ಗರ್ಭಿಣಿ ಶಿಕ್ಷಕಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ 22 ವಿದ್ಯಾರ್ಥಿಗಳ ಅಮಾನತು
ನವದೆಹಲಿ, ನವೆಂಬರ್ 30: ಅಸ್ಸಾಂನ ದಿಬ್ರುಗಢ ಜಿಲ್ಲೆಯಲ್ಲಿ ಗರ್ಭಿಣಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ 22 ಶಾಲಾ ವಿದ್ಯಾರ್ಥಿಗಳನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು, 'ಭಾನುವಾರ ನಮ್ಮ ಶಾಲೆಯಲ್ಲಿ ಐದು ತಿಂಗಳ ಗರ್ಭಿಣಿ ಇತಿಹಾಸ ಶಿಕ್ಷಕಿಯ ಮೇಲೆ 10 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದೆ' ಎಂದು ದೃಢಪಡಿಸಿದ್ದಾರೆ.
ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 32 ಮಂದಿಗೆ ಕೊರೊನಾ
ವಿದ್ಯಾರ್ಥಿಗಳ ಕಳಪೆ ಫಲಿತಾಂಶದ ಬಗ್ಗೆ ಶಿಕ್ಷಕಿಯು ಪೋಷಕರಿಗೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಿಡಿಗೇಡಿ ವಿದ್ಯಾರ್ಥಿಗಳ ಗುಂಪು ಗರ್ಭಣಿ ಶಿಕ್ಷಕಿಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ವಿದ್ಯಾರ್ಥಿಗಳು ಮುಖ್ಯ ಕಟ್ಟಡದ ಮುಂದೆ ಶಿಕ್ಷಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಆಕೆಯ ಮೇಲೆ ಕೆಲವರು ಹಲ್ಲೆ ನಡೆಸಿದರು. ಒಬ್ಬ ವಿದ್ಯಾರ್ಥಿ ಶಿಕ್ಷಕಿಯ ಕೂದಲನ್ನು ಹಿಡಿದು ಎಳೆದಾಡಿದನು ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಪ್ರಾಂಶುಪಾಲರು ಮತ್ತು ಮತ್ತೊಬ್ಬ ಶಿಕ್ಷಕರನ್ನೂ ವಿದ್ಯಾರ್ಥಿಗಳ ಗುಂಪು ತಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
'ನನ್ನ ನಿವಾಸದಲ್ಲಿ ತುರ್ತು ಸಭೆ ನಡೆಸಿದ ನಂತರ ಮರುದಿನ ಬೆಳಿಗ್ಗೆ ನಾನು ಅವರ ಪೋಷಕರಿಗೆ ಕರೆ ಮಾಡಿದೆ. ಈ ಬೆಳವಣಿಗೆಯ ಕುರಿತು ಮಾಹಿತಿ ಪಡೆದ ವಿದ್ಯಾರ್ಥಿಗಳು ನನಗೆ ಫೋನ್ ಮೂಲಕ ಬೆದರಿಕೆ ಹಾಕಿದರು. ನನ್ನ ಕ್ವಾರ್ಟರ್ಸ್ ಕಡೆಗೆ ಬಂದು, ನನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು' ಎಂದು ಪ್ರಾಂಶುಪಾಲ ರತೀಸ್ ಕುಮಾರ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಗರ್ಭಿಣಿ ಶಿಕ್ಷಕಿಯನ್ನು ಇತರ ಕೆಲವು ಮಹಿಳಾ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮತ್ತು ಕೆಲವು ವಿದ್ಯಾರ್ಥಿನಿಯರು ರಕ್ಷಿಸಿದ್ದಾರೆ. ಆಘಾತಕ್ಕೊಳಗಾದ ಆಕೆ ಕುಸಿದು ಬೀಳುವ ಹಂತದಲ್ಲಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಔಪಚಾರಿಕವಾಗಿ ದೂರು ದಾಖಲಾಗಿಲ್ಲ. ಈ ಕಾರಣ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನಾವು ದಿಬ್ರುಗಢ ಡೆಪ್ಯೂಟಿ ಕಮಿಷನರ್ ಕಚೇರಿಗೆ ತಿಳಿಸಿದ್ದೇವೆ. ಸಂಬಂಧಪಟ್ಟ ಎಡಿಸಿ ಮ್ಯಾಜಿಸ್ಟ್ರೇಟ್ ತನಿಖೆಯ ಭರವಸೆ ನೀಡಿದರು ಮತ್ತು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಮಗೆ ತಿಳಿಸಿದರು' ಎಂದು ಪ್ರಾಂಶುಪಾಲರು ಹೇಳಿದ್ದಾರೆ.