ಒಬ್ಬ ಸೋಂಕಿತನಿಂದ ಗರಿಷ್ಠ ಎಷ್ಟು ಮಂದಿಗೆ ಕೊರೊನಾ ಸೋಂಕು ತಗುಲಬಹುದು?
ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಶರವೇಗದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ದಿನನಿತ್ಯ ಮೂರು ಲಕ್ಷಕ್ಕೂ ಮೀರಿ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ರೂಪಾಂತರ ಸೋಂಕು 70% ಅಧಿಕ ವೇಗದಲ್ಲಿ ಹರಡುತ್ತದೆ ಎಂದು ವಿಜ್ಞಾನಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ.
ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ, ಆತನ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗುಲುತ್ತದೆ. ಎಷ್ಟೋ ಕಡೆ ಸಮುದಾಯದ ಮಟ್ಟದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೆ ಒಬ್ಬ ವ್ಯಕ್ತಿಯಿಂದ ಗರಿಷ್ಠ ಎಷ್ಟು ಮಂದಿಗೆ ಕೊರೊನಾ ಹರಡಬಹುದು? ಈ ಕುರಿತು ಅಧ್ಯಯನ ಕೈಗೊಂಡಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಜೊತೆಗೆ ಎಚ್ಚರಿಕೆಯನ್ನೂ ರವಾನಿಸಿದೆ. ಮುಂದೆ ಓದಿ...
ದೆಹಲಿಯಲ್ಲಿ ಭೀಕರ ಚಿತ್ರಣ; ಸ್ಟ್ರೆಚರ್ಗಳ ಮೇಲೇ ಪ್ರಾಣ ಬಿಡುತ್ತಿರುವ ರೋಗಿಗಳು
ಸೋಂಕಿತನಿಂದ 30 ದಿನಗಳಲ್ಲಿ 406 ಮಂದಿಗೆ ಸೋಂಕು
ಒಬ್ಬ ಸೋಂಕಿತ ವ್ಯಕ್ತಿಯಿಂದ ಸಾಮಾಜಿಕ/ ದೈಹಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಆತನಿಂದ ಸುಮಾರು 406 ಮಂದಿಗೆ ಕೊರೊನಾ ಸೋಂಕು ತಗುಲಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಮೂವತ್ತು ದಿನಗಳಲ್ಲಿ 406 ಮಂದಿಗೆ ಈ ಸೋಂಕು ಪಸರಿಸಬಹುದು ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯವೂ ಸೋಮವಾರ ತಿಳಿಸಿದೆ.
"ಅಂತರ ಪಾಲಿಸದಿದ್ದರೆ ಅಪಾಯ ಖಂಡಿತ"
ಸಾಮಾಜಿಕ ಅಂತರ ಪಾಲಿಸದೇ ಇದ್ದರೆ 406 ಮಂದಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದು ಸಂಶೋಧನೆ ದೃಢಪಡಿಸಿರುವುದಾಗಿ ಸಚಿವಾಲಯ ತಿಳಿಸಿದೆ. ಸೋಮವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ನೀತಿ ಆಯೋಗ (ಆರೋಗ್ಯ) ಸದಸ್ಯ ಡಾ. ವಿ.ಕೆ.ಪೌಲ್, ಅವಶ್ಯಕವಿಲ್ಲದಿದ್ದರೆ ಹೊರಗೆ ಹೋಗಲೇಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಮನೆಯಲ್ಲಿಯೇ ಇದ್ದರೂ ಮಾಸ್ಕ್ ಹಾಕಿಕೊಳ್ಳಿ. ಅತಿಥಿಗಳನ್ನು ಈ ಸಮಯದಲ್ಲಿ ಮನೆಗೆ ಆಹ್ವಾನಿಸಬೇಡಿ ಎಂದು ಹೇಳಿದ್ದಾರೆ.
ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ: ಬದುಕೆಷ್ಟು ನಶ್ವರ
ಸೋಂಕು ತಡೆಗೆ ಸಾಮಾಜಿಕ ಅಂತರವಷ್ಟೇ ದಾರಿ
ಸಾಮಾಜಿಕ ಅಂತರದ ಮೂಲಕ ಸೋಂಕಿಗೆ ಒಡ್ಡಿಕೊಳ್ಳುವುದನ್ನು ಶೇ.50ರಷ್ಟು ಕಡಿಮೆಗೊಳಿಸಿದರೆ, ಒಬ್ಬ ವ್ಯಕ್ತಿಯಿಂದ 406 ಜನರ ಬದಲು ಕೇವಲ 15 ಜನರಿಗೆ ಸೋಂಕು ತಗುಲುತ್ತದೆ. ಶೇ 75ರಷ್ಟು ಕಡಿಮೆಗೊಳಿಸಿದರೆ, ಒಬ್ಬ ವ್ಯಕ್ತಿಯು ಕೇವಲ 2.5 ಮಂದಿಗೆ ಸೋಂಕು ಹರಡಿಸಬಹುದು. ಈ ಅಂಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಪೌಲ್ ಜನರಿಗೆ ವಿನಂತಿಸಿದ್ದಾರೆ.
"ಸಾಮಾಜಿಕ ಅಂತರವೇ ಸಾಮಾಜಿಕ ಲಸಿಕೆ"
ಕೊರೊನಾ ನಿಯಮಾವಳಿಗಳನ್ನು ಸರಿಯಾಗಿ ನಿರ್ವಹಿಸಿದರೆ, ಲಕ್ಷಾಂತರ ಮಂದಿಗೆ ಕೊರೊನಾ ಹರಡುವುದನ್ನು ತಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ. ಸಾಮಾಜಿಕ ಅಂತರವನ್ನು ಸಾಮಾಜಿಕ ಲಸಿಕೆ ಎಂದು ಕರೆದಿರುವ ಅವರು, ಜನರಿಗೆ, ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ ಮನವಿ ಮಾಡಿದ್ದಾರೆ.