GHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯ
ಹೈದರಾಬಾದ್, ನವೆಂಬರ್ 23: ಬಿಜೆಪಿ ರಾಷ್ಟ್ರೀಯ ಯುವ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ಹೈದರಾಬಾದ್ಗೆ ಭೇಟಿ ನೀಡಿದ್ದು, ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ.
ತೇಜಸ್ವಿ ಸೂರ್ಯ ಭೇಟಿಯ ವಿರುದ್ಧ ತೆಲಂಗಾಣದ ಜನರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಹೆಸರನ್ನು ತೇಜಸ್ವಿ ಸೂರ್ಯ 'ಭಾಗ್ಯನಗರ್' ಎಂದು ಟ್ವಿಟ್ಟರ್ನಲ್ಲಿ ಉಲ್ಲೇಖಿಸಿರುವುದು ಜನರ ಕೋಪಕ್ಕೆ ಗುರಿಯಾಗಿದೆ.
ಪಶ್ಚಿಮ ಬಂಗಾಳದ ಬಳಿಕ ಇಲ್ಲಿ ಹಿಂಸಾಚಾರ ನಡೆಸಲು ಬಂದಿದ್ದಾರೆ. ಇಲ್ಲಿಂದ ಹೊರಹೋಗಿ, ನಮಗೆ ಕೋಮು ಗಲಭೆ ಬೇಕಿಲ್ಲ. ಎಲ್ಲರೂ ಆಹಾರ, ವಿದ್ಯುತ್, ಕೆಲಸ, ರಸ್ತೆ ಮುಂತಾದವುಗಳ ಬಗ್ಗೆ ಯೋಚಿಸುತ್ತಿದ್ದರೆ, ಬಿಜೆಪಿಯು ರಸ್ತೆ, ಬೀದಿ, ಹೋಟೆಲ್ಗಳ ಹೆಸರು ಬದಲಿಸುವುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.
'ಭಾಗ್ಯ ನಗರದ ಜನರೇ, ನಾಳೆ 11 ಗಂಟೆಗೆ ವಿವೇಕಾನಂದ ತಾಂತ್ರಿಕ ಸಂಸ್ಥೆಯಲ್ಲಿ 'ಹೈದಾರಾಬಾದ್ ಅನ್ನು ಬದಲಾಯಿಸಿ' ಎಂಬ ನಮ್ಮ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ. ಕುಟ್ಬಲ್ಲಾಪುರ್, ಜ್ಯುಬಿಲಿ ಹಿಲ್ ಮತ್ತು ಮಾಧಪುರ್-ಲಿಂಗಪ್ಪಳ್ಳಿಗಳಲ್ಲಿ ನಿಮ್ಮೊಂದಿಗೆ ಬೆರೆಯಲು ಕಾದಿದ್ದೇನೆ' ಎಂದು ಅವರು ಭಾನುವಾರ ಟ್ವೀಟ್ ಮಾಡಿದ್ದರು. ಮುಂದೆ ಓದಿ.

ರೊಹಿಂಗ್ಯಾ ಮುಸ್ಲಿಮರಿಗೆ ಅವಕಾಶ
ಗ್ರೇಟರ್ ಹೈದರಾಬಾದ್ ಪಾಲಿಕೆ (ಜಿಎಚ್ಎಂಸಿ) ಚುನಾವಣೆಗೂ ಮುನ್ನ ಹೈದರಾಬಾದ್ಗೆ ಭೇಟಿ ನೀಡಿರುವ ತೇಜಸ್ವಿ ಸೂರ್ಯ, ಓವೈಸಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ಆದರೆ ಹೈದರಾಬಾದ್ನಲ್ಲಿ ರೊಹಿಂಗ್ಯಾ ಮುಸ್ಲಿಮರರನ್ನು ಮಾತ್ರ ಅಭಿವೃದ್ಧಿ ಮಾಡಿದ್ದಾರೆ ಎಂದು ಆರೋಪಿಸಿದರು.

ಓವೈಸಿಗೆ ಹಾಕುವ ಮತ ಭಾರತದ ವಿರುದ್ಧದಂತೆ
ಓವೈಸಿ ಯಾವಾಗಲೂ ಪ್ರತ್ಯೇಕವಾದ ಮತ್ತು ಉಗ್ರವಾದದ ಭಾಷೆಯನ್ನು ಮಾತನಾಡುತ್ತಾರೆ. 'ಅಕ್ಬರುದ್ದೀನ್ ಮತ್ತು ಅಸಾದುದ್ದೀನ್ ಓವೈಸಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ಅವರು ಹಳೆಯ ಹೈದರಾಬಾದ್ನಲ್ಲಿ ಅಭಿವೃದ್ಧಿಗೆ ಅವಕಾಶ ನೀಡಲಿಲ್ಲ. ಆದರೆ ಅವರು ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿದರು. ಓವೈಸಿಗೆ ಹಾಕುವ ಪ್ರತಿ ಒಂದು ಮತವೂ ಭಾರತದ ವಿರುದ್ಧ ಮತ್ತು ಭಾರತದ ಪ್ರತಿ ನಿಲುವಿನ ವಿರುದ್ಧದ ಮತ' ಎಂದು ವಾಗ್ದಾಳಿ ನಡೆಸಿದರು.

ಓವೈಸಿ, ಜಿನ್ನಾ ಇದ್ದಂತೆ
ಎಐಎಂಐಎಂ ಪಕ್ಷವು ಟಿಆರ್ಎಸ್ನ ಬಿ ಟೀಮ್ ಇದ್ದಂತೆ. ಎಐಎಂಐಎಂಗೆ ಮತ ಹಾಕಿದರೆ ಅದು ಟಿಅರ್ಎಸ್ಗೆ ಹಾಕಿದಂತೆ. ಕೆ ಚಂದ್ರಶೇಖರ್ ರಾವ್ ಇಲ್ಲಿ ಕುಟುಂಬ ಆಡಳಿತ ಮಾಡುತ್ತಿದ್ದಾರೆ. ಹೈದರಾಬಾದ್ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಬಯಸಿದ್ದಾರೆ. ಅಸಾದ್ದೀನ್ ಓವೈಸಿ, ಜಿನ್ನಾ ಅವತಾರದಂತೆ. ಹೈದರಾಬಾದ್ನಲ್ಲಿ ಓವೈಸಿ ಗೆದ್ದರೆ ಶೀಘ್ರದಲ್ಲಿಯೇ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ ಎಂದರು.

ಬಿಜೆಪಿಗೆ ಆಶೀರ್ವದಿಸುತ್ತಾರೆ
ಈ ಸ್ವಾಗತಕ್ಕಾಗಿ ಹೈದರಾಬಾದ್ನ ಬಿಜೆವೈಎಂ ಕಾರ್ಯಕರ್ತರಿಗೆ ಧನ್ಯವಾದಗಳು. ತೆಲಂಗಾಣವು ಸುದೀರ್ಘ ಸಮಯದಿಂದ ಟಿಆರ್ಎಸ್ನ ದುರಾಡಳಿತದಿಂದ ಬಸವಳಿದಿದೆ. ಹೈದರಾಬಾದ್ನ ಜನತೆ ಜಿಎಚ್ಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಬಹುಮತದೊಂದಿಗೆ ಆಶೀರ್ವದಿಸುತ್ತಾರೆ ಮತ್ತು ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಹಾದಿ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದರು.












Click it and Unblock the Notifications