ತೆಲಂಗಾಣ ಸಿಎಂ ಕೆಸಿಆರ್ 'ಬಾಹುಬಲಿ ಮುಹೂರ್ತ'ದಲ್ಲಿ ಅಧಿಕಾರ ಸ್ವೀಕಾರ
ಹೈದರಾಬಾದ್, ಡಿಸೆಂಬರ್ 13: ತೆಲಂಗಾಣದಲ್ಲಿ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರಿಗೆ ದೈವ ನಂಬಿಕೆಗಳು ವಿಪರೀತ. ವಾಸ್ತು, ಜ್ಯೋತಿಷ್ಯ ಇತ್ಯಾದಿ ವಿಚಾರಗಳಲ್ಲಿ ಅವರ ನಂಬಿಕೆಯು ಜನರ ಟೀಕೆಗೆ ಗುರಿ ಆಗುವಷ್ಟರ ಮಟ್ಟಿಗೆ ಪ್ರಚಾರ ಪಡೆದಿವೆ. ಆದರೆ ಇಂಥ ಯಾವ ಮಾತಿಗೂ ಜಗ್ಗುವ ಆಸಾಮಿ ಅವರಲ್ಲ.
ಇದಕ್ಕೆ ತಾಜಾ ಉದಾಹರಣೆ ಅಂದರೆ, ಗುರುವಾರದಂದು ಮಧ್ಯಾಹ್ನ 1.25ಕ್ಕೆ ಸರಿಯಾಗಿ ಅಧಿಕಾರ ಸ್ವೀಕಾರ ಪ್ರಮಾಣ ತೆಗೆದುಕೊಂಡಿದ್ದಾರೆ. ಈ ಮುಹೂರ್ತವನ್ನು ನಿಗದಿ ಮಾಡಿಕೊಟ್ಟಿರುವವರು ಭೊಂಗಿರ್ ಜಿಲ್ಲೆಯ ಯಾದಗಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ವೇದ ಪಂಡಿತರು. ಈ ಸ್ಥಳವು ತೆಲಂಗಾಣದಲ್ಲಿರುವ ಪ್ರಖ್ಯಾತವಾದ ತೀರ್ಥ ಕ್ಷೇತ್ರ.
ವ್ಯಕ್ತಿಚಿತ್ರ : ತೆಲಂಗಾಣ ಸಿಎಂ ಹೋರಾಟಗಾರ ಕೆ ಚಂದ್ರಶೇಖರ ರಾವ್
ಮುಹೂರ್ತ ನಿಗದಿ ಮಾಡಿರುವ ಪಂಡಿತರ ಪ್ರಕಾರ ಕೆ.ಚಂದ್ರಶೇಖರ್ ರಾವ್ ಅವರು 'ಬಾಹುಬಲಿ ಮುಹೂರ್ತ'ದಲ್ಲಿ ಪದವಿ ಪ್ರಮಾಣ ಸ್ವೀಕರಿಸಿದ್ದಾರಂತೆ. ಹಿಂದೂ ಪದ್ಧತಿಗಳ ಬಗ್ಗೆ ಬಹಳ ನಂಬಿಕೆ ಇರುವ ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರು ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದ ಮೊಹಮ್ಮದ್ ಮಹಮೂದ್ ಅಲಿ ಅವರು ಕೆಸಿಆರ್ ಜತೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾರ್ಗಶಿರ ಷಷ್ಠಿ, ಗುರುವಾರ ಮಧ್ಯಾಹ್ನ 1.25ಕ್ಕೆ ಮುಹೂರ್ತ
64 ವರ್ಷದ ಕೆ ಚಂದ್ರ ಶೇಖರ್ ರಾವ್ ಅವರು ತೆಲುಗಿನಲ್ಲೂ ಅಲಿ ಉರ್ದುವಿನಲ್ಲೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಸೆಂಬರ್ ಹದಿನೆಂಟನೇ ತಾರೀಕು ಸಂಪುಟ ವಿಸ್ತರಣೆ ಆಗಲಿದೆ. ಯಾದಗಿರಿ ದೇವಸ್ಥಾನದ ಮುಖ್ಯ ಅರ್ಚಕರಾದ ಲಕ್ಷ್ಮೀ ನರಸಿಂಹಾಚಾರ್ಯ ಮಾತನಾಡಿ, ಮಾರ್ಗಶಿರ ಮಾಸದ ಷಷ್ಠಿ, ಗುರುವಾರದಂದು ಪ್ರಶಸ್ತವಾದ ಮುಹೂರ್ತದಲ್ಲಿ ಚಂದ್ರಶೇಖರ್ ರಾವ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದಿದ್ದಾರೆ.
ಅಡೆತಡೆಗಳಿಲ್ಲದೆ ರಾಜ್ಯಭಾರ ನಡೆಸಲು ಅನುಕೂಲ
1.24ರಿಂದ ಒಂದೂವರೆ ಗಂಟೆಗಳ ಕಾಲ ಶುಭ ಮುಹೂರ್ತ ಮುಂದುವರಿಯಲಿದೆ. ಆದ್ದರಿಂದಲೇ ಆ ಸಮಯವನ್ನು ನಿಗದಿ ಪಡಿಸಲಾಯಿತು. ಈ ಮುಹೂರ್ತವು 'ರಾಜ ಯೋಗ'ವನ್ನು ನೀಡುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ತೆಲಂಗಾಣದಲ್ಲಿ ರಾಜ್ಯಭಾರ ನಡೆಸುವುದಕ್ಕೆ ಚಂದ್ರಶೇಖರ್ ರಾವ್ ಅವರಿಗೆ ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್
ಗ್ರಹಗಳು ಉಚ್ಚ ಸ್ಥಿತಿಯಲ್ಲಿ ಇವೆ
"ಮುಹೂರ್ತ ನಿಗದಿ ಪಡಿಸಿದ ಅವಧಿಯಲ್ಲಿ ಎಲ್ಲ ಗ್ರಹಗಳು ಉಚ್ಚ ಸ್ಥಿತಿಯಲ್ಲಿದ್ದವು. ಆದ್ದರಿಂದ ಕೆಸಿಆರ್ ಅವರಿಗೆ ಏನು ಮಾಡಿದರೂ ಅದೃಷ್ಟ ತರುತ್ತದೆ ಎಂದು ನರಸಿಂಹಾಚಾರ್ಯ ಭವಿಷ್ಯ ನುಡಿದಿದ್ದಾರೆ. ತೀರಾ ಇತ್ತೀಚೆಗೆ ರಚನೆಯಾದ ತೆಲಂಗಾಣ ರಾಜ್ಯದಲ್ಲಿ ಒಟ್ಟು 119 ವಿಧಾನಸಭಾ ಸ್ಥಾನಗಳಿದ್ದು, ಆ ಪೈಕಿ 88ರಲ್ಲಿ ಟಿಆರ್ ಎಸ್ ಅದ್ಭುತ ಜಯ ದಾಖಲಿಸಿದೆ.
ತೆಲಂಗಾಣದಲ್ಲಿ ಯಾರಿಗೆಷ್ಟು ಸ್ಥಾನ?
ಕಾಂಗ್ರೆಸ್, ತೆಲುಗು ದೇಶಂ ಪಾರ್ಟಿ (ಟಿಡಿಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಹಾಗೂ ತೆಲಂಗಾಣ ಜನ ಸಮಿತಿ (ಟಿಜೆಎಸ್) ಸೇರಿ ಮಹಾ ಮೈತ್ರಿ ಕೂಟವನ್ನು ರಚಿಸಿಕೊಂಡು ಸ್ಪರ್ಧೆಗೆ ಇಳಿದಿದ್ದವು. ಅವುಗಳಿಗೆ 21 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದಿದ್ದರೆ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆದ್ದಿದ್ದಾರೆ.