ಸಮಾವೇಶ ರದ್ದುಗೊಳಿಸಲು 25 ಲಕ್ಷ ಆಫರ್: ಕಾಂಗ್ರೆಸ್ ವಿರುದ್ಧ ಓವೈಸಿ ಆರೋಪ
ಹೈದರಾಬಾದ್, ನವೆಂಬರ್ 20: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಯೋಜಿಸಿದ ಸಮಾವೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ತಮಗೆ 25 ಲಕ್ಷ ರೂ.ಗಳ ಆಫರ್ ನೀಡಿತ್ತು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಆರೋಪಿಸಿದ್ದಾರೆ.
ಈ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಆದರೆ, ಇದಕ್ಕೆ ತಮ್ಮ ಬಳಿ ಧ್ವನಿ ಮುದ್ರಣದ ಪುರಾವೆ ಇದೆ ಎಂದು ಓವೈಸಿ ಹೇಳಿಕೊಂಡಿದ್ದಾರೆ.
ನಿರ್ಮಲ್ದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, 'ನಾವು ನಮ್ಮ ಸಮಾವೇಶವನ್ನು ರದ್ದುಗೊಳಿಸಿದರೆ ಪಕ್ಷಕ್ಕೆ ದೇಣಿಗೆಯಾಗಿ 25 ಲಕ್ಷ ರೂ.ಗಳನ್ನು ನೀಡುವುದಾಗಿ ಆಹ್ವಾನ ನೀಡಿದ್ದರು. ಅಂತಹ ಕೆಲಸ ಮಾಡುವ ಪಕ್ಷವನ್ನು ಏನೆಂದು ಕರೆಯುತ್ತೀರಿ?' ಎಂದಿದ್ದಾರೆ.

ಈ ಆಹ್ವಾನವೇ ಆ ಪಕ್ಷದ ಸೊಕ್ಕನ್ನು ತೋರಿಸುತ್ತದೆ. ಅದನ್ನು ಯಾರಾದರೂ ನಿರಾಕರಿಸಿದರೆ ನಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದಾರೆ.
'ಓವೈಸಿ ಬೇಕಾದರೆ ತಮ್ಮ ಜೀವ ತ್ಯಾಗ ಮಾಡುತ್ತಾರೆಯೇ ಹೊರತು, ಅವರ ಭರವಸೆಗಳನ್ನು ಮಾರುವುದಿಲ್ಲ. ಅವನ್ನು ಯಾರೂ ಕೊಳ್ಳಲು ಸಾಧ್ಯವಿಲ್ಲ' ಎಂದು ಅವರು ಹೇಳಿಕೊಂಡರು.
'ಓವೈಸಿ ಬಳಿ ಯಾವುದೇ ಪುರಾವೆಯಿಲ್ಲ. ಅದು ಸುಳ್ಳಾಗಿರುವುದರಿಂದ ಸಾಕ್ಷ್ಯದ ಅಗತ್ಯವಿದೆ. ಓವೈಸಿ ಯಾವುದೇ ವಿಚಾರದ ಬಗ್ಗೆ ಮಾತನಾಡಿದರೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ. ಬಿಜೆಪಿಯ ಜತೆಗೆ ಇರುವವರ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡಲು ಪ್ರಯತ್ನಿಸಬೇಕು? ತೆಲಂಗಾಣದಲ್ಲಿ ಕಾಂಗ್ರೆಸ್ ಶಕ್ತಿಯುತ ಪಕ್ಷವಾಗಿ ಬೆಳೆದಿದೆ. ಹೀಗಾಗಿ ಅವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಹೇಳಿದ್ದಾರೆ.












Click it and Unblock the Notifications