಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾತ್ರೆ. ಮೀರತ್ ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಹಾಗೂ ಘರ್ಷಣೆ ನಡೆದಿದ್ದು, ಉತ್ತರಪ್ರದೇಶ ರಾಜ್ಯದಲ್ಲಿ ನಲವತ್ತು ಪೊಲೀಸರು ಸೇರಿದ ಹಾಗೆ ಎಪ್ಪತ್ತೈದು ಮಂದಿ ಗಾಯಗೊಂಡಿದ್ದಾರೆ. ಶಾಂತಿ ಕಾಪಾಡುವಂತೆ ಹಾಗೂ ಹಿಂದುಳಿದ, ಪರಿಶಿಷ್ಟ ಜಾತಿ/ಪಂಗಡದ ಒಳಿತಿಗೆ ರಾಜ್ಯ- ಕೇಂದ್ರ ಸರಕಾರ ಬದ್ಧ ಎಂದು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
* ಆದೇಶದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಅರ್ಜಿ ಹಾಕಲಾಗಿದೆ. ಹಿರಿಯ ವಕೀಲರು ಈ ಬಗ್ಗೆ ವಾದ ಮಂಡಿಸಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಶೀಘ್ರ ವಿಚಾರಣೆಗಾಗಿ ಎಜಿ ಕೆಕೆ ವೇಣುಗೋಪಾಲ್ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
* ಬಿಹಾರ, ಒಡಿಶಾ, ಪಂಜಾಬ್ ರಾಜಸ್ತಾನದಲ್ಲಿ ರೈಲು ತಡೆ ಚಳವಳಿ ಗಂಭೀರ ಸ್ವರೂಪದಲ್ಲಿ ಆಗಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಆಯಿತು. ಕೆಲವು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಯಲಾಯಿತು.
* ಪಂಜಾಬ್ ನಲ್ಲಿ ನೂರಾರು ಸಂಖ್ಯೆಯ ಪ್ರತಿಭಟನಾನಿರತರು ಕತ್ತಿ, ಕೋಲು, ಬೇಸ್ ಬಾಲ್ ಬ್ಯಾಟ್ ಹಿಡಿದು ಸುತ್ತಾಡಿದರೆ, ಜಲಂಧರ್, ಅಮೃತಸರ್ ಮತ್ತು ಬತಿಂಡಾದಲ್ಲಿ ಬಲವಂತವಾಗಿ ಮಳಿಗೆಗಳನ್ನು ಮುಚ್ಚಿಸಿದರು. ಚಂಡೀಗಢದ ಸುತ್ತಮುತ್ತ ಹೆದ್ದಾರಿಗಳಿಗೆ ತಡೆಯೊಡ್ಡಿದ್ದರಿಂದ ಸಂಚಾರದಲ್ಲಿ ಭಾರೀ ವ್ಯತ್ಯಯ ಆಯಿತು.
* ಪಂಜಾಬ್ ಸರಕಾರ ಭಾರೀ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳನ್ನು ನಿಯೋಜಿಸಿತ್ತು. ಶಾಲೆ-ಕಾಲೇಜುಗಳಿಗೆ ರಜಾ ಘೋಷಿಸಿತ್ತು. ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ರಾತ್ರಿ ಹನ್ನೊಂದರವರೆಗೆ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಬ್ಯಾಂಕ್, ಕಚೇರಿಗಳನ್ನು ಮುಚ್ಚಲಾಗಿತ್ತು. ಸಂಚಾರ ವ್ಯವಸ್ಥೆ ಸ್ತಬ್ಧವಾಗಿತ್ತು. ಜಲಂಧರ್, ಕಪುರ್ತಲ, ನವನ್ ಸಹರ್, ಹೋಶಿಯಾರ್ ಪುರ್ ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತಾ ವ್ಯವಸ್ಥೆ ಮಾಡಲಾಗಿತ್ತು.
* ಬಿಹಾರದಲ್ಲಿ ಜೆಡಿಯು ಶಾಸಕರು ಬಂದ್ ಗೆ ಬೆಂಬಲ ಸೂಚಿಸಿದ್ದರು. ಪಾಟ್ನಾದಲ್ಲಿ ಭೀಮ್ ಸೇನೆ ಕಾರ್ಯಕರ್ತರು ಮಳಿಗೆಗಳನ್ನು ಮುಚ್ಚಿಸಿದರು. ಹರಿಯಾಣದ ಹಲವೆಡೆ, ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾದಲ್ಲಿ ಹಲವರನ್ನು ಬಂಧಿಸಲಾಯಿತು.
* ಮಾರ್ಚ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ವಿರುದ್ಧ ಈ ಗಲಭೆ ಎದ್ದಿದೆ. ಹಲವು ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ನ್ಯಾಯಾಲಯ, ದುರುಪಯೋಗವನ್ನು ತಪ್ಪಿಸುವುದಕ್ಕಾಗಿ ಕ್ರಮ ಕೈಗೊಂಡಿತ್ತು.
* ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಮಾಣ, ಕೋರ್ಟ್ ನಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಕರಣಗಳ ಅತ್ಯಂತ ಕಡಿಮೆ ಪ್ರಮಾಣ ಇವೆಲ್ಲವನ್ನೂ ಸುಪ್ರೀಂ ಕೋರ್ಟ್ ನ ಗಮನಕ್ಕೆ ಕೇಂದ್ರ ಸರಕಾರ ತಂದಿದ್ದರೆ ಬೇರೆಯದೇ ತೀರ್ಮಾನ ಬಂದಿರುತ್ತಿತ್ತು ಎಂದು ದಲಿತ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.












Click it and Unblock the Notifications