100 ದಿನ ಪೂರೈಸಿದ ಯೋಗಿ ಸರ್ಕಾರ ಸಾಧನೆಗಳೇನು?
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ 100 ವರ್ಷ ಪೂರೈಕೆ. ಹಲವಾರು ಸಾಧನೆಗಳಿದ್ದರೂ ಸರ್ಕಾರಕ್ಕೆ ಕೆಲವಾರು ಹಿನ್ನಡೆಗಳು.
ಇದೇ ವರ್ಷ ನಡೆದಿದ್ದ ಉತ್ತರ ಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಬಿಜೆಪಿ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಅಲ್ಲಿ ಅಸ್ತಿತ್ವಕ್ಕೆ ತಂದಿತು.
ಇದೇ ವರ್ಷ ಮಾರ್ಚ್ 12ರಂದು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಯೋಗಿ ಆದಿತ್ಯನಾಥ್ ಅವರ ಸರ್ಕಾರಕ್ಕೆ ಜೂನ್ 27ರಂದು 100 ದಿನಗಳು ತುಂಬಿವೆ.
ಅಧಿಕಾರ ವಹಿಸಿಕೊಳ್ಳುತ್ತಲೇ ಆಡಳಿತ ಯಂತ್ರವನ್ನು ಚುರುಕುಗೊಳಿಸಿ, ಹಲವಾರು ಜನಪರ ಕಾರ್ಯಕ್ರಮಗಳು, ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಗಮನ ಸೆಳೆದ ಯೋಗಿ, ಗೋ ಹತ್ಯೆಯನ್ನು ನಿಷೇಧಗೊಳಿಸಿ ವಿವಾದವನ್ನೂ ಮೈಮೇಲೆ ಎಳೆದುಕೊಂಡರು. ಈ ಹಿನ್ನೆಲೆಯಲ್ಲಿ, ಯೋಗಿ ಸರ್ಕಾರದ ಸಾಧನೆಗಳು, ವೈಫಲ್ಯಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.
ದಕ್ಷ ಅಧಿಕಾರಿಗಳಿಗೆ ಮಾನ್ಯತೆ
ಪೊಲೀಸ್ ವ್ಯವಸ್ಥೆಗೆ ಹೊಸ ಕಾಯಕಲ್ಪ. ಶಿಸ್ತಿನ ಅಧಿಕಾರಿಗಳಿಗೆ ಅಭಯ ಹಸ್ತ. ತಪ್ಪೆಸಗುವ ಅಧಿಕಾರಿಗಳಿಗೆ ಎಚ್ಚರಿಕೆ. ಹೆಣ್ಣುಮಕ್ಕಳ ರಕ್ಷಣೆಗೆ ಆ್ಯಂಟಿ ರೋಮಿಯೋ ಸ್ಕ್ವಾಡ್ ಎಂಬ ನೈತಿಕ ಪೊಲೀಸ್ ತಂಡ ರಚನೆ - ಇವು ಯೋಗಿ ಸಾಧನೆಯ ಪಟ್ಟಿಯಲ್ಲಿ ಬರುತ್ತವೆ.
ರಜಾ ದಿನಗಳ ಕಡಿತ
ರೈತರ ಸಾಲ ಮನ್ನಾ, ಸರ್ಕಾರಿ ರಜಾ ದಿನಗಳಲ್ಲಿ ಕಡಿತ, ಬಡವರಿಗೆ ಉಚಿತ ವಿದ್ಯುತ್, ವಿದ್ಯುತ್ ಸರಬರಾಜು ವಿಧಾನದಲ್ಲಿ ಗಣನೀಯ ಅಭಿವೃದ್ಧಿ, ಲ್ಯಾಂಡ್ ಮಾಫಿಯಾ ವಿರುದ್ಧ ಟಾಸ್ಕ್ ಫೋರ್ಸ್, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಅಪಾರ ಪರಿಶ್ರಮ - ಇವು ಮತ್ತಷ್ಟು ಸಾಧನೆಗಳು.
ಯೋಗಿ ಮಂತ್ರಿಮಂಡಲದ ಪ್ರಭಾವಿ ಸಚಿವರು
ಯೋಗಿ ಮಂತ್ರಿಮಂಡಲದ ದಕ್ಷ ಸಚಿವರಾದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಮತ್ತೊಬ್ಬ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಿದ್ದಾರ್ಥ ನಾಥ್ ಸಿಂಗ್ (ಆರೋಗ್ಯ ಸಚಿವ), ಶ್ರೀಕಾಂತ್ ಶರ್ಮಾ (ಇಂಧನ ಸಚಿವ), ರೀಟಾ ಬಹುಗುಣ ಜೋಷಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ) ಅವರ ಕಡೆಯಿಂದ ಪರಿಣಾಮಕಾರಿಯಾಗಿ ಕೆಲಸ ಪಡೆದ ಸಾಧನೆ - ಇದು ಯೋಗಿ ದಕ್ಷ ಆಡಳಿತಕ್ಕೆ ಸಾಕ್ಷಿ.
ಆಯಕಟ್ಟಿನ ಜಾಗದಲ್ಲಿ ಶಿಸ್ತಿನ ಅಧಿಕಾರಿಗಳ ನಿಯೋಜನೆ
ಕೇಂದ್ರದ ಹಲವಾರು ದಕ್ಷ ಅಧಿಕಾರಿಗಳ ನಿಯೋಜನೆ. ಅಧಿಕಾರ ಯಂತ್ರಕ್ಕೆ ಚುರುಕು. ಆಯಕಟ್ಟಿನ ಜಾಗಗಳಲ್ಲಿ ಶಿಸ್ತಿನ ಅಧಿಕಾರಿಗಳನ್ನಿಟ್ಟು ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳು ನೇರವಾಗಿ ಜನರಿಗೆ ತಲುಪುವ ವ್ಯವಸ್ಥೆ. - ಇವೂ ಯೋಗಿಯವರ ಹೆಗ್ಗಳಿಕೆಗಳಲ್ಲೊಂದು.
ಇಲ್ಲಿ ಕೊಂಚ ಹಿನ್ನಡೆ ಅನುಭವಿಸಿದ ಯೋಗಿ
ಸಾಧನೆಗಳ ನಡುವೆಯೇ ಕೆಲವಾರು ಕಪ್ಪು ಚುಕ್ಕೆಗಳು ಈ ಸರ್ಕಾರದ ಮೇಲಿವೆ. ಗೋ ಹತ್ಯೆ ನಿರ್ಬಂಧ ಕಾನೂನು ಉತ್ತರ ಪ್ರದೇಶದಲ್ಲಿ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನುಳಿದಂತೆ, ಇತ್ತೀಚೆಗೆ, ಸಹರನ್ ಪುರದಲ್ಲಿ ನಡೆದ ಕೋಮು ಗಲಭೆ, ಆ್ಯಂಟಿ ರೋಮಿಯೋ ವತಿಯಿಂದ ಪರಿಣಾಮಕಾರಿಯಾಗಿ ಕೆಲಸವಾಗದೇ ಇರುವುದು, ರಾಜ್ಯಾದ್ಯಂತ ಉತ್ತಮ ಗುಣಮಟ್ಟ ರಸ್ತೆ ನಿರ್ಮಿಸುವ ಭರವಸೆ ಈಡೇರಿಲ್ಲದಿರುವುದು ಯೋಗಿ ಸರ್ಕಾರದ ಕೆಲವಾರು ವೈಫಲ್ಯಗಳನ್ನೂ ತೋರಿಸಿವೆ.