ಹಿಂದೂಸ್ಥಾನದ ಎಲ್ಲಾ ಮುಸ್ಲಿಮರಲ್ಲಿ 'ಉಗ್ರ'ರನ್ನು ಕಾಣುವ ಬಿಜೆಪಿ: ಓವೈಸಿ
ಹಿಂದೂಸ್ಥಾನದ ಎಲ್ಲಾ ಮುಸ್ಲಿಮರಲ್ಲಿ ಉಗ್ರರನ್ನು ಕಾಣುವ ಬಿಜೆಪಿ: ಓವೈಸಿ
ಹೈದರಾಬಾದ್, ಜೂನ್ 2: ಭಾರತೀಯ ಜನತಾ ಪಕ್ಷದ ಬಹುದೊಡ್ಡ ಸಮಸ್ಯೆಯೆಂದರೆ, ಹಿಂದೂಸ್ಥಾನದಲ್ಲಿ ಎಲ್ಲೇ ಮುಸ್ಲಿಮರನ್ನು ಕಂಡರೆ ಅವರಲ್ಲಿ ಉಗ್ರರನ್ನು ಕಾಣುವುದು ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಮಾಧ್ಯಮದರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಓವೈಸಿ, ರಾಷ್ಟ್ರೀಯ ತನಿಖಾ ದಳ, ಗುಪ್ತಚರ ಇಲಾಖೆ ಮತ್ತು ರಾ (RAW) ಸಂಸ್ಥೆ, ಕಳೆದ ಐದು ವರ್ಷಗಳಲ್ಲಿ ಎಷ್ಟು ತನಿಖಾ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದೆ ಎನ್ನುವುದನ್ನು ಬಿಜೆಪಿ ಸ್ಪಷ್ಟ ಪಡಿಸಲಿ ಎಂದಿದ್ದಾರೆ.
ನೂತನ ಸಚಿವರಾಗಿ ಆಯ್ಕೆಯಾದ ಸಿಕಂದರಾಬಾದ್ ಬಿಜೆಪಿ ಸಂಸದ ಕಿಶನ್ ರೆಡ್ಡಿ, ಹೈದರಾಬಾದ್ ಭಯೋತ್ಪಾದಕರಿಗೆ ಭಾರತದಲ್ಲಿ ಅತ್ಯಂತ ಸುರಕ್ಷಿತ ತಾಣ ಎನ್ನುವ ವಿವಾದಕಾರಿ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸುತ್ತಿದ್ದ ಓವೈಸಿ, ಕಿಶನ್ ರೆಡ್ಡಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು. ಅವರು ಕೂಡಾ, ಹೈದಾರಾಬಾದ್ ವ್ಯಾಪ್ತಿಯ ಇನ್ನೊಂದು ಸಂಸದ. ಅವರು ನೀಡಿದ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾದದ್ದು ಎಂದು ಓವೈಸಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಭೋಪಾಲ್, ಬೆಂಗಳೂರು, ದೆಹಲಿ ಎಲ್ಲಾದರೂ ಭಯೋತ್ಪಾದಕ ಕೃತ್ಯ ನಡೆಯಲಿ ಅದರ ಮೂಲ ಹೈದರಾಬಾದ್ ಎಂದು ಕಿಶನ್ ರೆಡ್ಡಿ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನೀಡಿದ್ದ ರೆಡ್ಡಿಯವರನ್ನು, ಗೃಹ ಸಚಿವ ಅಮಿತ್ ಶಾ, ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ.
ತೆಲಂಗಾಣದ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ವಿಶೇಷ ಪ್ರಯತ್ನದಿಂದ, ಬೆಂಗಳೂರಿನ ನಂತರ ಹೈದರಾಬಾದ್ ಬಹುದೊಡ್ಡ ಐಟಿ ಕೇಂದ್ರವಾಗಿದೆ. ಆದರೆ, ಬಿಜೆಪಿ ಮುಖಂಡರ ಹೇಳಿಕೆ, ತೆಲಂಗಾಣ ಮತ್ತು ಹೈದರಾಬಾದ್ ಮೇಲೆ ಅವರಿಗಿರುವ ದ್ವೇಷವನ್ನು ಸಾರುತ್ತದೆ ಎಂದು ಓವೈಸಿ ಹೇಳಿದ್ದಾರೆ.












Click it and Unblock the Notifications