1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಟಿಆರ್ಎಸ್ ಅಭ್ಯರ್ಥಿ
ಹೈದರಾಬಾದ್, ಡಿಸೆಂಬರ್ 11 : ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ಎಸ್ ಸ್ಪಷ್ಟ ಬಹುಮತ ಪಡೆದಿದೆ. ಚುನಾವಣಾ ಕಣದಲ್ಲಿ ಹರೀಶ್ ರಾವ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಗೆಲುವು ದಾಖಲಿಸಿದ್ದಾರೆ.
ಸಿದ್ದಿಪೇಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನೀರಾವರಿ ಸಚಿವ ಹರೀಶ್ ರಾವ್ ಅವರು ಟಿಜೆಎಸ್ ಅಭ್ಯರ್ಥಿ ಮರಿಕಂಟಿ ಭವಾನಿ ರೆಡ್ಡಿ ವಿರುದ್ಧ 106816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರು ದಾಖಲೆ ಮಾಡಿದ್ದಾರೆ.
2004ರಲ್ಲಿ ಮೊದಲ ಬಾರಿಗೆ ಹರೀಶ್ ರಾವ್ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಟಿಆರ್ಎಸ್ ಸರ್ಕಾರದಲ್ಲಿ ಅವರು ಪುನಃ ಸಚಿವರಾಗುವುದು ಖಚಿತವಾಗಿದೆ.

ಚಾರ್ಮಿನಾರ್ ಕ್ಷೇತ್ರದಲ್ಲಿ ಎಂಐಎಂ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹರೀಶ್ ರಾವ್ ಅವರು ಈ ದಾಖಲೆಯನ್ನು ಮುರಿದಿದ್ದಾರೆ.
ಸಿದ್ದಿಪೇಟೆ ಕ್ಷೇತ್ರ ಟಿಆರ್ಎಸ್ ಭದ್ರಕೋಟೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಯಾದ ಶೇ 80ಕ್ಕೂ ಅಧಿಕ ಮತಗಳು ಹರೀಶ್ ರಾವ್ ಅವರಿಗೆ ಸಿಕ್ಕಿವೆ.
2004ರ ಉಪ ಚುನಾವಣೆಯಲ್ಲಿ 25 ಸಾವಿರ, 2008ರ ಉಪ ಚುನಾವಣೆಯಲ್ಲಿ 58 ಸಾವಿರ, 2010ರ ಉಪ ಚುನಾವಣೆಯಲ್ಲಿ 93 ಸಾವಿರ ಮತಗಳ ಅಂತರದಿಂದ ಹರೀಶ್ ರಾವ್ ಅವರು ಗೆಲುವು ಸಾಧಿಸಿದ್ದರು. ಅವರ ಗೆಲುವಿನ ಅಂತರ ಹೆಚ್ಚಾಗುತ್ತಲೇ ಹೋಗುತ್ತಿದೆ.












Click it and Unblock the Notifications