ವಿಮಾನದಲ್ಲಿ 2 ಬಾರಿ ಹೃದಯಾಘಾತ: ಪ್ರಯಾಣಿಕನ ಪಾಲಿಗೆ ದೇವರಾದ ವೈದ್ಯ
ದೇವರು ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವೈದ್ಯರನ್ನು ಸೃಷ್ಟಿ ಮಾಡಿದ್ದಾನೆ ಎನ್ನುವ ಮಾತು ಇದೆ. ಈ ಮಾತು ನೆನಸಿಕೊಳ್ಳಲು ಕಾರಣವೇನೆಂದರೆ ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಹೋರಾಡಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ.ವಿಶ್ವರಾಜ್ ವೇಮಲಾ ಅವರು ಐದು ಗಂಟೆಗಳ ಕಾಲ ಸತತವಾಗಿ ಹೋರಾಡಿ ವಿಮಾನದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ 43 ವರ್ಷದ ವ್ಯಕ್ತಿಯ ಪ್ರಾಣವನ್ನು ಉಳಿಸಿದ್ದಾರೆ. ವಿಮಾನದಲ್ಲಿ ವೈದ್ಯಕೀಯ ಸಾಮಗ್ರಿಗಳು ಮತ್ತು ಪ್ರಯಾಣಿಕರಿಂದ ಬಂದ ವಸ್ತುಗಳ ನೆರವಿನಿಂದ, ಡಾ ವೇಮಲಾ ತನ್ನ ಸಹ ಪ್ರಯಾಣಿಕರಿಗೆ ಎರಡು ಬಾರಿ ಪುನರುಜ್ಜೀವನ ನೀಡಿದ್ದಾರೆ. ವೈದ್ಯರ ಈ ಸಮಯ ಪ್ರಜ್ಞೆಗೆ ಹಾಗೂ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಘಟನೆಯ ಸಂಪೂರ್ಣ ವಿವರವನ್ನು ಡಾ.ವಿಶ್ವರಾಜ್ ವೇಮಲಾ ಯೂನಿವರ್ಸಿಟಿ ಹಾಸ್ಪಿಟಲ್ ಬರ್ಮಿಂಗ್ಹ್ಯಾಮ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
"ನಮ್ಮ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ಗಳಲ್ಲಿ ಒಬ್ಬರಾದ ಡಾ ವಿಶ್ವರಾಜ್ ವೇಮಲಾ ಅವರು ವಿಮಾನದ ಮಧ್ಯದಲ್ಲಿ ಎರಡು ಬಾರಿ ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು. ವಿಮಾನದಲ್ಲಿ ಲಭ್ಯವಿರುವ ವಸ್ತುಗಳ ಸಹಾಯದಿಂದ ಡಾ ವೇಮಲಾ ಅವರು ಪುನರುಜ್ಜೀವನಗೊಳಿಸಲು ಸಾಧ್ಯವಾಯಿತು," ಎಂದು ಯೂನಿವರ್ಸಿಟಿ ಹಾಸ್ಪಿಟಲ್ ಬರ್ಮಿಂಗ್ಹ್ಯಾಮ್ Twitter ನಲ್ಲಿ ಬರೆಯಲಾಗಿದೆ.
ಹೃದಯಾಘಾತದಿಂದ ವಿಮಾನದಲ್ಲಿ ಕುಸಿದು ಬಿದ್ದ ಪ್ರಯಾಣಿಕ
ಪತ್ರಿಕಾ ಟಿಪ್ಪಣಿಯ ಪ್ರಕಾರ, ಡಾ ವೇಮಲಾ ಅವರು ನವೆಂಬರ್ನಲ್ಲಿ ಯುನೈಟೆಡ್ ಕಿಂಗ್ಡಮ್ನಿಂದ ಭಾರತಕ್ಕೆ ತಮ್ಮ ತಾಯಿಯನ್ನು ತಮ್ಮ ಊರಾದ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯೊಬ್ಬರಿಗೆ ಹೃದಯಾಘಾತವಾಗಿ ಕುಸಿದು ಬಿದ್ದರು. ಆಗ ವೇಮಲಾ ಅವರು ಪ್ರಯಾಣಿಕನ ಸಹಾಯಕ್ಕೆ ಮುಂದಾದರು. ಪ್ರಯಾಣಿಕರಿಗೆ ಪ್ರಜ್ಞೆ ಬರುವ ಮೊದಲು ವೈದ್ಯರು ಸುಮಾರು ಒಂದು ಗಂಟೆ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು.
ಪ್ರಯಾಣಿಕನ ಪಾಲಿಗೆ ದೇವರಾದ ಡಾ ವೇಮಲಾ
ಈ ಸಮಯದಲ್ಲಿ, ಡಾ.ವೇಮಲಾ ಅವರು ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಗೆ ಏನಾದರೂ ಔಷಧಿ ಇದೆಯೇ ಎಂದು ಕೇಳಿದರು. "ಅದೃಷ್ಟವಶಾತ್, ಅವರು ತುರ್ತು ಕಿಟ್ ಅನ್ನು ಹೊಂದಿದ್ದರು. ಇದನ್ನೇ ಬಳಸಿಕೊಂಡು ವೈದ್ಯರು ಪ್ರಾಥಮಿಕ ಚಿಕಿತ್ಸೆಗೆ ಮುಂದಾದರು" ಎಂದು ಅವರು ಹೇಳಿದರು. ಆದಾಗ್ಯೂ, "ಆಮ್ಲಜನಕ ಮತ್ತು ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಹೊರತುಪಡಿಸಿ, ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಮೇಲ್ವಿಚಾರಣೆ ಮಾಡಲು ಇತರ ಯಾವುದೇ ಉಪಕರಣಗಳು ಅಲ್ಲಿ ಇರಲಿಲ್ಲ" ಎಂದು ಅವರು ಹೇಳಿದರು. ವಿಮಾನದಲ್ಲಿದ್ದ ಇತರ ಪ್ರಯಾಣಿಕರೊಂದಿಗೆ ಮಾತನಾಡಿದ ನಂತರ, ಡಾ. ವೇಮಲಾ ಅವರು ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಯಂತ್ರ, ಪಲ್ಸ್ ಆಕ್ಸಿಮೀಟರ್ ಮತ್ತು ಗ್ಲೂಕೋಸ್ ಮೀಟರ್ ಪಡೆಯುವಲ್ಲಿ ಯಶಸ್ವಿಯಾದರು. ನಿರಂತರ ಪ್ರಯತ್ನದ ಬಳಿಕ ವ್ಯಕ್ತಿಯ ಹೃದಯ ಬಡಿತ ಆರಂಭವಾಯಿತು.
|
ಐದು ಗಂಟೆಗಳ ಕಾಲ ಹೋರಾಡಿದ ಡಾ.ವಿಶ್ವರಾಜ್ ವೇಮಲಾ
ಪತ್ರಿಕಾ ಪ್ರಕಟಣೆಯ ಪ್ರಕಾರ, ಡಾ.ವೇಮಲಾ ಅವರು, "ವ್ಯಕ್ತಿ ಸುಮಾರು ಎರಡು ಗಂಟೆಗಳ ಕಾಲ ಉತ್ತಮ ನಾಡಿಮಿಡಿತ ಅಥವಾ ಯೋಗ್ಯವಾದ ರಕ್ತದೊತ್ತಡವನ್ನು ಹೊಂದಿರಲಿಲ್ಲ. ಕ್ಯಾಬಿನ್ ಸಿಬ್ಬಂದಿಯ ಜೊತೆಗೆ, ನಾವು ಅವರನ್ನು ಒಟ್ಟು ಐದು ಗಂಟೆಗಳ ಕಾಲ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೇವೆ. ಇದು ನಮಗೆಲ್ಲರಿಗೂ, ವಿಶೇಷವಾಗಿ ಇತರ ಪ್ರಯಾಣಿಕರಿಗೆ ಅತ್ಯಂತ ಭಯಾನಕವಾಗಿತ್ತು ಮತ್ತು ಇದು ಸಾಕಷ್ಟು ಭಾವನಾತ್ಮಕವಾಗಿತ್ತು'' ಎಂದು ಹೇಳಿಕೊಂಡಿದ್ದಾರೆ.
ಪ್ರಯಾಣಿಕರ ಸ್ಥಿತಿಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯೊಂದಿಗೆ, ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಿದರು, ಅಲ್ಲಿ ತುರ್ತು ಸಿಬ್ಬಂದಿಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು.
ಜೀವ ರಕ್ಷಿಸಿದ ವೈದ್ಯರಿಗೆ ಕಣ್ಣೀರಿನೊಂದಿಗೆ ಧನ್ಯವಾದ
"ನಾವು ಮುಂಬೈಗೆ ಇಳಿಯಬಹುದು ಎಂದು ಕೇಳಿದಾಗ ನಮಗೆಲ್ಲರಿಗೂ ಇದು ತುಂಬಾ ಭಾವನಾತ್ಮಕವಾಗಿತ್ತು. ನಾವು ಇಳಿಯುವ ಹೊತ್ತಿಗೆ ಪ್ರಯಾಣಿಕರು ಪುನರುಜ್ಜೀವನಗೊಂಡಿದ್ದರು ಮತ್ತು ಅವರು ನನ್ನೊಂದಿಗೆ ಮಾತನಾಡಲು ಸಾಧ್ಯವಾಗಿತ್ತು. ಆದರೂ, ಅವರನ್ನು ಪರೀಕ್ಷಿಸಲು ಆಸ್ಪತ್ರೆಗೆ ಹೋಗಬೇಕೆಂದು ನಾನು ಒತ್ತಾಯಿಸಿದೆ" ಎಂದು ವೈದ್ಯರು ಹೇಳಿಕೊಂಡಿದ್ದಾರೆ.
ರೋಗಿಯು ಕಣ್ಣೀರಿನೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಡಾ ವೇಮಲಾ ಹೇಳಿದರು. ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ತಂಡದೊಂದಿಗೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದಿದ್ದಾರೆ. ಈ ಸಂದರ್ಭ ಕಲ್ಲು ಮನಸ್ಸಿನವರ ಕಣ್ಣಲ್ಲೂ ನೀರು ತರಿಸುವಂತಿದೆ. ಆಯಸ್ಸು ಗಟ್ಟಿಯಾಗಿದ್ದರೆ ಯಾವ ಸಂದರ್ಭವೇ ಇರಲಿ ಆ ದೇವರು ನಮ್ಮನ್ನು ಕಾಪಾಡುತ್ತಾನೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಒಟ್ಟಿನಲ್ಲಿ ಡಾ ವಿಶ್ವರಾಜ್ ವೇಮಲಾ ಹೃದಯಾಘಾತಕ್ಕೆ ಒಳಗಾದ ಪ್ರಯಾಣಿಕನಿಗೆ ದೇವರಾಗಿದ್ದಂತು ಸುಳ್ಳಲ್ಲ.