ನಮಗೆ MSP ಬೇಕು, ನ.29ಕ್ಕೆ ಟ್ರ್ಯಾಕ್ಟರ್ ಮೆರವಣಿಗೆ: ಟಿಕಾಯತ್
ಹೈದರಾಬಾದ್, ನವೆಂಬರ್ 25: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಸದ್ಯ ತೆಲಂಗಾಣದಲ್ಲಿದ್ದಾರೆ. ಇಲ್ಲಿ ರಾಕೇಶ್ ಟಿಕಾಯತ್ ಅವರು ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಕುರಿತು ಹೇಳಿಕೆ ನೀಡಿದರು. "ಸರ್ಕಾರ ತನ್ನ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಆದರೆ ಅವು ನಮ್ಮ ಪರಿಹಾರವಲ್ಲ. ದೇಶದ ರೈತರ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಿ ಎಂಎಸ್ಪಿ ಕುರಿತು ಕಾನೂನು ತರುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ" ಎಂದು ಹೇಳಿದರು.
ತೆಲಂಗಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್ ಅವರು, ರೈತ ಚಳವಳಿಗಾರರ ಪರವಾಗಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಆ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಜನವರಿ 26ರವರೆಗೆ ಕಾಲಾವಕಾಶ ನೀಡಿದ್ದೇವೆ. ನಮ್ಮ ಧರಣಿ ಸ್ಥಳ ಖಾಲಿಯಾಗುವುದಿಲ್ಲ. ಬರುವ ನವೆಂಬರ್ 29 ರಂದು ರೈತ ಬಂಧುಗಳೊಂದಿಗೆ 60 ಟ್ರ್ಯಾಕ್ಟರ್ಗಳೊಂದಿಗೆ ಸಂಸತ್ ಭವನದತ್ತ ಮೆರವಣಿಗೆ ನಡೆಸುತ್ತೇವೆ ಎಂದಿದ್ದಾರೆ.
ಸರ್ಕಾರ ಕಾನೂನುಗಳನ್ನು ಹಿಂಪಡೆದಿದೆ ಎಂದು ಪತ್ರಕರ್ತರು ಕೇಳಿದಾಗ, "ಹೌದು...ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ, ಆದರೆ ಅದು ನಮಗೆ ಪರಿಹಾರವಾಗುವುದಿಲ್ಲ. ಎಂಎಸ್ಪಿ ಗ್ಯಾರಂಟಿ ಪಡೆದ ಮೇಲೆ ನಮ್ಮ ಬೇಡಿಕೆ ಈಡೇರುತ್ತದೆ. ಇದಕ್ಕೆ ಸರಕಾರ ರೈತರೊಂದಿಗೆ ಮಾತನಾಡಬೇಕು" ಎಂದರು. ರೈತ ಸಂಘಟನೆಗಳ 'ಭಾರತ್ ಬಂದ್' ಯಶಸ್ವಿಯಾಗಿದೆ. ನಮಗೆ ರೈತರ ಸಂಪೂರ್ಣ ಬೆಂಬಲ ಸಿಕ್ಕಿದೆ. ಸರ್ಕಾರ ಮಾತನಾಡಲಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಆದರೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಟಿಕಾಯತ್ ಹೇಳಿದರು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದ ರೈತರು ಈಗ ಕನಿಷ್ಠ ಬೆಂಬಲ ಬೆಲೆಯ(ಎಂಎಸ್ಪಿ) ಮೇಲೆ ಗಮನ ಕೇಂದ್ರಿಕರಿಸಿದ್ದಾರೆ. ಎಂಎಸ್ಪಿ ಏಕೆ ಅಗತ್ಯ ಮತ್ತು ಎಂಎಸ್ಪಿ ಲೆಕ್ಕಾಚಾರ ಹೇಗಿರಬೇಕು ಎಂಬುದನ್ನು ವಿವರಿಸುವ ಬರಹವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಬಿಡುಗಡೆ ಮಾಡಿದೆ. ಕೃಷಿ ಕಾಯ್ದೆಗಳನ್ನು ತೆಗೆದುಹಾಕಲು, ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ದಿನವೇ ಕಿಸಾನ್ ಸಂಯುಕ್ತ ಮೋರ್ಚಾ ಎಂಎಸ್ಪಿಯ ಅಗತ್ಯವನ್ನು ಪ್ರತಿಪಾದಿಸಿದೆ. 'ಈ ಪ್ರತಿಭಟನೆ ಕೊನೆಯಾಗಿಲ್ಲ. ಮುಂದೆ ಏನು ಮಾಡಬೇಕು ಎಂಬುನ್ನು ನಿರ್ಧರಿಸಲು ನಾವು ಇದೇ 27ಕ್ಕೆ ಸಭೆ ನಡೆಸಲಿದ್ದೇವೆ' ಎಂದು ಭಾರತೀಯ ಕಿಸಾನ್ ಯೂನಿಯನ್ನ ನಾಯಕ ರಾಕೇಶ್ ಟಿಕಾಯತ್ ಬುಧವಾರ ಟ್ವೀಟ್ ಮಾಡಿದ್ದಾರೆ.
'ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (ಸಿಎಸಿಪಿ) ಎಲ್ಲಾ ಬೆಳೆಗಳಿಗೆ ರೈತ ಮಾಡಿದ ವೆಚ್ಚ ಮತ್ತು ಕುಟುಂಬದ ಸದಸ್ಯರ ದುಡಿಮೆಯನ್ನು ಸೇರಿಸಿ ಎಂಎಸ್ಪಿ ನಿಗದಿ ಮಾಡುತ್ತದೆ. ಆದರೆ ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾದ ಎಂಎಸ್ಪಿಯು ರೈತ ಮಾಡಿದ ವೆಚ್ಚ, ಕುಟುಂಬದ ಸದಸ್ಯರ ದುಡಿಮೆ, ಜಮೀನು ಮತ್ತು ಬಂಡವಾಳ ಹೂಡಿಕೆ ಮೇಲಿನ ಗಳಿಕೆಯನ್ನು ಒಳಗೊಂಡಿದೆ. ಸಿಎಸಿಪಿ ನಿಗದಿ ಮಾಡುವ ಎಂಎಸ್ಪಿಯು, ಸ್ವಾಮಿನಾಥನ್ ಆಯೋಗದಲ್ಲಿ ವಿವರಿಸಲಾದ ಎಂಎಸ್ಪಿಗಿಂತ ಕಡಿಮೆ' ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ವಿವರಿಸಿದೆ.
'ಬೇರೆ-ಬೇರೆ ರಾಜ್ಯಗಳು ಎಂಎಸ್ಪಿಯನ್ನು ಬೇರೆ-ಬೇರೆ ರೀತಿಯಲ್ಲಿ ಲೆಕ್ಕ ಹಾಕುತ್ತವೆ. ಹೀಗಾಗಿ ಒಂದೇ ಬೆಳೆಗೆ ಹಲವು ರಾಜ್ಯಗಳಲ್ಲಿ ಭಿನ್ನ ಎಂಎಸ್ಪಿ ಇದೆ. ಈ ಕಾರಣದಿಂದಲೇ ರೈತರು ಸರಿಯಾದ ಎಂಎಸ್ಪಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ' ಎಂದು ಎಸ್ಕೆಎಂ ಹೇಳಿದೆ.
Recommended Video
'ಕೃಷಿ ಕಾಯ್ದೆಗಳಿಂದ ಬರಬಹುದಾಗಿದ್ದ ಸಮಸ್ಯೆಗಳು ಮಾತ್ರ ಈಗ ಬಗೆಹರಿದಿವೆ. ಆದರೆ ಕಡಿಮೆ ಬೆಲೆ, ಬೆಳೆನಾಶ, ಅತೀವ ಸಾಲದ ಸಮಸ್ಯೆಗಳು ಹಾಗೇ ಇವೆ. ಎಂಎಸ್ಪಿಯಲ್ಲಿ ಸರ್ಕಾರವು ಕೃಷಿ ಉತ್ಪನ್ನಗಳನ್ನು ಖರೀಸದಿಸುತ್ತದೆ ಎಂಬ ಖಾತರಿ ಸಹ ಇಲ್ಲ. ಈ ಸಮಸ್ಯೆಗಳು ಬಗೆಹರಿಯಬೇಕು ಎಂದರೆ ಸರ್ಕಾರವು ಸರಿಯಾದ ರೀತಿಯಲ್ಲಿ ಎಂಎಸ್ಪಿ ನೀಡಬೇಕು' ಎಂದು ಎಸ್ಕೆಎಂ ಪ್ರತಿಪಾದಿಸಿದೆ.