ಪಾಕ್ ನ 'ಬ್ಯಾಟ್' ನುಸುಳುಕೋರರ ಜತೆಗೆ ಗುಂಡಿನ ಚಕಮಕಿ, ಮೂರು ಸೈನಿಕರು ಹುತಾತ್ಮ
ಶ್ರೀನಗರ್, ಅಕ್ಟೋಬರ್ 21: ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಒಳನುಸುಳುಕೋರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಪಾಕಿಸ್ತಾನ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
ನಾಲ್ಕನೇ ಯೋಧನಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಉಧಮ್ ಪುರ್ ನಲ್ಲಿರುವ ಆರ್ಮಿ ಕಮ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಳನುಸುಳುಕೋರರನ್ನು ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ ಗೆ ಸೇರಿದವರು ಎನ್ನಲಾಗಿದೆ. ಅವರು ಭಾರತದ ಸೇನೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಾಡಿದ ಪ್ರತಿ ದಾಳಿಗೆ ಇಬ್ಬರು ಒಳನುಸುಳುಕೋರರು ಸಾವನ್ನಪ್ಪಿದ್ದಾರೆ.
ಗುಂಡಿನ ಚಕಮಕಿ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೈನಿಕರು
ಭಾನುವಾರ ಮಧ್ಯಾಹ್ನ 1.45ರ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ತಿಳಿಸಿದ್ದಾರೆ. "ಗಡಿ ನಿಯಂತ್ರಣ ರೇಖೆ ಬಳಿ ಶಸ್ತ್ರಸಜ್ಜಿತ ಪಾಕಿಸ್ತಾನಿ ಒಳನುಸುಳುಕೋರರ ಜತೆಗೆ ಗುಂಡಿನ ಚಕಮಕಿ ನಡೆಯಿತು. ಸೈನಿಕರು ಇಬ್ಬರನ್ನು ಹೊಡೆದುರುಳಿಸಿದರು. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಧ್ವಂಸ ಮಾಡುವ ಕೆಲಸ ಮುಂದುವರಿದಿದೆ" ಎಂದು ಕರ್ನಲ್ ಹೇಳಿದ್ದಾರೆ.
ಲಷ್ಕರ್ ಇ ತೈಬಾ ಹಾಗೂ ಜೈಷ್ ಇ ಮೊಹ್ಮದ್ ಉಗ್ರ ಸಂಘಟನೆ ಜತೆಗೆ ಪಾಕಿಸ್ತಾನದ ಸೈನಿಕರು ಸೇರಿ 'ಬ್ಯಾಟ್' ಎಂದು ಮಾಡಿಕೊಂಡಿದ್ದಾರೆ. ಇಂಥದ್ದೇ ಒಂದು ತಂಡ ಸೆಪ್ಟೆಂಬರ್ ಹದಿನೆಂಟರಂದು ಸಾಂಬಾ ಜಿಲ್ಲೆಯ ರಾಮ್ ಘರ್ ನಲ್ಲಿ ದಾಳಿ ನಡೆಸಿತ್ತು. ನರೇಂದ್ರ ಕುಮಾರ್ ಎಂಬ ಬಿಎಸ್ ಎಫ್ ಜವಾನ್ ನ ಅಪಹರಿಸಿ, ಹತ್ಯೆ ಮಾಡಲಾಗಿತ್ತು.
ಅಕ್ಟೋಬರ್ ಹದಿನೆಂಟರಂದು ಜೈಷ್-ಇ-ಮೊಹ್ಮದ್ ನರೇಂದ್ರ ಕುಮಾರ್ ಗೆ ಸೇರಿದ ವಸ್ತುಗಳ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿತ್ತು. ಆ ನಂತರವೇ ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಂತರ ನಡೆಯಬೇಕಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವರ ಜತೆಗಿನ ಭೇಟಿಯನ್ನು ಭಾರತ ರದ್ದು ಮಾಡಿತ್ತು.