ತೆಲಂಗಾಣ ಅತ್ಯಾಚಾರ: ಆರೋಪಿಗಳಿಗೆ ಜೈಲಲ್ಲಿ ಮಟನ್ ಕರಿ ಭೋಜನ
ಹೈದರಾಬಾದ್, ಡಿಸೆಂಬರ್ 2: ಹೊಂಚು ಹಾಕಿ ಅತ್ಯಾಚಾರ ಎಸಗಿ, ಯುವತಿಯನ್ನು ಬರ್ಬರವಾಗಿ ಕೊಂದು, ಆಕೆಯನ್ನು ಸುಟ್ಟುಹಾಕಿದ ಹೇಯ ಕೃತ್ಯ ಎಸಗಿದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಅವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು ಎಂದು ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಪಶುವೈದ್ಯೆ 'ದಿಶಾ' ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಡೀ ದೇಶ ಮಮ್ಮಲ ಮರುಗಿದೆ. ಪ್ರಕರಣದ ನಾಲ್ವರು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿನಲ್ಲಿರಿಸಲಾಗಿದೆ. ದುಷ್ಕರ್ಮಿಗಳನ್ನು ನಮಗೆ ಒಪ್ಪಿಸಿ ನಾವೇ ಶಿಕ್ಷೆ ವಿಧಿಸುತ್ತೇವೆ ಎಂದು ಹೊರಗೆ ನೆರೆದಿದ್ದ ಜನರು ತೀವ್ರ ಆಕ್ರೋಶದಿಂದ ಕೂಗುತ್ತಿದ್ದರೆ, ಜೈಲಿನ ಒಳಗೆ ಕುಳಿತಿದ್ದ ಆರೋಪಿಗಳು ಭರ್ಜರಿ ಭೋಜನ ಸವಿಯುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಮುಗ್ಧ ವೈದ್ಯೆಯ ಬದುಕನ್ನು ಸುಟ್ಟ ಪಾತಕಿಗಳಿಗೆ ಪೊಲೀಸರು ರಾಜಾಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳಿಗೆ ಪುಷ್ಕಳ ಊಟ ತಿಂಡಿ ನೀಡುವ ಮೂಲಕ ಅತಿಥಿ ಸತ್ಕಾರ ಮಾಡುತ್ತಿದ್ದಾರೆ. ಅತ್ಯಾಚಾರಿಗಳನ್ನು ಶಿಕ್ಷಿಸಬೇಕು ಎಂಬ ಆಗ್ರಹದ ಬೆನ್ನಲ್ಲೇ ಅವರನ್ನು ಆದರಿಸಿರುವ ರೀತಿ ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾತ್ರಿ ಮಟನ್ ಕರಿ ಊಟ
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಚೆರಪಲ್ಲಿಯ ಭಾರಿ ಭದ್ರತೆಯ ಜೈಲಿನಲ್ಲಿ ಭಾನುವಾರ ಮಧ್ಯಾಹ್ನ ದಾಲ್-ಅನ್ನದ ಊಟ ನೀಡಲಾಗಿದೆ. ರಾತ್ರಿ ವೇಳೆ ಮಟನ್ ಕರಿಯ ಭರ್ಜರಿ ಊಟ ನೀಡಲಾಗಿದೆ ಎಂದು 'ಆಜ್ತಕ್' ವರದಿ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಪೊಲೀಸರ ಕಾರ್ಯವೈಖರಿಗೆ ಆಕ್ರೋಶ
ಈ ಪ್ರಕರಣದಲ್ಲಿ ಸುಮಾರು ಹತ್ತು ತಂಡ ರಚಿಸಿದ ಪೊಲೀಸರು 24 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ಬಗೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳುವುದರಲ್ಲಿ ವಿಳಂಬ ಮಾಡಿದ್ದು, ಪೋಷಕರು ದೂರು ನೀಡಿದಾಗ ನಿರ್ಲಕ್ಷ್ಯದಿಂದ ಮಾತನಾಡಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜತೆಗೆ ಪೊಲೀಸರು ಮತ್ತು ಸಾರಿಗೆ ಇಲಾಖೆಯ ವೈಫಲ್ಯಗಳು ಒಂದೊಂದೇ ಹೊರಬೀಳುತ್ತಿವೆ.

ಕರ್ನಾಟಕದಿಂದ ಇಟ್ಟಿಗೆ
ಆರೋಪಿಗಳು ಪರವಾನಗಿ ಇಲ್ಲದ ಟ್ರಕ್ಅನ್ನು ಎರಡು ವರ್ಷಗಳಿಂದ ಓಡಿಸುತ್ತಿದ್ದರು. ಕರ್ನಾಟಕದ ಗಂಗಾವತಿಯಿಂದ ಹೈದರಾಬಾದ್ಗೆ ಒಮ್ಮೆ ಟ್ರಕ್ನ ಮಿತಿಗಿಂತಲೂ ಅಧಿಕ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ವೇಳೆ ಮೊಹಮ್ಮದ್ ಆರೀಫ್ನನ್ನು ಆರ್ಟಿಓ ಅಧಿಕಾರಿಗಳು ತಡೆದಿದ್ದರು. 2017ರಿಂದಲೂ ಆರೀಫ್ ಯಾವುದೇ ದಾಖಲೆಗಳಿಲ್ಲದೆ ಟ್ರಕ್ ಓಡಿಸುತ್ತಿದ್ದ ಎಂಬುದು ಆಗಲೇ ತಿಳಿದಿತ್ತು.

ಮಾಲೀಕನ ವಿರುದ್ಧ ಕ್ರಮ
ಆರಂಭದಲ್ಲಿ ಆರೀಫ್ ಚಾಲನೆ ಮಾಡುತ್ತಿದ್ದ ಟ್ರಕ್ಅನ್ನು ಸೀಜ್ ಮಾಡಲು ಆರ್ಟಿಓ ಅಧಿಕಾರಿಗಳು ನಿರ್ಧರಿಸಿದ್ದರಾದರೂ ಬಳಿಕ ಬಿಟ್ಟು ಕಳುಹಿಸಿದ್ದರು. ಪರವಾನಗಿ ನವೀಕರಣ ಮಾಡಿಸುವುದಾಗಿ ಆರೀಫ್ ಭರವಸೆ ನೀಡಿದ್ದ. ಆದರೆ ಪರವಾನಗಿ ನವೀಕರಣ ಮಾಡಿರಲಿಲ್ಲ. ಟ್ರಕ್ ಮಾಲೀಕರಾದ ಶಂಷಾಬಾದ್ ನಿವಾಸಿ ಶ್ರೀನಿವಾಸ ರೆಡ್ಡಿ ಅವರ ಸೂಚನೆಯಂತೆ ಆರೀಫ್ ನಡೆದುಕೊಂಡಿದ್ದ. ಈಗ ಪೊಲೀಸರು ಈ ಕುರಿತು ಶ್ರೀನಿವಾಸ ರೆಡ್ಡಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications