ಸಾವಿರಾರು ಜನರು, ಪೊಲೀಸರ ಎದುರು ಕೊಡಲಿಯಿಂದ ಕಡಿದು ಕೊಂದ ಕೊಲೆಗಾರರು
ಹೈದರಾಬಾದ್, ಸೆಪ್ಟೆಂಬರ್ 26: ಇಲ್ಲಿನ ಜನನಿಬಿಡ ರಸ್ತೆಯಲ್ಲಿ, ಪೊಲೀಸರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ಕೊಡಲಿಯಲ್ಲಿ ಕೊಚ್ಚಿ ಕೊಂದ ಘಟನೆ ಬುಧವಾರ ನಡೆದಿದೆ. ಮೊಬೈಲ್ ನಲ್ಲಿ ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಇಬ್ಬರು ವ್ಯಕ್ತಿಗಳು ಸೇರಿ ರಾಜೇಂದ್ರನಗರದ ಬೀದಿಯಲ್ಲಿ ಒಬ್ಬನನ್ನು ಅಟ್ಟಾಡಿಸಿಕೊಂಡು ಬಂದು, ಪ್ರಜ್ಞೆ ತಪ್ಪಿ ನೆಲಕ್ಕೆ ಬೀಳುವವರೆಗೆ ಕತ್ತರಿಸಿದ್ದಾರೆ.
ಕೊಲೆಯಾದ ವ್ಯಕ್ತಿಗೆ ವಿಪರೀತ ರಕ್ತ ಹೋಗಿ, ಚಲನೆಯೇ ಇಲ್ಲದಂತೆ ಆದ ಮೇಲೆ ದಾಳಿಕೋರರಲ್ಲಿ ಒಬ್ಬನು ಕೈ ಮೇಲೆತ್ತಿ ವಿಜಯೋತ್ಸವ ಆಚರಿಸುವವನಂತೆ ತೋರಿಸಿ, ಅಲ್ಲಿಂದ ಹೊರಟಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕನಿಷ್ಠ ಮೂವರು ಪೊಲೀಸರು ಅಲ್ಲೇ ಇದ್ದರು. ಆದರೆ ಈ ಕೃತ್ಯ ತಡೆಯಲು ಏನೂ ಮಾಡಲಿಲ್ಲ.
ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕತ್ತರಿಸುವಾಗ ಪೊಲೀಸರು ಸುಮ್ಮನಿದ್ದರು ಎಂದು ಆರೋಪ ಕೇಳಿಬರುತ್ತಿದ್ದಂತೆ, ಇಬ್ಬರು ಪೊಲೀಸರು ತಮ್ಮ ಲಾಠಿ ತರಲು ಹೋಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ಕೊಲೆಯಾದ ದೃಶ್ಯ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೂವರು ಪೊಲೀಸರ ಪೈಕಿ ಒಬ್ಬರು ತಡೆಯಲು ಯತ್ನಿಸಿದ್ದಾರೆ. ನಂತರ ಅವರು ಕೂಡ ಸುಮ್ಮನಾಗಿದ್ದಾರೆ.

ಇನ್ನೂ ವಿಚಿತ್ರ ಏನೆಂದರೆ, ಅದೇ ರಸ್ತೆಯಲ್ಲಿ ಸೈಬರಾಬಾದ್ ಪೊಲೀಸ್ ವಾಹನ ಹೋಗಿದೆ. ಅಷ್ಟರಲ್ಲಾಗಲೇ ಜನರು ದೊಡ್ಡ ಮಟ್ಟದಲ್ಲಿ ಗುಂಪುಗೂಡಿದ್ದಾರೆ. ಆದರೂ ಆ ವಾಹನ ನಿಲ್ಲಿಸದೆ ಹಾಗೇ ಮುಂದೆ ಸಾಗಿದೆ. ಇನ್ನು ಕೊನೆಗೆ ದಾಳಿಕೋರರ ಪೈಕಿ ಒಬ್ಬ ತಾನು ತೊಟ್ಟಿದ್ದ ಹಳದಿ ಅಂಗಿಯ ಗುಂಡಿ ಹಾಕಿಕೊಂಡಿದ್ದು ಕಂಡುಬಂದಿದೆ.
ಈಗ ಕೊಲೆಯಾದ ವ್ಯಕ್ತಿ ಹೆಸರು ರಮೇಶ್. ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಕೊಲೆಯ ಆರೋಪಿ ಆತ. ಮಹೇಶ್ ಗೌಡ್ ಎಂಬಾತನನ್ನು ಕೊಲೆ ಮಾಡಿ, ಆತನ ಶವವನ್ನು ಸುಟ್ಟು, ದೇವಸ್ಥಾನದ ಬಳಿ ಬಿಸಾಡಲಾಗಿತ್ತು. ಆ ರಮೇಶ್ ಬುಧವಾರದಂದು ಕೋರ್ಟ್ ನಿಂದ ವಾಪಸಾಗುತ್ತಿದ್ದ. ಆ ವೇಳೆ ಮಹೇಶ್ ಗೌಡ್ ತಂದೆ ಕೃಷ್ಣ ಗೌಡ್ ಹಾಗೂ ಆತನ ಸಂಬಂಧಿ ಲಕ್ಷ್ಮಣ್ ಗೌಡ್ ಸೇರಿ ಕೊಡಲಿಯಿಂದ ರಮೇಶ್ ನನ್ನು ಕೊಂದಿದ್ದಾರೆ.












Click it and Unblock the Notifications