ತೆಲಂಗಾಣದಲ್ಲಿ ರಣಕಹಳೆ ಮೊಳಗಿಸಿದ ಯೋಗಿ-ಓವೈಸಿ ಮಾತಿನ ಚಕಮಕಿ!
ಹೈದರಾಬಾದ್, ಡಿಸೆಂಬರ್ 03: ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಸಲುವಾಗಿ ಪ್ರಚಾರದಲ್ಲಿ ನಿರತರಾಗಿರುವ ಸ್ಟಾರ್ ಕ್ಯಾಂಪೇನರ್ ಗಳ ಪರಸ್ಪರ ಕೆಸರೆರಚಾಟ, ಚುನಾವಣೆಗೆ ರಣರಂಗದ ಕಳೆ ತಂದಿದೆ!
ಬಿಜೆಪಿಯ ಅತ್ಯಂತ ಪ್ರಮುಖ ತಾರಾ ಪ್ರಚಾರಕರಾಗಿ ತೆಲಂಗಾಣದಲ್ಲಿ ಪ್ರಚಾರದಲ್ಲಿ ನಿರತರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹೈದರಾಬಾದ್ ಸಂಸದ ಮತ್ತು ಎಐಎಂಐಎಂ (All India Majlis-e-Ittehadul Muslimeen) ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಯೋಗಿ ಅವರ ಮಾತಿಗೆ ಕೆಂಡಾಮಂಡಲವಾದ ಓವೈಸಿ, ತಮ್ಮದೇ ಮಾತಿನ ಶೈಲಿಯಲ್ಲಿ ಯೋಗಿ ಅವರಿಗೆ ಪ್ರತ್ಯುತ್ತರ ನೀಡಿದರು. ಈ ಇಬ್ಬರು ಪ್ರಮುಖ ನಾಯಕರ ಮಾತುಗಳು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ರಸದೌತಣ ಬಡಿಸಿತು.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಓವೈಸಿ ಪಲಾಯನ!
ತೆಲಂಗಾಣದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್, 'ಅಕಸ್ಮಾತ್ ತೆಲಂಗಾಣದಲ್ಲಿ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಹೈದರಾಬಾದಿನಿಂದ ಪಲಾಯನಗೈಯುತ್ತಾರೆ' ಎಂಬ ಹೇಳಿಕೆ ನೀಡಿದ್ದರು. 'ಇತಿಹಾಸದಲ್ಲಿ ಹೈದರಾಬಾದಿನ ನಿಜಾಮ ಹೇಗೆ ಹೈದರಾಬಾದಿನಿಂದ ಓಡಿಹೋದರೋ ಹಾಗೆಯೇ ಓಬವೈಸಿಯೂ ಓಡಿಹೋಗುತ್ತಾರೆ' ಎಂದು ಯೋಗಿ ಹೇಳಿದ್ದರು.

ನಾನ್ಯಾಕೆ ಓಡಿಹೋಗಲಿ?
"ನಾನು ನನ್ನ ತಂದೆಯ ರಾಷ್ಟ್ರದಲ್ಲಿದ್ದೇನೆ. ನಾನ್ಯಾಕೆ ಇಲ್ಲಿಂದ ಓಡಿ ಹೋಗಲಿ? ಇಲ್ಲಿಂದ ನನ್ನನ್ನು ಪಲಾಯನಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಒತ್ತಾಯದಿಂದಲೂ ನನ್ನನ್ನು ಇಲ್ಲಿಂದ ಓಡಿಸುವುದಕ್ಕೆ ಸಾಧ್ಯವಿಲ್ಲ. ಇಂಥ ಬೆದರಿಕೆಗಳಿಗೆ ನಾನು ಬಗ್ಗೋಲ್ಲ. ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಮದ್ರ ಮೋದಿ ಇಬ್ಬರದೂ ಒಂದೇ ರೀತಿಯ ಮನಸ್ಥಿತಿ" ಎಂದು ಓವೈಸಿ ಯೋಗಿಗೆ ಪ್ರತ್ಯುತ್ತರ ನೀಡಿದರು.

ಸಹೋದರನ ನೆರವಿಗೆ ನಿಂತ ಅಕ್ಬರುದ್ದಿನ್!
ಯೋಗಿ ಅವರ ಹೇಳಿಕೆಗೆ ಅಸಾದುದ್ದಿನ್ ಓವೈಸಿ ನೀಡಿದ ಪ್ರತಿಕ್ರಿಯೆ ಸಾಲದೆಂಬಂತೆ, ಅವರ ಸಹೋದರ ಅಕ್ಬರುದ್ದಿನ್ ಓವೈಸಿ ಸಹ ಯೋಗಿಗೆ ಪ್ರತ್ಯುತ್ತರ ನೀದಿದರು. "ನಾವು ಓಡಿಹೋಗುವುದಕ್ಕಾಗಿ ಇಲ್ಲಿಲ್ಲ. ನಮ್ಮ ಸಾವಿರ ತಲೆಮಾರುಗಳು ಇಲ್ಲಿ ಬದುಕುತ್ತಿವೆ. ಮೊದಲು ಉತ್ತರ ಭಾರತದ ನಿಮ್ಮದೇ ಕ್ಷೇತ್ರದಲ್ಲಿ 150 ಮಕ್ಕಳು ಮೃತರಾದರಲ್ಲ, ಅದಕ್ಕೆ ಪರಿಹಾರ ಹುಡುಕಿ. ನಂತರ ನಮ್ಮನ್ನು ಓಡಿಸಬಹುದು" ಎಂದು ಕುಹಕದ ಪ್ರತಿಕ್ರಿಯೆ ನೀಡಿದ್ದಾರೆ.

ರಣರಂಗವಾದ ತೆಲಂಗಾಣ!
ತೆಲಂಗಾಣದ 119 ಕ್ಷೇತ್ರಗಳಿಗೆ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಅವಧಿಗೂ ಮುನ್ನವೇ ಹಾಲಿ ಮುಖ್ಯಮಂತ್ರಿ ಟಿ ಆರ್ ಎಸ್ ನ ಕೆ ಚಂದ್ರಶೇಖರ್ ರಾವ್ ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಚುನಾವಣೆ ನಡೆಯುತ್ತಿದೆ. ರಾಷ್ಟ್ರದ ಹಲವು ತಾರಾ ಪ್ರಚಾರಕರು ರಾಜ್ಯಕ್ಕೆ ಆಗಮಿಸಿ, ಚುನಾವಣಾ ಪ್ರಚಾರ ಕೈಗೊಂಡಿರುವುದರಿಂದ ಚುನಾವಣಾ ಕಣಕ್ಕೆ ಕಳೆ ಬಂದಂತಾಗಿದೆ. 2019 ರ ಲೋಕಭಾ ಚುನಾವಣೆಗೂ ಮುನ್ನ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಚುನಾವಣೆ ದಾಗಿರುವುದರಿಂದ ಸಾಕಷ್ಟು ಕುತೂಹಲ ಕೆರಳಿಸಿದೆ.












Click it and Unblock the Notifications