20 ವರ್ಷದ ನಂತರ 'ಸಿಬಿಐ' ಗಾಳಕ್ಕೆ ಸಿಕ್ಕ ಖತರ್ನಾಕ್ ಖದೀಮ
ಮುಂಬೈ ಕಂಪೆನಿಯೊಂದರಲ್ಲಿ ವಿನಯ್ ಕದಮ್ ನಿರ್ದೇಶಕ ಹುದ್ದೆಯಲ್ಲಿದ್ದ. ಈ ವೇಳೆ 1997ರಲ್ಲಿ ಬ್ಯಾಂಕ್ ಆಫ್ ಬರೋಡಾಕ್ಕೆ 3.77 ಕೋಟಿ ರೂಪಾಯಿಯನ್ನು ಈತ ವಂಚಿಸಿದ್ದ. ನಂತರ ಆತ ವಿದೇಶಕ್ಕೆ ಪರಾರಿಯಾಗಿದ್ದ.
ಪಣಜಿ, ಮೇ 10: 20 ವರ್ಷಗಳ ಸಿಬಿಐ ಹೋರಾಟ ಕೊನೆಗೂ ಕೊನೆಗೊಂಡಿದೆ. ಬಹುಶಃ ಮದ್ಯದ ದೊರೆ ವಿಜಯ್ ಮಲ್ಯಗೆ ಸಾಲ ಮಾಡಿ ವಿದೇಶಕ್ಕೆ ಓಡಿ ಹೋಗುವ ಪ್ಲಾನ್ ಕೊಟ್ಟವನು ಇವನೇ ಇರಬೇಕು.
20 ವರ್ಷದ ಹಿಂದೆ ಬ್ಯಾಂಕುಗಳಿಗೆ 3.77 ಕೋಟಿ ರೂ ವಂಚಿಸಿ ವಿನಯ್ ಕದಮ್ ವಿದೇಶಕ್ಕೆ ಪರಾರಿಯಾಗಿದ್ದ. ಆದರೆ ಧೈರ್ಯ ಮಾಡಿ 20 ವರ್ಷದ ನಂತರ ರೀಗನ್ ರೋಲಿನ್ ಹೆಸರಿನಲ್ಲಿ ಗೋವಾಕ್ಕೆ ರಜೆ ಕಳೆಯಲು ಬಂದಿದ್ದ. ಈ ವೇಳೆ ಆತನನ್ನು ಕೇಂದ್ರ ತನಿಖಾ ದಳ (ಸಿಬಿಐ) ಪೊಲೀಸರು ಬಂಧಿಸಿದ್ದಾರೆ.

1997ರಲ್ಲಿ ಬ್ಯಾಂಕ್ ಆಫ್ ಬರೋಡಾಕ್ಕೆ 3.77 ಕೋಟಿ ರೂಪಾಯಿಯನ್ನು ಈತ ವಂಚಿಸಿದ್ದ. ವಂಚನೆ ವೇಳೆ ಮುಂಬೈ ಕಂಪೆನಿಯೊಂದರಲ್ಲಿ ವಿನಯ್ ಕದಮ್ ನಿರ್ದೇಶಕ ಹುದ್ದೆಯಲ್ಲಿದ್ದ. ಆತ ಆ ಸಂದರ್ಭದಲ್ಲಿ ರಾಜೇಂದ್ರ ಸಿಂಗ್ ಮಾನ್ ಸಿಂಗ್ ರಾವೋಲಿ ಎಂಬ ಅಹ್ಮದಾಬಾದ್ ರಿಯಲ್ ಎಸ್ಟೇಟ್ ಕಂಪೆನಿ ಮಾಲಿಕನಿಗೆ ಬ್ಯಾಂಕ್ ವಂಚಿಸುವ ಐಡಿಯಾ ಕೊಟ್ಟಿದ್ದ.
ಮುಂದೆ ಇಬ್ಬರೂ ಸೇರಿ 7 ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಇದಕ್ಕೆಲ್ಲಾ ಡಮ್ಮಿ ನಿರ್ದೇಶಕರನ್ನು ಸೃಷ್ಟಿಸಿದ್ದರು. ಮುಂದೆ ಇದೇ ಕಂಪೆನಿ ಮೂಲಕ 31 ನಕಲಿ ಚೆಕ್ ನೀಡಿ ಬ್ಯಾಂಕ್ ಅಧಿಕಾರಿಗಳ ಜತೆ ಕೈ ಜೋಡಿಸಿ 3.77 ಕೋಟಿ ರೂಪಾಯಿ ಪಡೆದುಕೊಂಡಿದ್ದರು.
ನಂತರ ಆತ ವಿದೇಶಕ್ಕೆ ಪರಾರಿಯಾಗಿದ್ದ. ಈತನ ಬಂಧನಕ್ಕೆ ಸಿಬಿಐ ಅವತ್ತೇ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಆದರೆ ಕೆನಡಾದಲ್ಲಿ ಅಡಗಿಕೊಂಡಿದ್ದ ವಿನಯ್ ಕದಮ್ ನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಇದೀಗ ಗೋವಾದಲ್ಲಿ ಬಂದಿಳಿಯುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.












Click it and Unblock the Notifications