ಕಾಮುಕರಿಗೆ ಸಿಕ್ಕಿ ಬೂದಿಯಾದ ಪ್ರಿಯಾಂಕಾಗೆ ಟ್ವಿಟ್ಟರ್ನಲ್ಲಿ ಕಣ್ಣೀರ ಕೋಡಿ
ಹೈದರಾಬಾದ್, ನವೆಂಬರ್ 29: ಕಾಮುಕರ ಕೈಗೆ ಸಿಕ್ಕಿ ಬೂದಿಯಾದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಕುರಿತು ಟ್ವಿಟ್ಟರ್ನಲ್ಲಿ ಕಣ್ಣೀರ ಕೋಡಿಯೇ ಹರಿದಿದೆ.
ನಿರ್ಭಯಾ, ಹ್ಯಾಷ್ಟ್ಯಾಗ್ ಪ್ರಿಯಾಂಕಾ ರೆಡ್ಡಿ ಎನ್ನುವುದು ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.ಕೆಲಸದ ನಿಮಿತ್ತ ಸ್ಕೂಟಿಯಲ್ಲಿ ತೆರಳಿದವಳು ಮರಳಿ ಮನೆಗೆ ಬಾರಲೇ ಇಲ್ಲ, ಪೋಷಕರ ಆಕ್ರಂದನ ಒಂದೆಡೆ ಮುಗಿಲುಮುಟ್ಟಿದೆ ಇನ್ನೊಂದೆಡೆ ದೇಶದ ಜನತೆ ಆಕ್ರೋಶ ಭರಿತ ಕಣ್ಣೀರು ಹರಿಸಿದೆ.
ಮರುದಿನ ಬೆಳಗ್ಗೆ ಸುಟ್ಟ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಪ್ರಿಯಾಂಕಾ ರೆಡ್ಡಿ ಕೊನೆಯ ಬಾರಿಗೆ ಕರೆ ಮಾಡಿದ್ದು ತನ್ನ ಸೋದರಿ ಭವ್ಯಗೆ. ಫೋನ್ ನಲ್ಲಿ ಮಾತನಾಡುವಾಗ ಪ್ರಿಯಾಂಕಾ, ನನ್ನನ್ನು ಯಾರೋ ಅಪರಿಚಿತ ವ್ಯಕ್ತಿಗಳು ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು ಸ್ಕೂಟರ್ ನ ಟೈರ್ ಪಂಕ್ಚರ್ ಆಗಿ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂದಿದ್ದಾರೆ.
ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ
ಸೋದರಿ ಭವ್ಯ ಜೊತೆ ಪ್ರಿಯಾಂಕಾ ಕೊನೆ ಬಾರಿಗೆ 6 ನಿಮಿಷ 45 ಸೆಕೆಂಡ್ ಮಾತನಾಡಿದ್ದಾರೆ. ಆಗ ಸಹಜವಾಗಿಯೇ ಮಾತನಾಡಿದ್ದರಂತೆ. ಸಹಾಯಕ್ಕೆ ಬಂದ ವ್ಯಕ್ತಿಗಳನ್ನು ನೋಡುವಾಗ ಭಯವಾಗುತ್ತಿದೆ ಎಂದು ಮಾತ್ರ ಹೇಳಿದ್ದರಂತೆ.
ಮಹಿಳೆಯ ಮೇಲೆ ದೌರ್ಜನ್ಯ ಯಾವಾಗ ನಿಲ್ಲುತ್ತೆ?
ಮಹಿಳೆ ಮೇಲೆ ಈ ಅತ್ಯಾಚಾರ, ದೌರ್ಜನ್ಯಗಳು ಯಾವಾಗ ನಿಲ್ಲುತ್ತೆ ಇದಕ್ಕೆ ಕೊನೆ ಎಲ್ಲಿ, ಇಂತಹ ಘಟನೆಗಳು ಸಮಾಜಕ್ಕೆ ಒಂದು ಕಪ್ಪುಚುಕ್ಕಿ ಇದ್ದಂತೆ , ಈ ಸಮಾಜದಲ್ಲಿರುವ ಈ ಕಾಮಪಿಶಾಚಿಗಳಿಗೆ ನನ್ನ ಧಿಕ್ಕಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ
ಡಾ. ಪ್ರಿಯಾಂಕಾ ರೆಡ್ಡಿಯವರ ಸುಟ್ಟುಕರಕಲಾದ ದೇಹ ಹೈದರಾಬಾದಿನ ಹೊರವಲಯದಲ್ಲಿ ಪತ್ತೆಯಾಗಿದೆ. ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಇದು ನನ್ನ ಮಾತ್ರವಲ್ಲ ಅವರ ಕುಟುಂಬದವರ ಒತ್ತಾಯಮಾತ್ರವಲ್ಲ ಇಡೀ ದೇಶದ ಜನತೆಯ ಒತ್ತಾಯವಾಗಿದೆ ಎಂದು ಪಟೇಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?
ಪ್ರಿಯಾಂಕಾ ಕೊಲೆಗೆ ಧರ್ಮದ ಬಣ್ಣ ಬಳಿಯುವುದು ಬೇಡ
ಪ್ರಿಯಾಂಕಾ ರೆಡ್ಡಿ ಅವರ ಹತ್ಯೆ ಅತೀವ ನೋವುಂಟು ಮಾಡಿದೆ, ಆದರೆ ಅದಕ್ಕೆಧರ್ಮದ ಬಣ್ಣ ಬಳಿಯುವುದು ಬೇಡ, ಪ್ರಿಯಾಂಕಾ ಅವರನ್ನು ಕೊಲೆ ಮಾಡಿದ್ದು ಯಾರೆಂದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ, ಆದರೆ ಯಾವುದೋ ಮುಸಲ್ಮಾನನೇ ಮಾಡಿರಬಹುದು ಎಂದು ಹೇಳುವುದು ತಪ್ಪು ಎಂದು ಸುಹೇಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಪುರುಷರಿಗೆ ಪಾಠ ಮಾಡುವವರ್ಯಾರು?
ಪ್ರಿಯಾಂಕಾ ರೆಡ್ಡಿ ಸಾವು ನೋವು ತಂದಿದೆ, ನಮ್ಮ ಸಮಾಜದಲ್ಲಿ ಇಂತಹ ಕ್ರೂರ ಜನರು ಇರುತ್ತಾರೆ ಎಂದರೆ ಅದನ್ನು ಅರಿಗಿಸಿಕೊಳ್ಳುವುದು ಕಷ್ಟ. ಮಹಿಳೆಯರಿಗೆ ಗೌರವ ನೀಡುವಂತೆ ಪುರುಷರಿಗೆ ಪಾಠ ಮಾಡುವವರು ಯಾರು, ಮಹಿಳೆಯರೂ ಕೂಡ ನಮ್ಮಂತೆಯೇ, ಅವರಿಗೂ ಅವರದ್ದೇ ಆದ ಭಾವನೆಗಳಿರುತ್ತವೆ ಎಂದು ಅರ್ಥ ಮಾಡಿಸುವವರು ಯಾರು ಎಂದು ರಾಮ್ ಮೋಹನ್ ನಾಯ್ಡು ಪ್ರಶ್ನಿಸಿದ್ದಾರೆ.