ಯಾವ ಸಾಧನೆಗೆ ಈ ಸಂಭ್ರಮ?: ಕೇಂದ್ರಕ್ಕೆ ರಾಹುಲ್ ಪ್ರಶ್ನೆ
ನವದೆಹಲಿ, ಮೇ 16: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಸಂದ ಹಿನ್ನೆಲೆಯಲ್ಲಿ ಅದರ ಸಂಭ್ರಮಾಚರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
''ಕಳೆದ ಮೂರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮ (ಬಿಜೆಪಿ) ಸರ್ಕಾರದಿಂದ ನಿರುದ್ಯೋಗ ಹೆಚ್ಚಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗಡಿ ಭಾಗದಲ್ಲಿ ಸೈನಿಕರು ಜೀವ ತೆರುತ್ತಿದ್ದಾರೆ. ನಿಮ್ಮ ಆಡಳಿತದಲ್ಲಿ ಯಾರಿಗೆ ಸುಖವಿದೆ? ಪರಿಸ್ಥಿತಿ ಹೀಗಿರುವಾಗ ಯಾವ ನೈತಿಕತೆಯ ಆಧಾರದ ಮೇಲೆ ಸಂಭ್ರಮಾಚರಣೆ ಮಾಡುತ್ತೀರಿ?'' ಎಂದು ಪ್ರಶ್ನಿಸಿದ್ದಾರೆ.[ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ಗೆ ಸಂಕಷ್ಟ]
ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''2013ರಲ್ಲಿ ನಡೆದ ಲೋಕಸಭೆ ಚುನಾವಣೆಗೂ ಮುನ್ನ ಅನೇಕ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರಿ. ಜನರು ನಿಮ್ಮ ಮೇಲೆ ಅಪಾರ ವಿಶ್ವಾಸವಿಟ್ಟು ಆರಿಸಿದರು. ಆದರೆ, ಆ ವಾಗ್ದಾನಗಳ್ಯಾವುವೂ ಈಡೇರಿಲ್ಲ. ಆ ಐತಿಹಾಸಿಕ ಜನಾದೇಶಕ್ಕೆ ದ್ರೋಹ ಬಗೆದಿದ್ದೀರಿ'' ಎಂದು ಅವರು ಬಿಜೆಪಿಯನ್ನು ಆಕ್ಷೇಪಿಸಿದರು.[ನ್ಯಾಷನಲ್ ಹೆರಾಲ್ಡ್: ಸೋನಿಯಾ, ರಾಹುಲ್ ವಿಚಾರಣೆಗೆ ಕೋರ್ಟ್ ಒಪ್ಪಿಗೆ]
ಕೇಂದ್ರದಲ್ಲಿ ಮೂರು ವರ್ಷಗಳ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯು ದೇಶಾದ್ಯಂತ 'MODI FEST'ಎಂಬ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಿದೆ. ಈ ಸಂಭ್ರಮಾಚರಣೆಯ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿರುವ MODI ಎಂಬ ಪದದ ಅರ್ಥ Making of Developing India ಎಂದು ಸ್ಪಷ್ಟಪಡಿಸಿದೆ. ಆದರೂ, ವಿಪಕ್ಷಗಳು ಅದನ್ನು ಮೋದಿಯವರ ಹೆಸರನ್ನು ಅನೇರವಾಗಿ ಬಳಕೆ ಮಾಡಿಕೊಂಡು ಉತ್ಸವ ಮಾಡಲು ಸಿದ್ಧವಾಗಿದೆ ಎಂದು ಆರೋಪಿಸಿವೆ.