ಉತ್ತರಾಖಂಡದಲ್ಲಿ ಕೈ ನಾಯಕರ ಬಂಡಾಯ: ಹರೀಶ್ ರಾವತ್ ಸೇರಿದಂತೆ ನಾಲ್ವರಿಗೆ ದೆಹಲಿಗೆ ಬುಲಾವ್
ಡೆಹ್ರಾಡೂನ್, ಡಿಸೆಂಬರ್ 23: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂದು ಕಾಣೀಸುತ್ತಿದೆ. ಇದೀಗ ಪಂಜಾಬ್ ಕಾಂಗ್ರೆಸ್ ನಲ್ಲಿ ಜಟಾಪಟಿ ನಡೆಯುತ್ತಿದ್ದು, ಉತ್ತರಾಖಂಡದಲ್ಲೂ ಕಾಂಗ್ರೆಸ್ನಲ್ಲಿ ಭಿನ್ನಮತದ ಪರ್ವ ಶುರುವಾಗಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಣೇಶ್ ಗೋಡಿಯಾಲ್, ಕಾಂಗ್ರೆಸ್ ಮುಖಂಡ ಯಶಪಾಲ್ ಆರ್ಯ ಮತ್ತು ಸಿಎಲ್ಪಿ ಪಕ್ಷದ ನಾಯಕ ಪ್ರೀತಮ್ ಸಿಂಗ್ ಅವರನ್ನು ದೆಹಲಿಗೆ ಕರೆಸಿದೆ.
ಹರೀಶ್ ರಾವತ್ ಬುಧವಾರ ಮಾಡಿದ ಟ್ವೀಟ್ನಿಂದಾಗಿ ಉತ್ತರಾಖಂಡದಲ್ಲಿ ಮಾತ್ರವಲ್ಲದೆ ದೇಶದ ರಾಜಕೀಯದಲ್ಲಿಯೂ ಭೂಕಂಪ ಶುರುವಾಗಿದೆ. ಹರೀಶ್ ರಾವತ್ ಹಲವು ಟ್ವೀಟ್ಗಳನ್ನು ಮಾಡುವ ಮೂಲಕ ಸಂಸ್ಥೆಯ ಕಾರ್ಯಶೈಲಿ ಮತ್ತು ನಾಯಕತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತಿದ್ದಾರೆ. ಅಷ್ಟಕ್ಕೂ ಪಂಜಾಬ್ನಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ನ ಭಿನ್ನಾಭಿಪ್ರಾಯ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರೀಶ್ ರಾವತ್ ಈಗ ಹೇಗೆ ಬಂಡಾಯ ಧೋರಣೆ ತೋರುತ್ತಾರೆ ಎಂದು ಎಲ್ಲರೂ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹರೀಶ್ ರಾವತ್ ಅವರನ್ನು ಪಂಜಾಬ್ ಉಸ್ತುವಾರಿಯಿಂದ ತೆಗೆದುಹಾಕಿದಾಗ ಮತ್ತು ಹರೀಶ್ ಚೌಧರಿಗೆ ಈ ಜವಾಬ್ದಾರಿಯನ್ನು ನೀಡಿದಾಗಲೇ ಹರೀಶ್ ರಾವತ್ ಅವರ ಬಂಡಾಯದ ವರ್ತನೆ ಪ್ರಾರಂಭವಾಯಿತು. ವರದಿಗಳ ಪ್ರಕಾರ, ಸಿಧು ಮತ್ತು ಕ್ಯಾಪ್ಟನ್ಗೆ ರಾಜಿಯಾಗುವ ಪ್ರಯತ್ನದಲ್ಲಿ ಹರೀಶ್ ರಾವತ್ ಪಾತ್ರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದೆ.
ಅಂದಿನಿಂದ ಹರೀಶ್ ರಾವತ್ ಅವರ ಮನಸ್ಸು ಸ್ವಲ್ಪ ಬೇಸರಗೊಂಡಿದೆ. ಬುಧವಾರ ಟ್ವೀಟ್ ಮಾಡಿರುವ ಅವರು, ಮುಂಬರುವ ಹೊಸ ವರ್ಷದ ವೇಳೆಗೆ ಕೇದಾರನಾಥ ಭಗವಂತ ನನಗೆ ಸರಿಯಾದ ಮಾರ್ಗದರ್ಶನ ನೀಡುತ್ತಾನೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ. ಹರೀಶ್ ರಾವತ್ ಅವರಿಗೆ ಸಾಕಷ್ಟು ವಯಸ್ಸು ಆಗಿದೆ. ಸಾಕಷ್ಟು ಈಜಿದ್ದಾರೆ, ಈಗ ವಿಶ್ರಾಂತಿಯ ಸಮಯ ಬಂದಿದೆ ಎಂದು ಅನೇಕ ಬಾರಿ ಮನಸ್ಸಿನಲ್ಲಿ ಆಲೋಚನೆ ಬರುತ್ತಿದೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಹರೀಶ್ ರಾವತ್ ಅವರ ಈ ಟ್ವೀಟ್ನಿಂದ ಅವರು ರಾಜಕೀಯದಿಂದ ನಿವೃತ್ತಿ ಘೋಷಿಸಬಹುದೇ? ಎನ್ನುವ ಅನುಮಾನ ಮೂಡಿದೆ.
ಅಷ್ಟಕ್ಕೂ ಹರೀಶ್ ರಾವತ್ ಮಾಡಿದ ಸರಣಿ ಟ್ವೀಟ್ ನಲ್ಲಿ ಏನಿದೆ? ಉತ್ತರಖಂಡ ವಿಧಾನಸಭೆ ಚುನಾವಣೆಗೂ ಮುನ್ನ, ಕಾಂಗ್ರೆಸ್ನ ಪ್ರಮುಖ ಟ್ರಬಲ್ ಶೂಟರ್ಗಳಲ್ಲಿ ಒಬ್ಬರಾದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಶೀಘ್ರದಲ್ಲೇ ಪಕ್ಷದ ವಿರುದ್ಧ ಬಂಡಾಯ ಏಳುವ ಸುಳಿವು ನೀಡಿದ್ದಾರೆ. ಅವರು ಮಾಡಿದ ಸರಣಿ ಟ್ವೀಟ್ನಿಂದ ಈ ಪ್ರಶ್ನೆಗಳು ಉದ್ಬವಿಸಿವೆ. ಟ್ವೀಟ್ಗಳಲ್ಲಿ ರಾವತ್ ಅವರು ಗಾಂಧಿ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.
ಹರೀಶ್ ರಾವತ್ ಗಾಂಧಿಯವರಿಗೆ ಹತ್ತಿರವಾಗಿದ್ದರೂ ಕಾಂಗ್ರೆಸ್ ನಾಯಕತ್ವ ಅವರನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ. "ನಾವು ಈ ಚುನಾವಣೆಯ ಸಮುದ್ರದಲ್ಲಿ ಈಜಬೇಕು. ಆದರೆ ನನ್ನನ್ನು ಬೆಂಬಲಿಸುವ ಬದಲು ಸಂಘಟನೆಯು ನನಗೆ ಬೆನ್ನು ತಿರುಗಿಸಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ" ಎಂದು ಹರೀಶ್ ರಾವತ್ ಬರೆದಿದ್ದಾರೆ. ಜೊತೆಗೆ ನಾವು ಸಂಚರಿಸಬೇಕಾದಾಗ ಅನೇಕ ಮೊಸಳೆಯಂತಹ (ಪರಭಕ್ಷಕ) ಶಕ್ತಿಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಾನು ಯಾರನ್ನು ಅನುಸರಿಸಬೇಕೋ ಅವರ ಜನರು ನನ್ನ ಕೈಕಾಲುಗಳನ್ನು ಕಟ್ಟಿದ್ದಾರೆ. ನನಗೆ ಅನಿಸುತ್ತಿದೆ ಈ ವಿಚಾರ ತುಂಬಾ ದೂರ ಹೋಗಿದೆ. ಹರೀಶ್ ರಾವತ್(73) ಗೆ ಇದು ವಿಶ್ರಾಂತಿ ಸಮಯ" ಎಂದು ಅವರು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ " ನಾನು ದುರ್ಬಲನಲ್ಲ ಅಥವಾ ಸವಾಲುಗಳಿಂದ ಓಡಿಹೋಗುವುದಿಲ್ಲ. ನಾನು ಗೊಂದಲದಲ್ಲಿದ್ದೇನೆ. ಹೊಸ ವರ್ಷವು ನನಗೆ ದಾರಿಯನ್ನು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಭಗವಂತ ಕೇದಾರನಾಥ (ಶಿವನು) ನನಗೆ ದಾರಿ ತೋರಿಸುತ್ತಾನೆ ಎಂಬ ವಿಶ್ವಾಸವಿದೆ" ಎಂದು ಬರೆದ ರಾವತ್ ತಾವು ಅತೃಪ್ತನಾಗಿದ್ದು ಮತ್ತು ತನ್ನ ಭವಿಷ್ಯದ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರಾಖಂಡ್ ಚುನಾವಣೆಗೆ ಮುನ್ನ ರಾವತ್ ಅವರ ಎಚ್ಚರಿಕೆ ಜೋರಾಗಿ ಮತ್ತು ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಬಂಡಾಯ ನಾಯಕರೊಂದಿಗೆ ಮಾತುಕತೆಯೊಂದಿಗೆ ಶಾಂತಗೊಳಿಸಲು ದೆಹಲಿಗೆ ಬುಲಾವ್ ಕೊಟ್ಟಿದೆ.
Recommended Video