ಬಾಲಾಪರಾಧಿಗಳ ವಯೋಮಿತಿ ಇಳಿಕೆ, ವಿಧೇಯಕದ ಪ್ರಮುಖ ಅಂಶಗಳು
ನವದೆಹಲಿ, ಡಿಸೆಂಬರ್ 23 : ಬಾಲಾಪರಾಧಿಗಳ ವಯೋಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸುವ ಬಾಲ ನ್ಯಾಯಿಕ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಮಂಗಳವಾರ ಒಪ್ಪಿಗೆ ನೀಡಿದೆ. ಈ ವಿಧೇಯಕಕ್ಕೆ ಲೋಕಸಭೆಯಲ್ಲಿ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು, ರಾಷ್ಟ್ರಪತಿಗಳ ಸಹಿ ಮಾತ್ರ ಬಾಕಿ ಉಳಿದಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೊಂಡಿದ್ದಕ್ಕೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಬಾಲ ನ್ಯಾಯಿಕ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಬೇಕು ಎಂದು ಪ್ರತಿಭಟನೆಗಳು ನಡೆದಿದ್ದವು. ಮಂಗಳವಾರ ನಿರ್ಭಯಾ ಪೋಷಕರ ಸಮ್ಮುಖದಲ್ಲಿಯೇ ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದೆ. [ದೆಹಲಿ ರೇಪ್ ಕೇಸ್ ಬಾಲಾಪರಾಧಿ ರಹಸ್ಯವಾಗಿ ಬಿಡುಗಡೆ]
ಈ ಕಾಯ್ದೆ ಜಾರಿಗೆ ಬಂದ ಬಳಿಕ 16 ವರ್ಷ ಅಥವ ಅದಕ್ಕಿಂತ ಹೆಚ್ಚಿನ ಪ್ರಾಯದ ಮಕ್ಕಳು ಕೊಲೆ, ಅತ್ಯಾಚಾರದಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ವಯಸ್ಕರಂತೆಯೇ ಅವರ ವಿಚಾರಣೆ ನಡೆಸಲು ಶಿಕ್ಷೆಗೆ ಒಳಪಡಿಸಲು ಅವಕಾಶ ದೊರೆಯಲಿದೆ. ['ನನ್ನ ಮಗಳ ಹೆಸರು ಜ್ಯೋತಿ, ನೀವೂ ಹಾಗೆಯೇ ಕರೆಯಿರಿ']
ಬಾಲ ನ್ಯಾಯಿಕ (ಮಕ್ಕಳ ಆರೈಕೆ ಮತ್ತು ರಕ್ಷಣೆ) ವಿಧೇಯಕ - 2014ರ ಪ್ರಕಾರ ಹೀನ ಅಪರಾಧ ಮಾಡಿದವರನ್ನು ವಯಸ್ಕರಂತೆ ಕಾಣಲು ಅವಕಾಶವಿದೆ. ಚಿಕ್ಕಪುಟ್ಟ ಅಪರಾಧ ಎಸಗುವ ಇದೇ ವಯೋಮಾನದವರನ್ನು ಅವರು 21ನೇ ವಯಸ್ಸಿಗೆ ಕಾಲಿಟ್ಟ ನಂತರ ವಿಚಾರಣೆ ನಡೆಸಲಾಗುತ್ತದೆ. ಅಲ್ಲಿಯವರೆಗೂ ಅವರನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುವ ಬಾಲಾಪರಾಧಿ ಶಿಕ್ಷಣ ಶಾಲೆಗಳಲ್ಲಿ ಇರಿಸಲಾಗುತ್ತದೆ. ವಿಧೇಯಕದಲ್ಲಿನ 8 ಪ್ರಮುಖ ಅಂಶಗಳು

ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರ
ಬಾಲ ನ್ಯಾಯಿಕ (ಮಕ್ಕಳ ಆರೈಕೆ ಮತ್ತು ರಕ್ಷಣೆ) ವಿಧೇಯಕ - 2014ರ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ. ವಿಧೇಯಕದ ಅನ್ವಯ ಬಾಲಾಪರಾಧಿಗಳ ವಯೋಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸಲು ಅವಕಾಶವಿದೆ.

ವಯಸ್ಕರಂತೆಯೇ ವಿಚಾರಣೆ ನಡೆಸಬಹುದು
ಈ ಕಾಯ್ದೆ ಜಾರಿಗೆ ಬಂದ ಬಳಿಕ 16 ವರ್ಷ ಅಥವ ಅದಕ್ಕಿಂತ ಹೆಚ್ಚಿನ ಪ್ರಾಯದ ಮಕ್ಕಳು ಕೊಲೆ, ಅತ್ಯಾಚಾರದಂತಹ ಹೀನ ಪ್ರಕರಣದಲ್ಲಿ ಭಾಗಿಯಾಗಿದ್ದರೆ ವಯಸ್ಕರಂತೆಯೇ ಅವರ ವಿಚಾರಣೆ ನಡೆಸಲು, ಶಿಕ್ಷೆಗೆ ಒಳಪಡಿಸಲು ಅವಕಾಶ ದೊರೆಯುತ್ತದೆ.

ಕಡ್ಡಾಯವಾಗಿ ಸಮಿತಿ ಸ್ಥಾಪನೆ
ವಿಧೇಯಕದ ಅನ್ವಯ ಪ್ರತಿ ಜಿಲ್ಲೆಯಲ್ಲಿ ಬಾಲ ನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸ್ಥಾಪನೆ ಮಾಡಬೇಕು. ಈ ಎರಡೂ ಸಮಿತಿಗಳಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳಾ ಸದಸ್ಯರಿರಬೇಕು.

ಬಾಲಾಪರಾಧಿ ನ್ಯಾಯಮಂಡಳಿ ಸ್ಥಾಪನೆ
ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕ ಬಳಿಕ ಬಾಲಾಪರಾಧಿ ನ್ಯಾಯಮಂಡಳಿ ಸ್ಥಾಪನೆಯಾಗಲಿದೆ. ಮಂಡಳಿಯಲ್ಲಿ ಮ್ಯಾಜಿಸ್ಟ್ರೇಟ್, ಇಬ್ಬರು ಸಾಮಾಜಿಕ ಕಾರ್ಯಕರ್ತರು ಸದಸ್ಯರಾಗಿರುತ್ತಾರೆ. ಈ ನ್ಯಾಯಮಂಡಳಿ ಬಾಲಾಪರಾಧಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಬೇಕೆ? ಎಂದು ತೀರ್ಮಾನ ಕೈಗೊಳ್ಳುತ್ತದೆ.

ಮಕ್ಕಳ ಹಿತರಕ್ಷಣಾ ಸಮಿತಿ ಉಸ್ತುವಾರಿ ನೋಡಿಕೊಳ್ಳುತ್ತದೆ
ಪ್ರತಿ ಜಿಲ್ಲೆಯಲ್ಲಿನ ಮಕ್ಕಳ ಕಲ್ಯಾಣ ಸಮಿತಿಯ ಉಸ್ತುವಾರಿಯನ್ನು ಮಕ್ಕಳ ಹಿತರಕ್ಷಣಾ ಸಮಿತಿ ನೋಡಿಕೊಳ್ಳುತ್ತದೆ. ಹಿತರಕ್ಷಣಾ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ನಾಲ್ಕು ಸದಸ್ಯರಿರುತ್ತಾರೆ. ಈ ಸದಸ್ಯರು ಮಕ್ಕಳ ಕುರಿತ ಸಂಘಟನೆಗಳಲ್ಲಿ ಕೆಲಸ ಮಾಡಿದವರಾಗಿರುತ್ತಾರೆ.

ಸಾಮಾನ್ಯ ಅಪರಾಧದ ವಿಚಾರಣೆ
16 ರಿಂದ 18 ವರ್ಷ ವಯಸ್ಸಿನೊಳಗೆ ಸಾಮಾನ್ಯ ಅಪರಾಧ ಎಸಗಿದರೆ 21ನೇ ವಯಸ್ಸಿನ ನಂತರ ಬಂಧನಕ್ಕೆ ಒಳಗಾದರೆ ಅವರ ವಿರುದ್ಧ ವಯಸ್ಕರ ಕಾನೂನಿನ ಅಡಿಯಲ್ಲಿಯೇ ವಿಚಾರಣೆ ನಡೆಸಲಾಗುತ್ತದೆ. ಅಲ್ಲಿಯವರೆಗೂ ಅವರನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುವ ಬಾಲಾಪರಾಧಿ ಶಿಕ್ಷಣ ಶಾಲೆಗಳಲ್ಲಿ ಇರಿಸಲಾಗುತ್ತದೆ.

ನ್ಯಾಯಮಂಡಳಿಗೆ ಅಧಿಕಾರ
ಆರೋಪಿ ಬಾಲಕನನ್ನು ಸುಧಾರಣಾ ಗೃಹಕ್ಕೆ ಕಳುಹಿಸಬೇಕೆ ಅಥವಾ ವಯಸ್ಕನೆಂದು ವಿಚಾರಣೆ ಒಳಪಡಿಸಬೇಕೆ? ಎನ್ನುವುದನ್ನು ನಿರ್ಧರಿಸುವ ಅಧಿಕಾರ ಬಾಲ ನ್ಯಾಯ ಮಂಡಳಿಗೆ ಸೇರಿದೆ.

ಯಾವುದಕ್ಕೆ ಶಿಕ್ಷೆ?
ಮಕ್ಕಳಿಗೆ ಮಾದಕ ವಸ್ತು ನೀಡುವುದು, ಮಕ್ಕಳ ಅಪಹರಣ ಮತ್ತು ಮಾರಾಟ ಮಾಡಿದ ಬಾಲಾಪರಾಧಿಗೆ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಬಾಲ ಅಪರಾಧಿಗಳನ್ನು ವಯಸ್ಕ ಕೈದಿಗಳ ಜತೆ ಇಡದೇ ಪ್ರತ್ಯೇಕ ಬಾಲ ಅಪರಾಧಿಗಳ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಲಾಗುತ್ತದೆ.












Click it and Unblock the Notifications