Modi Dhyana: ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ!
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸುಮಾರು ಎರಡೂವರೆ ತಿಂಗಳ ಕಾಲ ದೇಶಾದ್ಯಂತ ಸುಮಾರು 200 ಚುನಾವಣಾ ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಕೊನೆಯ ಹಂತದ ಚುನಾವಣೆಗೂ ಮುನ್ನ ಕನ್ಯಾಕುಮಾರಿಯ (Kanyakumari) ಪ್ರಸಿದ್ಧ ವಿವೇಕಾನಂದ (Vivekananda) ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.
ಇದಕ್ಕಾಗಿ ಗುರುವಾರದಿಂದ (ಮೇ 30) ಸುಮಾರು 45 ಗಂಟೆಗಳ ಕಾಲ ಮೋದಿ ಅವರು ಕನ್ಯಾಕುಮಾರಿಯಲ್ಲಿ ಇರಲಿದ್ದು ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

2000 ಪೊಲೀಸರನ್ನು ನಿಯೋಜನೆ
ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನ ಮಾಡಲಿದ್ದು ಇದಕ್ಕಾಗಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ ಸುಮಾರು 2,000 ಪೊಲೀಸರ ಹೊರತಾಗಿ ವಿವಿಧ ಭದ್ರತಾ ಏಜೆನ್ಸಿಗಳು ಕಟ್ಟುನಿಟ್ಟಿನ ನಿಗಾ ವಹಿಸಲಿವೆ.
ಅಷ್ಟೇ ಅಲ್ಲ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಕಡಲ ಗಡಿಗಳಲ್ಲಿ ಕಣ್ಗಾವಲು ನಡೆಸಲಿದೆ. 2019ರಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈಗ ಕನ್ಯಾಕುಮಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮೋದಿ ಧ್ಯಾನದ ವಿರುದ್ಧ ಡಿಎಂಕೆ ಅರ್ಜಿ
ಇದೇ ವೇಳೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪ್ರಧಾನಿಯವರ ಆಧ್ಯಾತ್ಮಿಕ ವಾಸ್ತವ್ಯದ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ. ಇದರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಾಗೂ ಪ್ರವಾಸಿ ಋತುವಿನಲ್ಲಿ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದನ್ನು ಉಲ್ಲೇಖಿಸಿದ್ದಾರೆ.
ಮೋದಿ ಧ್ಯಾನ ಮಾಡುವುದರಿಂದ ಪ್ರವಾಸಿಗರಿಗೆ ತೊಂದರೆಯಾಗಲಿದ್ದು, ಇದು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ಅರ್ಜಿಯಲ್ಲಿ ತಿಳಿಸಿಲಾಗಿದೆ.
ಪ್ರವಾಸಿಗರಿಗೆ ಕನ್ಯಾಕುಮಾರಿ ಬಂದ್
ದೇಶದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯ ಕಡಲತೀರಗಳು ಗುರುವಾರದಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಮುಚ್ಚಲ್ಪಡುತ್ತವೆ. ಖಾಸಗಿ ದೋಣಿಗಳನ್ನು ಸಹ ಓಡಿಸಲು ಅನುಮತಿಸಲಾಗುವುದಿಲ್ಲ.
ಮತ್ತೊಂದೆಡೆ ಚುನಾವಣಾ ಕಾನೂನಿನ ಪ್ರಕಾರ, ಚುನಾವಣಾ ಸಮಯದಲ್ಲಿ ಪ್ರಧಾನಿ ಧ್ಯಾನ ಯಾತ್ರೆ ಕೈಗೊಳ್ಳುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಮೂಲಗಳು ಬುಧವಾರ ತಿಳಿಸಿವೆ.
ಪ್ರಧಾನಿ ಮೋದಿ ಧ್ಯಾನ ಮಾಡುವ ಸ್ಥಳ
ಸ್ವಾಮಿ ವಿವೇಕಾನಂದರು ದೇಶ ಪರ್ಯಟನೆ ಮಾಡಿದ ನಂತರ ಮೂರು ದಿನಗಳ ಕಾಲ ಅಭಿವೃದ್ಧಿ ಹೊಂದುವ ಭಾರತದ ಕನಸು ಕಂಡು ಧ್ಯಾನ ಮಾಡಿದ ಕನ್ಯಾಕುಮಾರಿಯ ಅದೇ ಸ್ಥಳದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ.
ಈ ಸ್ಥಳಕ್ಕೆ ಸ್ವಾಮಿ ವಿವೇಕಾನಂದರ ನೆನಪಿಗಾಗಿ ವಿವೇಕಾನಂದ ರಾಕ್ ಸ್ಮಾರಕ ಎಂದು ಹೆಸರಿಸಲಾಗಿದೆ. ಇದು ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಭಾರತದ ದಕ್ಷಿಣ ಭಾಗವಾಗಿದೆ. ಅಲ್ಲದೆ ಈ ಸ್ಥಳ ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮ ಸ್ಥಳವಾಗಿದೆ.
ಪ್ರಧಾನಿ ಮೋದಿ ಧ್ಯಾನ ಮಾಡುವ ಸಮಯ
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವನ್ನು ಕಾಣುವ ಕನಸು ಹೊಂದಿರುವುದಾಗಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಪ್ರಮುಖ ವಿಷಯವನ್ನಾಗಿಸಿಕೊಂಡಿದ್ದರು.
ಆಧ್ಯಾತ್ಮಿಕ ವಾಸ್ತವ್ಯಕ್ಕಾಗಿ ಮೋದಿ ಮೇ 30ರಂದು ಮಧ್ಯಾಹ್ನ ಕನ್ಯಾಕುಮಾರಿ ತಲುಪಲಿದ್ದಾರೆ. ಇದಾದ ಬಳಿಕ ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳಲಿದ್ದಾರೆ. ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಮೋದಿ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ.
ಇಲ್ಲಿನ ಪ್ರಸಿದ್ಧ ಭಗವತಿ ಅಮ್ಮನ್ ದೇವಸ್ಥಾನದಲ್ಲಿಯೂ ಪ್ರಧಾನಮಂತ್ರಿಯವರು ಪ್ರಾರ್ಥನೆ ಸಲ್ಲಿಸಬಹುದು. ಜೂನ್ 1 ರಂದು ಸಂಜೆ ಇಲ್ಲಿಂದ ಹೊರಡುವ ಮುನ್ನ ಮೋದಿ ಅವರು ಬಹುಶಃ ತಮಿಳು ಕವಿ ತಿರುವಳ್ಳುವರ್ ಅವರ 133 ಅಡಿ ಎತ್ತರದ ಪ್ರತಿಮೆಗೆ ಭೇಟಿ ನೀಡಲಿದ್ದಾರೆ.












Click it and Unblock the Notifications