ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಓಡಿಸಲಾಗುವುದು ಎಂದ ಕೆಸಿಆರ್
ಹೈದರಾಬಾದ್, ಫೆಬ್ರವರಿ 12: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಾಗ್ದಾಳಿ ಮುಂದುವರಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ನೆರವು ಸಿಗದಿದ್ದರೆ, ನರೇಂದ್ರ ಮೋದಿಯವರನ್ನೇ ಅಧಿಕಾರದಿಂದ ಓಡಿಸಲಾಗುವುದು ಎಂದು ಹೇಳಿದ್ದಾರೆ.
ಜನಗಾಂವ್ ಜಿಲ್ಲೆಯ ಯಶವಂತಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆ ಚಂದ್ರಶೇಖರ್ ರಾವ್, ಅಗತ್ಯಬಿದ್ದರೆ ದೆಹಲಿಯಲ್ಲಿ ಬಿಜೆಪಿ ಕೋಟೆಯನ್ನು ಒಡೆಯಲು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸುವುದಕ್ಕೂ ಸಿದ್ಧ ಎಂದು ಎಂದಿದ್ದಾರೆ.
"ನಮಗೆ ರಾಷ್ಟ್ರೀಯ ಯೋಜನೆಗಳನ್ನು ನೀಡುವುದಿಲ್ಲ, ಮೆಡಿಕಲ್ ಕಾಲೇಜುಗಳನ್ನು ನೀಡುವುದಿಲ್ಲ. ನೀವು ನಮಗೆ ಬೆಂಬಲಿಸುವುದಿಲ್ಲ ಎಂದರೆ ಪರವಾಗಿಲ್ಲ. ನಿಮ್ಮನ್ನು ಅಧಿಕಾರದಿಂದ ಓಡಿಸಿ, ನಮಗೆ ಬೆಂಬಲ ನೀಡುವ ಸರ್ಕಾರವನ್ನು ತರುತ್ತೇವೆ," ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಎನ್ಡಿಎ ಸರ್ಕಾರ ಪ್ರಸ್ತಾಪಿಸಿರುವ ವಿದ್ಯುತ್ ಸುಧಾರಣೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ದೆಹಲಿ ಕೋಟೆ ಒಡೆಯಲು ಸಿದ್ಧ:
ಒಂದು ವೇಳೆ ಅಗತ್ಯ ಬಿದ್ದರೆ, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲು ನಾನು ಸಿದ್ಧನಿದ್ದೇನೆ. ದೇಶಕ್ಕಾಗಿ ನಾವು ಒಟ್ಟಾಗಿ ಹೋರಾಡಬೇಕಿದೆ. ನೀವು ನನಗೆ ಆಶೀರ್ವದಿಸಿದರೆ, ದೆಹಲಿಯ ಕೋಟೆಯನ್ನು ಒಡೆಯಲು ಸಿದ್ಧವಾಗಿದ್ದೇನೆ. ನರೇಂದ್ರ ಮೋದಿಯವರೇ ಹುಷಾರಾಗಿರಿ, ನಿಮ್ಮ ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರುವುದಿಲ್ಲ," ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆಯ ಬಗ್ಗೆ ಲೇವಡಿ ಮಾಡಿರುವ ಕೆಸಿಆರ್, ರೈತರ ಆದಾಯದ ಬದಲಿಗೆ ಇಂಧನ ಮತ್ತು ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಇದರಿಂದ ರೈತರ ಹೂಡಿಕೆ ದ್ವಿಗುಣಗೊಂಡಿದೆ ಎಂದು ಕಿಡಿ ಕಾರಿದ್ದಾರೆ.
ಜನಾಂವ್ನಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಟಿಆರ್ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಮಾಧ್ಯಮಗಳ ಮೂಲಕ ತನಗೆ ತಿಳಿಯಿತು. ಯಾರಾದರೂ ತನ್ನ ಪಕ್ಷದವರನ್ನು ಮುಟ್ಟಿದರೆ ಹುಷಾರ್ ಎಂದು ಕೇಸರಿ ಪಕ್ಷಕ್ಕೆ ಎಚ್ಚರಿಕೆ ನೀಡಿದರು.
ದಲಿತ ಬಂಧು ಯೋಜನೆ ಜಾರಿಗೆ ಬದ್ಧ:
"ದಲಿತ ಬಂಧು" ಯೋಜನೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಶ್ರೀ ರಾವ್ ಹೇಳಿದರು, ಇದರ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಅವರ ಆಯ್ಕೆಯ ವ್ಯವಹಾರವನ್ನು ಪ್ರಾರಂಭಿಸಲು 10 ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ವರ್ಷ 40,000 ದಲಿತರಿಗೆ ಯೋಜನೆಯಡಿ ಹಣವನ್ನು ನೀಡಲಾಗುವುದು. ಪ್ರತಿ ವರ್ಷ ಎರಡರಿಂದ ಮೂರು ಲಕ್ಷ ಫಲಾನುಭವಿಗಳಿಗೆ "ದಲಿತ ಬಂಧು" ನೀಡಲಾಗುವುದು ಎಂದು ಕೆಸಿಆರ್ ಹೇಳಿದರು. ಇದಕ್ಕೂ ಮುನ್ನ ಮಧ್ಯಾಹ್ನ ಜನಾಂವದಲ್ಲಿ ಸಂಯೋಜಿತ ಕಲೆಕ್ಟರೇಟ್ ಉದ್ಘಾಟಿಸಿದರು.












Click it and Unblock the Notifications