ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಆಘಾತ: ಹಿರಿಯ ಮುಖಂಡ ರಾಜೀನಾಮೆ
ಹೈದರಾಬಾದ್, ಡಿಸೆಂಬರ್ 7: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಕಾಂಗ್ರೆಸ್ಗೆ ತೆಲಂಗಾಣದಲ್ಲಿ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ಪಕ್ಷದಲ್ಲಿದ್ದ ಹಿರಿಯ ಮುಖಂಡ ಗುಡೂರ್ ನಾರಾಯಣ ರೆಡ್ಡಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿಯ ಸದಸ್ಯ ಮತ್ತು ತೆಲಂಗಾಣ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿದ್ದ ನಾರಾಯಣ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾರಾಯಣ ರೆಡ್ಡಿ ಅವರ ರಾಜೀನಾಮೆ ತೆಲಂಗಾಣ ಕಾಂಗ್ರೆಸ್ಗೆ ಮತ್ತೊಂದು ಹೊಡೆತವಾಗಿದೆ. ತಮ್ಮ ರಾಜೀನಾಮೆ ಕುರಿತು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. 1981ರಿಂದ ವಿದ್ಯಾರ್ಥಿ ದಿನಗಳಿಂದ ಇದುವರೆಗೂ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿರುವ ನಾರಾಯಣ ರೆಡ್ಡಿ, ಟಿಪಿಸಿಸಿ ಖಜಾಂಚಿ, ಎಐಸಿಸಿ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿಯನ್ನು ತಡೆಯುವುದು ಹೇಗೆಂದು ಇಡೀ ದೇಶಕ್ಕೆ ತೋರಿಸಿ ಕೊಟ್ಟಿದ್ದೇವೆ: ಟಿಆರ್ಎಸ್
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 150 ವಾರ್ಡ್ಗಳಲ್ಲಿ ಕಾಂಗ್ರೆಸ್ ಕೇವಲ ಎರಡು ಸೀಟುಗಳನ್ನು ಗೆದ್ದುಕೊಂಡ ಕೆಲವು ದಿನದಲ್ಲಿಯೇ ಕಾಂಗ್ರೆಸ್ಗೆ ಈ ಆಘಾತ ಎದುರಾಗಿದೆ. ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವಷ್ಟು ಸೀಟುಗಳನ್ನು ಪಡೆಯದಿದ್ದರೂ, ಬಿಜೆಪಿ ಅಮೋಘ ಸಾಧನೆ ತೋರಿಸಿದೆ.
ಕಳೆದ ಬಾರಿ (2016) ಜಿಎಚ್ಎಂಸಿ ಚುನಾವಣೆಯಲ್ಲಿ ಕೇವಲ ನಾಲ್ಕು ಸೀಟುಗಳಲ್ಲಿ ಜಯಗಳಿಸಿದ್ದ ಬಿಜೆಪಿ, ಈ ಬಾರಿ 48 ಸೀಟುಗಳಲ್ಲಿ ಜಯಗಳಿಸಿದೆ. ಇನ್ನು 99 ವಾರ್ಡ್ಗಳಲ್ಲಿ ಗೆದ್ದು ಬೀಗಿದ್ದ ಆಡಳಿತಾರೂಢ ಟಿಆರ್ಎಸ್ ಭಾರಿ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಂಡಿದ್ದು, ಕೇವಲ 55 ಸ್ಥಾನಗಳಲ್ಲಿ ಜಯಗಳಿಸಿದೆ. ಇದರಿಂದ ಮ್ಯಾಜಿಕ್ ಸಂಖ್ಯೆ 65ನ್ನು ತಲುಪುವುದು ಅದಕ್ಕೆ ಸಾಧ್ಯವಾಗಿಲ್ಲ.
GHMC Polls: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬಿಜೆಪಿ
2023ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಪಕ್ಷವನ್ನು ಬಲಪಡಿಸುವತ್ತ ಬಿಜೆಪಿ ಕಣ್ಣಿಟ್ಟಿದೆ. ಹೀಗಾಗಿ ತೆಲಂಗಾಣದ ವಿವಿಧ ಪಕ್ಷಗಳ ಪ್ರಬಲ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳುವುದು ಅದರ ಗುರಿಯಾಗಿದೆ. ಅದರ ಮತ್ತೊಂದು ಹೆಜ್ಜೆಯಾಗಿ ನಾರಾಯಣ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.