ಶಿವಮೊಗ್ಗ: ಹಿಂದೂಗಳು ಹರಿತವಾದ ಚಾಕು ಇಟ್ಟುಕೊಳ್ಳಿ ಹೇಳಿಕೆ: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ವಿರುದ್ಧ ದೂರು
ಶಿವಮೊಗ್ಗ, ಡಿ. 27: 'ಹಿಂದೂಗಳು ತಮ್ಮ ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು' ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎರಡು ದೂರುಗಳು ದಾಖಲಾಗಿವೆ.
Copy of the complaint to SP Shivamogga as well as acknowledgment from Karnataka Police pic.twitter.com/826ZekUayX
— Saket Gokhale (@SaketGokhale) December 27, 2022
ಶಿವಮೊಗ್ಗ ಜಿಲ್ಲೆಯಲ್ಲಿ ಅವರ ವಿರುದ್ಧ ಕನಿಷ್ಠ ಎರಡು ದೂರುಗಳು ದಾಖಲಾಗಿವೆ. ಸೋಮವಾರ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ಅವರು, ಹಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು.
ಪ್ರಾಣ ನೀಡುವುದು ಗೊತ್ತು, ತೆಗೆಯುವುದು ಕೂಡ ಗೊತ್ತಿದೆ: ಶಿವಮೊಗ್ಗದಲ್ಲಿ ಪ್ರಜ್ಞಾ ಸಿಂಗ್ ಪ್ರಚೋದನಾಕಾರಿ ಭಾಷಣ
ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಪ್ರಜ್ಞಾ ಠಾಕೂರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಜ್ಞಾ ಠಾಕೂರ್ ಅವರು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಕೋಮುಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಸಾಕೇತ್ ಗೋಖಲೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು, ಪ್ರಜ್ಞಾ ಠಾಕೂರ್ ಅವರ 'ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮತ್ತು ಅವಹೇಳನಕಾರಿ ಭಾಷಣ' ಮಾಡಿದ್ದಾರೆ ಎಂದು ಆರೋಪಿಸಿ ತೆಹ್ಸೀನ್ ಪೂನವಾಲಾ ಅವರು ಮತ್ತೊಂದು ದೂರು ದಾಖಲಿಸಿದ್ದಾರೆ. ಅಲ್ಲದೆ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಶಿವಮೊಗ್ಗದ ಪೊಲೀಸ್ ವರಿಷ್ಠಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರಿಗೆ ದೂರು ಸಲ್ಲಿಸಿರುವ ತೆಹ್ಸೀನ್ ಪೂನವಾಲಾ, ಪೋಲೀಸರು 153-A, 153-B, 268, 295-A, 298, 504, 508 (IPC) ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಲು ವಿನಂತಿಸಿದ್ದಾರೆ.
ಸಮಾವೇಶದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಮಾತನಾಡಿದ್ದ ಪ್ರಜ್ಞಾ ಸಿಂಗ್ ಠಾಕೂರ್, ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ಪ್ರತಿಕ್ರಿಯಿಸುವ ಹಕ್ಕು ಹಿಂದೂಗಳಿಗೆ ಇದೆ ಎಂದು ಹೇಳಿದ್ದರು.
"ನಮ್ಮ ಜನ್ಮಭೂಮಿ ನಮಗೆ ಸ್ವರ್ಗಕ್ಕಿಂತಲು ಮಿಗಿಲು. ಇದರ ಋಣ ತೀರಿಸದೆ ನಾವು ಸುಮ್ಮನೆ ಕೂರುವಂತಿಲ್ಲ. ಸ್ವಾತಂತ್ರ್ಯದ ಬಳಿಕವು ನಾವು ಪ್ರಾಣ ಅರ್ಪಣೆ ಮಾಡುತ್ತಿದ್ದೇವೆ. ದೇಶ, ಮಾತೃ ಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದರೆ ನಾವು ಹೇಡಿಗಳಂತೆ ಮನೆಯಲ್ಲಿ ಕೂರುವುದಿಲ್ಲ. ನಮ್ಮ ದೇಶದ, ಧರ್ಮದ ರಕ್ಷಣೆಗೆ ಸದಾ ಸಿದ್ಧವಾಗರಬೇಕಿದೆ. ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಅವಶ್ಯತೆ ಎನಿಸಿದರೆ ಬಂದೂಕಿನ ಲೈಸೆನ್ಸ್ ಕೂಡ ಪಡೆದುಕೊಳ್ಳಿ. ಯಾರಾದರೂ ಸಮಸ್ಯೆ ಮಾಡಿದರೆ ಪ್ರತ್ಯುತ್ತರ ನೀಡಬೇಕು. ಹಿಂದೂಗಳು ತಮ್ಮ ಮನೆಗಳಲ್ಲಿ ಕನಿಷ್ಠ ಚಾಕುಗಳನ್ನು ಇಟ್ಟುಕೊಳ್ಳಬೇಕು" ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು.
'ಪ್ರೇಮದ ಹೆಸರಿನಲ್ಲಿ ಅನ್ಯಾಯ, ಅತ್ಯಾಚಾರ ಎಸಗುವವರನ್ನು ನಿರ್ನಾಮ ಮಾಡಬೇಕು. ಯಾಕೆಂದರೆ ಇದ್ಯಾವುದು ಪ್ರೇಮದ ಪರಿಭಾಷೆಯಲ್ಲಿಲ್ಲ. ಕೆಲವರು ಏನೇನು ಮಾಡಲಾಗದವರು ಪ್ರೇಮದ ಹೆಸರಿನಲ್ಲಿ ಜಿಹಾದ್ ಮಾಡಲು ಆರಂಭಿಸಿದ್ದಾರೆ. ಲವ್ ಜಿಹಾದ್ ಮಾಡುವವರಿಗೆ ಅದೇ ರೀತಿಯ ಉತ್ತರ ನೀಡಬೇಕು. ನಮ್ಮ ಹೆಣ್ಣು ಮಕ್ಕಳನ್ನು ಜಾಗೃತಗೊಳಿಸಬೇಕು. ನಾವು ಕೂಡ ತರಕಾರಿ ಕತ್ತರಿಸುವ ಚಾಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ" ಎಂದಿದ್ದರು.