ಮೇಘಾಲಯದಲ್ಲಿ ಗಣಿ ಅವಘಡ; ಆರು ಕಾರ್ಮಿಕರ ಸಾವು
ಶಿಲ್ಲಾಂಗ್, ಜನವರಿ 22: ಗಣಿಗಾರಿಕೆ ಸಂಬಂಧಿ ಅವಘಡದಲ್ಲಿ ಆರು ಗಣಿ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಘಟನೆ ಕಲ್ಲಿದ್ದಲು ಸಮೃದ್ಧ ಮೇಘಾಲಯದ ಪೂರ್ವ ಜೈಂತಿಯಾ ಪ್ರದೇಶದಲ್ಲಿ ನಡೆದಿದೆ.
ಗುರುವಾರ ರಾತ್ರಿ ವೇಳೆ ದೈಂಶಾಲಾಲು, ಸರ್ಕಾರಿ, ರಿಂಬಿಯಾ ಗ್ರಾಮದ ಸಮೀಪದ ಗಣಿಗಾರಿಕಾ ಪ್ರದೇಶದಲ್ಲಿ ಅವಘಡ ಸಂಭವಿಸಿರುವುದಾಗಿ ಉಪ ಆಯುಕ್ತ ಕರ್ಮಲ್ಕಿ ತಿಳಿಸಿದ್ದಾರೆ. ಗಣಿ ಪ್ರದೇಶದಲ್ಲಿ ಹಳ್ಳ ತೋಡುತ್ತಿದ್ದು, ಈ ಸಂದರ್ಭ ಯಂತ್ರ ಕಳಚಿ ಎಲ್ಲರೂ ಕೆಳಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಸತ್ತ ಆರು ಮಂದಿಯಲ್ಲಿ ಐವರ ಗುರುತು ಪತ್ತೆಯಾಗಿದ್ದು, ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಸತ್ತವರೆಲ್ಲರೂ ನೆರೆಯ ಅಸ್ಸಾಂನಿಂದ ಗಣಿ ಕೆಲಸಕ್ಕೆ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.

ಇವರು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದರೇ ಅಥವಾ ಕಲ್ಲು ಗಣಿಗಾರಿಕೆ ಮಾಡುತ್ತಿದ್ದರೇ ಎಂಬುದರ ಬಗ್ಗೆ ಸ್ಪಷ್ಟನೆ ದೊರೆತಿಲ್ಲ. ಅವರು ಹಳ್ಳ ತೋಡುತ್ತಿದ್ದ ಜಾಗದಲ್ಲಿ ಕಲ್ಲಿದ್ದಲು ಇರಲಿಲ್ಲ ಎಂದು ಕರ್ಮಲ್ಕಿ ತಿಳಿಸಿದ್ದಾರೆ.
2018ರ ಡಿಸೆಂಬರ್ ನಲ್ಲಿಯೂ ಇದೇ ಸ್ಥಳದಲ್ಲಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾಗ ನೀರು ನುಗ್ಗಿ ಹದಿನೈದು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು.












Click it and Unblock the Notifications